ಕಪಟದಲಿ ಭೀಮಾರ್ಜುನರು ಸಹಿ
ತುಪಚಿತ ದ್ವಿಜವೇಷದಲಿ ನಿ
ಷ್ಕಪಟ ಮಗಧನ ಮನೆಯನದ್ವಾರದಲಿ ಹೊಕ್ಕನಲಾ
ಕೃಪಣರಿವದಿರು ವಿಪ್ರವೇಷದ
ಲಪಸದರು ಕಾದಿದರು ಭೀಷ್ಮಗೆ
ಜಪವಲಾ ಕಂಸಾರಿ ಮಾಡಿದ ಕಷ್ಟ ಕೃತಿಯೆಂದ (ಸಭಾ ಪರ್ವ, ೧೧ ಸಂಧಿ, ೨೧ ಪದ್ಯ)
ತಾತ್ಪರ್ಯ:
ಈ ಕೃಷ್ಣನು ಭೀಮಾರ್ಜುನರೊಡನೆ ಪೂಜ್ಯ ಬ್ರಾಹ್ಮಣ ವೇಷ ಹಾಕಿಕೊಂಡು ಜರಾಸಂಧನ ಮನೆಯನ್ನು ಹಿಂಬಾಗಿಲಿನಿಂದ ಹೊಕ್ಕನು. ಈ ಮೂವರು ದುಷ್ಟರು ಯುದ್ಧಮಾಡಿದರು. ಕೃಷ್ಣನು ಮಾಡಿದ ಈ ದುಷ್ಕೃತ್ಯಗಳೆಲ್ಲಾ ಭೀಷ್ಮನಿಗೆ ಮಹಾ ಸತ್ಕೃತಿಗಳು, ಅವೇ ಇವನಿಗೆ ಜಪಮಾಲೆ ಎಂದು ಭೀಷ್ಮರನ್ನು ಹಂಗಿಸಿದನು.
ಅರ್ಥ:
ಕಪಟ: ಮೋಸ; ಉಪಚಿತ: ಗೌರವಿಸಲ್ಪಟ್ಟ; ದ್ವಿಜ: ಬ್ರಾಹ್ಮಣ; ವೇಷ: ರೂಪ; ನಿಷ್ಕಪಟ: ಮೋಸವರಿಯದ; ಮಗಧ: ಜರಾಸಂಧ; ಮನೆ: ಆಲಯ; ದ್ವಾರ: ಕದ, ಬಾಗಿಲು; ಹೊಕ್ಕು: ಸೇರಿ; ಕೃಪಣ: ದೀನ, ಜಿಪುಣ; ಅಪಸದ: ನೀಚ, ಕೀಳು; ಕಾದು: ಹೋರಾಡು; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ಕಂಸಾರಿ: ಕೃಷ್ಣ; ಕಷ್ಟ: ತೊಂದರೆ; ಕೃತಿ: ಕೆಲಸ, ಕಾರ್ಯ;
ಪದವಿಂಗಡಣೆ:
ಕಪಟದಲಿ +ಭೀಮಾರ್ಜುನರು +ಸಹಿತ್
ಉಪಚಿತ+ ದ್ವಿಜವೇಷದಲಿ +ನಿ
ಷ್ಕಪಟ +ಮಗಧನ+ ಮನೆಯನ್+ಅದ್ವಾರದಲಿ+ ಹೊಕ್ಕನಲಾ
ಕೃಪಣರ್+ಇವದಿರು +ವಿಪ್ರ+ವೇಷದಲ್
ಅಪಸದರು +ಕಾದಿದರು+ ಭೀಷ್ಮಗೆ
ಜಪವಲಾ +ಕಂಸಾರಿ +ಮಾಡಿದ +ಕಷ್ಟ +ಕೃತಿಯೆಂದ
ಅಚ್ಚರಿ:
(೧) ಬಯ್ಯುವ ಪರಿ – ಕೃಪಣ, ಅಪಸದ
(೨) ಹಿಂಬಾಗಿಲೆಂದು ಹೇಳಲು – ಅದ್ವಾರ ಪದದ ಬಳಕೆ
(೩) ಜರಾಸಂಧನ ಪರವಾಗಿ ನಿಲ್ಲುವ ಪರಿ – ನಿಷ್ಕಪಟ ಮಗಧ
(೪) ಜರಾಸಂಧನ ವಧೆಯ ಬಗ್ಗೆ ಹೇಳುವ ಪರಿ – ಕಷ್ಟ ಕೃತಿ
(೫) ವಿಪ್ರ, ದ್ವಿಜ – ಸಮನಾರ್ಥಕ ಪದ