ಪದ್ಯ ೧೮: ಕಂಸನನ್ನು ಯಾರು ಕೊಂದರು?

ಆದರಿವನನು ತುತಿಸುವೊಡೆ ಮೇ
ಲಾದ ಕಷ್ಟವನೇನ ಹೇಳುವೆ
ನೀ ದುರಾತ್ಮಕ ಸಾಕಿದೊಡೆಯನನಿರಿದ ಸಬಳವಲೇ
ಸೋದರಿಯಲಾ ಕೃಷ್ಣನವ್ವೆ ವಿ
ವಾದವೇ ಸಾಕಿದನಲಾ ಕೈ
ಗಾದನೇ ಕಂಸಂಗೆ ಮುನಿವುದಿದಾವ ಘನವೆಂದ (ಸಭಾ ಪರ್ವ, ೧೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ಈ ಕೃಷ್ಣನನ್ನು ಹೊಗಳೋಣವೆಂದರೆ ಆಗ ಬರುವ ತೊಂದರೆಗಳನ್ನು ಏನೆಂದು ಹೇಳಲಿ, ಈ ದುಷ್ಟನು ಇವನನ್ನು ಸಾಕಿದ ಒಡೆಯನನ್ನು ಕೊಂದ ಈಟಿಯಂತಹವನು. ಕಂಸನು ಕೃಷ್ಣನ ಅಮ್ಮ ದೇವಕಿಯ ಅಣ್ಣನಲ್ಲವೇ? ಅವಳನ್ನು ಸಾಕಿದವ, ತಾಯಿಯನ್ನು ಸಾಕಿದವನೆಂದಾದರೂ ಸೋದರಮಾವ ಕಂಸನನ್ನು ಇವನು ಉಳಿಸಿದನೇ?

ಅರ್ಥ:
ತುತಿ: ಹೊಗಳಿಕೆ, ಸ್ತುತಿ; ಮೇಲಾದ: ಹಿಂದೆ ಹೇಳಿದ; ಕಷ್ಟ: ಬೇನೆ, ನೋವು, ತೊಂದರೆ; ಹೇಳು: ತಿಳಿಸು; ದುರಾತ್ಮ: ಕೆಟ್ಟವ; ಸಾಕು: ಸಲಹು; ಒಡೆಯ: ದೊರೆ; ಅರಿ: ತಿವಿ, ಸೀಳು; ಸಬಳ:ಈಟಿ, ಭರ್ಜಿ; ಸೋದರಿ: ತಂಗಿ; ಅವ್ವೆ: ತಾಯಿ; ವಿವಾದ: ವಾಗ್ದಾನ, ಚರ್ಚೆ, ಕಲಹ; ಸಾಕು: ಸಲಹು; ಮುನಿ: ಕೋಪ; ಘನ: ಶ್ರೇಷ್ಠ; ಕೈಗಾಯ್: ರಕ್ಷಿಸು;

ಪದವಿಂಗಡಣೆ:
ಆದರ್+ಇವನನು+ ತುತಿಸುವೊಡೆ +ಮೇ
ಲಾದ +ಕಷ್ಟವನ್+ಏನ +ಹೇಳುವೆನ್
ಈ +ದುರಾತ್ಮಕ +ಸಾಕಿದ್+ಒಡೆಯನನ್+ಇರಿದ+ ಸಬಳವಲೇ
ಸೋದರಿಯಲಾ+ ಕೃಷ್ಣನ್+ಅವ್ವೆ+ ವಿ
ವಾದವೇ +ಸಾಕಿದನಲಾ+ ಕೈ
ಗಾದನೇ +ಕಂಸಂಗೆ +ಮುನಿವುದ್+ಇದಾವ +ಘನವೆಂದ

ಅಚ್ಚರಿ:
(೧) ಕೃಷ್ಣನನ್ನು ಈಟಿಗೆ ಹೋಲಿಸುವ ಪರಿ – ದುರಾತ್ಮಕ ಸಾಕಿದೊಡೆಯನನಿರಿದ ಸಬಳವಲೇ

ನಿಮ್ಮ ಟಿಪ್ಪಣಿ ಬರೆಯಿರಿ