ಪದ್ಯ ೬೨: ಶಿಶುಪಾಲನನ್ನು ಜಡಾತ್ಮನೆಂದು ಭೀಷ್ಮರು ಏಕೆ ಕರೆದರು?

ಇಂಗಿತಲರಿವುದು ಮಹಾತ್ಮರಿ
ಗಂಗವಿದು ಮಧ್ಯಮರು ಕರ್ಣಪ
ಥಂಗಳಲಿ ಗೋಚರಿಸಲರಿವುದು ಲೋಕವೃತ್ತಿಯಿದು
ಕಂಗಳಲಿ ಕಂಡರಿವರಧಮರು
ಕಂಗಳಲಿ ಕಿವಿಗಳಲಿ ಮೇಣ್ ಹರಿ
ಯಿಂಗಿತವನರಿಯದ ಜಡಾತ್ಮನು ಚೈದ್ಯನೃಪನೆಂದ (ಸಭಾ ಪರ್ವ, ೧೦ ಸಂಧಿ, ೬೨ ಪದ್ಯ)

ತಾತ್ಪರ್ಯ:
ಉತ್ತಮರಾದವರು ಆಶಯವನ್ನು ತಿಳಿದೇ ಕಾರ್ಯಪ್ರವೃತ್ತರಾಗುತ್ತಾರೆ, ಮಧ್ಯಮರು ಕೇಳಿ ತಿಳಿಯುತ್ತಾರೆ, ಅಧಮರು ಕಣ್ಣಿನಲ್ಲಿ ನೋಡಿ ತಿಳಿಯುತ್ತಾರೆ. ಈ ಶಿಶುಪಾಲನಾದರೋ ಕಣ್ಣಿನಿಂದ ನೋಡಿ, ಕಿವಿಯಿಂದ ಕೇಳಿ ಶ್ರೀಕೃಷ್ಣನ ಇಂಗಿತವನ್ನು ಅರಿಯದ ಜಡಾತ್ಮ ಎಂದು ಭೀಷ್ಮರು ಶಿಶುಪಾಲನನ್ನು ನಿಂದಿಸಿದರು.

ಅರ್ಥ:
ಇಂಗಿತ: ಆಶಯ, ಅಭಿಪ್ರಾಯ; ಅರಿ: ತಿಳಿ; ಮಹಾತ್ಮ: ಶ್ರೇಷ್ಠ; ಮಧ್ಯಮ: ತಾಮಸ ಜೀವಿ, ಸಾಧಾರಣವಾದ; ಕರ್ಣ: ಕಿವಿ; ಪಥ: ದಾರಿ; ಗೋಚರಿಸು: ತೋರು; ಲೋಕ: ಜಗತ್ತು; ವೃತ್ತಿ: ಸ್ಥಿತಿ, ನಡವಳಿಕೆ; ಕಂಗಳು: ನೇತ್ರ; ಕಂಡು: ನೋಡಿ; ಅರಿ: ತಿಳಿ; ಅಧಮ: ಕೀಳು, ನೀಚ; ಕಿವಿ: ಕರ್ಣ; ಮೇಣ್: ಅಥವ; ಹರಿ: ವಿಷ್ಣು; ಜಡ: ಅಚೇತನವಾದುದು, ಚಟುವಟಿಕೆಯಿಲ್ಲದ; ಚೈದ್ಯ: ಶಿಶುಪಾಲ; ನೃಪ: ರಾಜ;

ಪದವಿಂಗಡಣೆ:
ಇಂಗಿತಲ್+ಅರಿವುದು +ಮಹಾತ್ಮರಿಗ್
ಅಂಗವಿದು+ ಮಧ್ಯಮರು +ಕರ್ಣಪ
ಥಂಗಳಲಿ +ಗೋಚರಿಸಲ್+ಅರಿವುದು +ಲೋಕ+ವೃತ್ತಿಯಿದು
ಕಂಗಳಲಿ +ಕಂಡ್+ಅರಿವರ್+ಅಧಮರು
ಕಂಗಳಲಿ +ಕಿವಿಗಳಲಿ +ಮೇಣ್ +ಹರಿ
ಯಿಂಗಿತವನ್+ಅರಿಯದ +ಜಡಾತ್ಮನು +ಚೈದ್ಯ+ನೃಪನೆಂದ

ಅಚ್ಚರಿ:
(೧) ಉತ್ತಮ, ಮಧ್ಯಮ ಮತ್ತು ಅಧಮರ ಗುಣವಿಶೇಷಗಳನ್ನು ತಿಳಿಸುವ ಪದ್ಯ
(೨) ಪಥಂಗಳಲಿ, ಕಂಗಳಲಿ, ಕಿವಿಗಳಲಿ – ಪ್ರಾಸಪದಗಳ ಪ್ರಯೋಗ

ನಿಮ್ಮ ಟಿಪ್ಪಣಿ ಬರೆಯಿರಿ