ಪದ್ಯ ೬: ಧರ್ಮರಾಯನು ಭೀಷ್ಮಂಗೆ ಏನೆಂದು ಬಿನ್ನವಿಸಿದನು?

ಈಸು ಪೌರುಷ ದೈವಘಟನೆಯೊ
ಳೀಸು ಪರಿಯಂತಾಯ್ತು ಯಜ್ಞವು
ಮೀಸಲಳಿಯದೆ ನಡೆದುದಿನ್ನೆಗ ನಿಮ್ಮ ಕರುಣದಲಿ
ಈ ಸಮಸ್ತ ನೃಪಾಲಜನ ವಾ
ರಾಸಿ ಮೇರೆಯನೊದೆವುತಿದೆ ನಿಮ
ಗೇಸುಭಾರವಿದೆಂದು ಬಿನ್ನವಿಸಿದನು ಭೀಷ್ಮಂಗೆ (ಸಭಾ ಪರ್ವ, ೧೧ ಸಂಧಿ, ೬ ಪದ್ಯ)

ತಾತ್ಪರ್ಯ:
ಆಶ್ಚರ್ಯ ಚಕಿತನಾದ ಧರ್ಮರಾಯನು ಭೀಷರಿಗೆ, ಯಜ್ಞವು ನಿಮ್ಮ ಆಶೀರ್ವಾದದಿಮ್ದ ಸ್ವಲ್ಪವೂ ವ್ಯತ್ಯಾಸವಾಗದೆ ಇಷ್ಟುದಿನ ಸಾಂಗವಾಗಿ ನಡೆದಿದೆ, ಆದರೀಗ ದೈವವಶದಿಮ್ದ ಪೌರುಷ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ, ಈ ರಾಜ ಸಮೂಹ ಸಮುದ್ರವು ಮೇರೆ ತಪ್ಪುವುದರಲ್ಲಿದೆ ನಿಮ್ಮ ಮೇಲೆ ಎಂತಹ ಭಾರ ಬಿದ್ದಿತು ಎಂದು ಧರ್ಮನಂದನನು ಭೀಷಂಗೆ ಬಿನ್ನವಿಸಿದನು.

ಅರ್ಥ:
ಪೌರುಷ: ಪರಾಕ್ರಮ; ದೈವ: ಭಗವಂತ; ಘಟೆ: ಗುಂಪು; ಪರಿ: ರೀತಿ; ಯಜ್ಞ: ಯಾಗ; ಮೀಸಲು: ಮುಡಿಪು, ಪ್ರತ್ಯೇಕ; ನಡೆದುದು: ಆಚರಣೆ; ಕರುಣ: ದಯೆ; ಸಮಸ್ತ: ಎಲ್ಲಾ; ನೃಪಾಲ: ರಾಜ; ವಾರಾಸಿ: ಸಮುದ್ರ; ಮೇರೆ: ಎಲ್ಲೆ, ಗಡಿ; ಒದೆ: ತಳ್ಳು; ಭಾರ: ಹೊರೆ; ಬಿನ್ನಹ: ಕೋರಿಕೆ;

ಪದವಿಂಗಡಣೆ:
ಈಸು +ಪೌರುಷ +ದೈವ+ಘಟನೆಯೊಳ್
ಈಸು +ಪರಿಯಂತ್+ಆಯ್ತು +ಯಜ್ಞವು
ಮೀಸಲ್+ಅಳಿಯದೆ +ನಡೆದುದಿನ್ನೆಗ+ ನಿಮ್ಮ +ಕರುಣದಲಿ
ಈ +ಸಮಸ್ತ +ನೃಪಾಲಜನ +ವಾ
ರಾಸಿ +ಮೇರೆಯನ್+ಒದೆವುತಿದೆ +ನಿಮಗ್
ಏಸು+ಭಾರವಿದೆಂದು +ಬಿನ್ನವಿಸಿದನು +ಭೀಷ್ಮಂಗೆ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದಗಳು – ಭಾರವಿದೆಂದು ಬಿನ್ನವಿಸಿದನು ಭೀಷ್ಮಂಗೆ
(೨) ಬಹಳ ರಾಜರು ಎಂದು ಹೇಳಲು – ನೃಪಾಲಜನ ವಾರಾಸಿ ಮೇರೆಯನೊದೆವುತಿದೆ

ನಿಮ್ಮ ಟಿಪ್ಪಣಿ ಬರೆಯಿರಿ