ಪದ್ಯ ೬೧: ಶಿಶುಪಾಲನು ಎಲ್ಲಿಗೆ ಹೋಗುತ್ತಾನೆ ಎಂದು ಭೀಷ್ಮರು ನುಡಿದರು?

ಆಯುಗದಲಾಯುಗದಲನಿಬರು
ಬೀಯವಾದರು ದೈತ್ಯದಾನವ
ರೀ ಯುಗದಲೆನಿತಸುರರನಿಬರು ದುಷ್ಟದಾನವರು
ರಾಯರನಿಬರು ದಿವಿಜರಾಯನ
ಲಾಯದಲಿ ಲಂಬಿಸಿದರಾ ತರು
ವಾಯ ನಿನಗೀಗಳೆ ವಿಘಾತದೊಳೆಂದನಾ ಭೀಷ್ಮ (ಸಭಾ ಪರ್ವ, ೧೦ ಸಂಧಿ, ೬೧ ಪದ್ಯ)

ತಾತ್ಪರ್ಯ:
ಆಯಾ ಯುಗದಲ್ಲಿ ಅದೆಷ್ಟೋಜನ ಶ್ರೀಕೃಷ್ಣನಿಂದ ಹತರಾದರು. ಈ ಯುಗದಲ್ಲಿ ಅದೆಷ್ಟೋಜನ ಅಸುರರು, ದುಷ್ಟ ರಾಕ್ಷಸರು, ಖಳ ರಾಜರು ಇವನಿಂದ ಹತರಾಗಿ ಇಂದ್ರನ ಅಶ್ವಶಾಲೆಯಲ್ಲಿ ಸಾಲಾಗಿ ನಿಂತಿದ್ದಾರೆ. ಅದಾದ ಮೇಲೆ ಈಗಲೇ ಹೆಚ್ಚಿನ ಹೊದೆತಬಿದ್ದು ನೀನೂ ಅಲ್ಲಿಗೆ ಹೋಗುತ್ತಿಯ ಎಂದು ಭೀಷ್ಮರು ನುಡಿದರು.

ಅರ್ಥ:
ಯುಗ: ಕಾಲದ ಪ್ರಮಾಣ; ಅನಿಬರು: ಅಷ್ಟು; ಬೀಯ: ವ್ಯಯ, ನಷ್ಟ, ಖರ್ಚು; ದೈತ್ಯ: ರಾಕ್ಷಸ; ಅಸುರ: ರಾಕ್ಷಸ; ದುಷ್ಟ: ಕೆಟ್ಟ, ಖಳ; ದಾನವ: ರಾಕ್ಷಸ; ರಾಯ: ರಾಜ; ದಿವಿಜ: ಸುರರು; ಲಾಯ: ಅಶ್ವಶಾಲೆ; ಲಂಬಿಸು: ಉದ್ದ; ತರುವಾಯ: ಅವಕಾಶ, ಅನುಕೂಲ; ವಿಘಾತ: ನಾಶ, ಧ್ವಂಸ;

ಪದವಿಂಗಡಣೆ:
ಆ+ಯುಗದಲ್+ಆ+ಯುಗದಲ್+ಅನಿಬರು
ಬೀಯವಾದರು +ದೈತ್ಯ+ದಾನವರ್
ಈ+ ಯುಗದಲ್+ಎನಿತ್+ಅಸುರರ್+ಅನಿಬರು +ದುಷ್ಟ+ದಾನವರು
ರಾಯರ್+ಅನಿಬರು +ದಿವಿಜ+ರಾಯನ
ಲಾಯದಲಿ +ಲಂಬಿಸಿದರ್+ಆ+ ತರು
ವಾಯ +ನಿನಗ್+ಈಗಳೆ +ವಿಘಾತದೊಳ್+ಎಂದನಾ +ಭೀಷ್ಮ

ಅಚ್ಚರಿ:
(೧) ಅಸುರ, ದಾನವ – ಸಮನಾರ್ಥಕ ಪದ
(೨) ಅನಿಬರು – ೩ ಬಾರಿ ಪ್ರಯೋಗ
(೩) ಇಂದ್ರನನ್ನು ದಿವಿಜರಾಯ ಎಂದು ಕರೆದಿರುವುದು
(೪) ಸತ್ತರು ಎಂದು ಹೇಳಲು – ದಿವಿಜರಾಯನ ಲಾಯದಲಿ ಲಂಬಿಸಿದರಾ

ನಿಮ್ಮ ಟಿಪ್ಪಣಿ ಬರೆಯಿರಿ