ಪದ್ಯ ೪೧: ಶಿಶುಪಾಲನು ಹೇಗೆ ಕೃತಾರ್ಥನಾಗಲು ಇಚ್ಛಿಸಿದನು?

ನುಡಿಗಳಲಿ ಸದ್ಧರ್ಮ ಸಂಗತಿ
ನಡವಳಿಯಲನ್ಯಾಯವೆಂದೇ
ಕೆಡಹಿದವು ಹಂಸೆಯನು ನಾನಾ ವಿಹಗ ಸಂದೋಹ
ನುಡಿವುದಲ್ಲದೆ ಮೇಣುನಯದಲಿ
ನಡೆದುದಿಲ್ಲೆಲೆ ಭೀಷ್ಮ ನಿನ್ನನು
ಕಡಿದು ಭೂತಕೆ ಬಡಿಸಿದರೆ ಕೃತಕೃತ್ಯನಹೆನೆಂದ (ಸಭಾ ಪರ್ವ, ೧೧ ಸಂಧಿ, ೪೧ ಪದ್ಯ)

ತಾತ್ಪರ್ಯ:
ಮಾನಸ ತೀರದ ಪಕ್ಷಿಗಳು, ಈ ಹಂಸವು ಮಾತಿನಲ್ಲಿ ಧರ್ಮವನ್ನು ಹೇಳುತ್ತದೆ, ನಡವಳಿಕೆಯೆಲ್ಲಾ ಅನ್ಯಾಯ ಎಂದು ಅದನ್ನು ಹೊಡೆದು ಕೆಡವಿದವು. ಭೀಷ್ಮ ನೀನು ಸಹ ಧರ್ಮವನ್ನು ಹೇಳುತ್ತಿರುವೆ, ಆದರೆ ಧರ್ಮಕ್ಕನುಸಾರವಾಗಿ ನಡೆಯಲಿಲ್ಲ. ನಿನ್ನನ್ನು ಕಡಿದು ಭೂತಗಳಿಗೆ ಬಲಿಕೊಟ್ಟರೆ ನಾನು ಕೃತಾರ್ಥನಾಗುತ್ತೇನೆ ಎಂದು ಶಿಶುಪಾಲನು ನುಡಿದನು.

ಅರ್ಥ:
ನುಡಿ: ಮಾತು; ಧರ್ಮ:ಧಾರಣೆ ಮಾಡಿದುದು; ಸಂಗತಿ: ವಿಚಾರ; ನಡವಳಿ: ಆಚರಣೆ; ಅನ್ಯಾಯ: ಯೋಗ್ಯವಲ್ಲದ, ಸರಿಯಲ್ಲದ; ಕೆಡಹು: ತಳ್ಳು; ಹಂಸ: ಒಂದು ಜಾತಿಯ ಪಕ್ಷಿ; ವಿಹಗ: ಪಕ್ಷಿ; ಸಂದೋಹ: ಗುಂಪು, ಸಮೂಹ; ಮೇಣ್: ಅಥವ; ನಯ: ನುಣುಪು, ಮೃದುತ್ವ; ನಡೆ: ನಡಿಗೆ; ಕಡಿ: ಸೀಳು; ಭೂತ: ದೆವ್ವ, ಪಿಶಾಚಿ; ಬಡಿಸು: ಉಣಿಸು, ಹಾಕು; ಕೃತಕೃತ್ಯ: ಕೃತಾರ್ಥ;

ಪದವಿಂಗಡಣೆ:
ನುಡಿಗಳಲಿ +ಸದ್ಧರ್ಮ +ಸಂಗತಿ
ನಡವಳಿಯಲ್+ಅನ್ಯಾಯವೆಂದೇ
ಕೆಡಹಿದವು+ ಹಂಸೆಯನು +ನಾನಾ +ವಿಹಗ +ಸಂದೋಹ
ನುಡಿವುದಲ್ಲದೆ +ಮೇಣು+ನಯದಲಿ
ನಡೆದುದಿಲ್+ಎಲೆ +ಭೀಷ್ಮ+ ನಿನ್ನನು
ಕಡಿದು+ ಭೂತಕೆ +ಬಡಿಸಿದರೆ+ ಕೃತಕೃತ್ಯನಹೆನೆಂದ

ಅಚ್ಚರಿ:
(೧) ನುಡಿ, ನಡೆ – ೧,೨,೪,೫ ಸಾಲಿನ ಮೊದಲ ಪದಗಳಾಗಿ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ