ಪದ್ಯ ೩೭: ಕೃಷ್ಣನ ಗುಣಗಾನವನ್ನು ಮಾಡಲು ಯಾರು ಆಯಾಸಗೊಳ್ಳುವುದಿಲ್ಲ?

ಹೊಗಳಿ ತಣಿಯವು ವೇದತತಿ ಕೈ
ಮುಗಿದು ದಣಿಯರು ಕಮಲಭವಭವ
ರೊಗುಮಿಗೆಯ ಮಾನಸ ಸಮಾಧಿಯ ಸಾರಸತ್ವದಲಿ
ಬಗೆದು ದಣಿಯರು ಯೋಗಿಗಳು ಕೈ
ಮುಗುಚಿದಣಿಯರು ಕರ್ಮಿಗಳು ಮೂ
ಜಗದ ದೈವದ ದೈವ ಕೃಷ್ಣನ ಬೈವನಿವನೆಂದ (ಸಭಾ ಪರ್ವ, ೧೦ ಸಂಧಿ, ೩೭ ಪದ್ಯ)

ತಾತ್ಪರ್ಯ:
ವೇದಗಳು ಇವನನ್ನು ಎಷ್ಟು ಹೊಗಳಿದರೂ ಬೇಸತ್ತುಕೊಳ್ಳುವುದಿಲ್ಲ. ಬ್ರಹ್ಮ ಶಿವರಿಗೆ ಎಷ್ಟು ಬಾರಿ ಇವನಿಗೆ ಕೈಮುಗಿದರೂ ದಣಿವಾಗುವುದಿಲ್ಲ. ಯೋಗಿಗಳು ಸಮಾಧಿಸ್ಥಿತಿಯಲ್ಲಿ ಇವನನ್ನು ಎಷ್ಟು ಧ್ಯಾನಿಸಿದರೂ ಆಯಾಸಗೊಳ್ಳುವುದಿಲ್ಲ. ಕರ್ಮಿಗಳು ಕೈಯನ್ನು ಎಷ್ಟುಬಾರಿ ನಮಸ್ಕರಿಸಿದರೂ ಆಯಾಸಗೊಳ್ಳುವುದಿಲ್ಲ. ಮೂರುಲೋಕಗಳಲ್ಲಿರುವ ದೈವಗಳ ದೈವವಾದ ಇಂತಹ ಶ್ರೀಕೃಷ್ಣನನ್ನು ಇವನು ಬೈಯುತ್ತಾನೆ.

ಅರ್ಥ:
ಹೊಗಳು: ಪ್ರಶಂಶಿಸು; ತಣಿ: ತೃಪ್ತಿಹೊಂದು, ಸಮಾಧಾನಗೊಳ್ಳು; ವೇದ: ಜ್ಞಾನ, ಶೃತಿ; ತತಿ: ಗುಂಪು, ಸಾಲು; ಕೈಮುಗಿ: ಎರಗು; ದಣಿ: ಆಯಾಸಪಡು, ಬಳಲು; ಕಮಲಭವ: ಕಮಲದಲ್ಲಿ ಹುಟ್ಟಿದವ- ಬ್ರಹ್ಮ; ಭವ: ಶಿವ, ಪರಮೇಶ್ವರ; ಒಗುಮಿಗೆ: ಆಧಿಕ್ಯ, ಹೆಚ್ಚಳ; ಮಾನಸ: ಮನಸ್ಸು; ಸಮಾಧಿ: ಏಕಾಗ್ರತೆ, ತನ್ಮಯತೆ; ಸಾರಸತ್ವ: ಸೃಜನಾತ್ಮಕ; ಬಗೆ: ಎಣಿಸು, ಲಕ್ಷಿಸು; ಯೋಗಿ: ಮುನಿ; ಕೈ: ಕರ, ಹಸ್ತ; ಮುಗುಚು: ಮುಗಿ, ನಮಸ್ಕರಿಸು; ಕರ್ಮಿ: ಕಾಯಕವನ್ನು ಮಾಡುವವರು; ಮೂಜಗ: ತ್ರಿಜಗ; ದೈವ: ಭಗವಂತ; ಬೈವನು: ಜರೆವನು;

ಪದವಿಂಗಡಣೆ:
ಹೊಗಳಿ +ತಣಿಯವು +ವೇದ+ತತಿ +ಕೈ
ಮುಗಿದು +ದಣಿಯರು +ಕಮಲಭವ+ಭವರ್
ಒಗುಮಿಗೆಯ +ಮಾನಸ +ಸಮಾಧಿಯ +ಸಾರಸತ್ವದಲಿ
ಬಗೆದು+ ದಣಿಯರು +ಯೋಗಿಗಳು+ ಕೈ
ಮುಗುಚಿ+ದಣಿಯರು+ ಕರ್ಮಿಗಳು+ ಮೂ
ಜಗದ+ ದೈವದ +ದೈವ +ಕೃಷ್ಣನ +ಬೈವನಿವನೆಂದ

ಅಚ್ಚರಿ:
(೧) ದಣಿ, ತಣಿ; ಬಗೆದು, ಮುಗಿದು – ಪ್ರಾಸ ಪದ
(೨) ಜೋಡಿ ಪದ – ಕಮಲಭವಭವ, ದೈವದ ದೈವ

ನಿಮ್ಮ ಟಿಪ್ಪಣಿ ಬರೆಯಿರಿ