ಪದ್ಯ ೨೪: ಭೀಮನು ತನ್ನ ಸಚಿವನಿಗೆ ಏನು ಹೇಳಿದ?

ಸೆರಗ ಸಂವರಿಸಿದನು ಮಕುಟವ
ನುರುಗದಂತಿರೆ ಮುರುಹಿ ಸಚಿವಂ
ಗರುಹಿದನು ಸನ್ನೆಯಲಿ ಸಮರಕೆ ಚಾಪಮಾರ್ಗಣವ
ಹೊರಗೆ ಸಂವರಿಸಿರಲಿ ದಳ ಕೈ
ಮರೆಯಬೇಡ ಸುನೀತನನು ನಾ
ವ್ತರುಬಿ ನಿಂದಾಕ್ಷಣದಲೊದಗುವುದೆಂದು ಸೂಚಿಸಿದ (ಸಭಾ ಪರ್ವ, ೧೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ಭೀಮನು ತನ್ನ ಉತ್ತರೀಯವನ್ನು ಸರಿಪಡಿಸಿ, ತನ್ನ ಕಿರೀಟವನ್ನು ಬಾಗದಂತೆ ಸರಿಯಾಗಿಟ್ಟುಕೊಂಡು, ತನ್ನ ಸಚಿವನಿಗೆ ಸನ್ನೆ ಮಾಡಿ ಬಿಲ್ಲು ಬಾಣಗಳನ್ನು ತರಲು ಹೇಳಿದನು. ಸೈನ್ಯವು ಹೊರಗೆ ಸಿದ್ಧವಾಗಿರಲಿ, ನಾನು ಶಿಶುಪಾಲನನ್ನು ಸೋಲಿಸಿದೊಡನೆ ಸಹಾಯಕ್ಕೆ ಬರಲಿ ಎಂದು ಸೂಚಿಸಿದನು.

ಅರ್ಥ:
ಸೆರಗು: ಉತ್ತರೀಯ; ಸಂವರಿಸು: ಸರಿಪಡಿಸು; ಮಕುಟ: ಕಿರೀಟ; ಉರುಗು: ಬಾಗು, ಓರೆಯಾಗು; ಉರುಹು: ನೀಡು; ಸಚಿವ: ಮಂತ್ರಿ; ಅರುಹು: ಹೇಳಿ; ಸನ್ನೆ: ಸಂಜ್ಞೆ, ಸುಳಿವು; ಸಮರ: ಯುದ್ಧ; ಚಾಪ: ಬಿಲ್ಲು; ಮಾರ್ಗಣ: ಬಾಣ; ಹೊರಗೆ: ಆಚೆ; ಸಂವರಿಸು: ಸಜ್ಜು ಮಾಡು; ದಳ: ಸೈನ್ಯ; ಮರೆ: ಆಸರೆ, ಆಶ್ರಯ; ಸುನೀತ: ಶಿಶುಪಾಲ; ತರುಬು: ತಡೆ, ನಿಲ್ಲಿಸು; ಕ್ಷಣ: ಸಮಯ; ಒದಗು: ಲಭ್ಯ, ದೊರೆತುದು; ಸೂಚಿಸು: ತಿಳಿಸು;

ಪದವಿಂಗಡಣೆ:
ಸೆರಗ +ಸಂವರಿಸಿದನು+ ಮಕುಟವನ್
ಉರುಗದಂತಿರೆ +ಮುರುಹಿ +ಸಚಿವಂಗ್
ಅರುಹಿದನು +ಸನ್ನೆಯಲಿ +ಸಮರಕೆ+ ಚಾಪ+ಮಾರ್ಗಣವ
ಹೊರಗೆ +ಸಂವರಿಸಿರಲಿ +ದಳ+ ಕೈ
ಮರೆಯಬೇಡ+ ಸುನೀತನನು+ ನಾವ್
ತರುಬಿ +ನಿಂದ್+ಆ+ಕ್ಷಣದಲ್+ಒದಗುವುದೆಂದು +ಸೂಚಿಸಿದ

ಅಚ್ಚರಿ:
(೧) ಮುರುಹಿ, ಅರುಹಿ – ಪ್ರಾಸ ಪದ
(೨) ಸ ಕಾರದ ತ್ರಿವಳಿ ಪದ – ಸಚಿವಂಗರುಹಿದನು ಸನ್ನೆಯಲಿ ಸಮರಕೆ
(೩) ಸಂವರಿಸು, ಸುನೀತ, ಸೂಚಿಸು – ಸ ಕಾರದ ಪದಗಳ ಬಳಕೆ
(೪) ಬಿಲ್ಲು ಬಾಣ ಎಂದು ಹೇಳಲು – ಚಾಪಮಾರ್ಗಣ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ