ಪದ್ಯ ೩೨: ವಿದ್ವಾಂಸರಿಗೆ ಯಾವ ತತ್ತ್ವವೇ ಜೀವನ?

ಮನುವರಿವನಜ ಬಲ್ಲನೀಶ್ವರ
ನೆರೆವ ನಾರದ ಮುನಿಪ ವರ್ಣಿಪ
ಮನದಿ ಸನಕ ಸನತ್ಸುಜಾತಾದ್ಯರಿಗಿದೇ ವ್ಯಸನ
ಮುನಿಗಳಿಗೆ ಮುಕ್ತರಿಗೆ ಕರ್ಮದ
ಕಣಿಗಳಿಗೆ ಕೋವಿದರಿಗಿದೆ ಜೀ
ವನವಿದೇಗತಿ ಪರಮವೈಷ್ಣವ ತತ್ತ್ವವಿದೆಯೆಂದ (ಸಭಾ ಪರ್ವ, ೧೦ ಸಂಧಿ, ೩೨ ಪದ್ಯ)

ತಾತ್ಪರ್ಯ:
ಸರ್ವವ್ಯಾಪಿಯಾದ ಹೆಚ್ಚಿನ ತತ್ವವಾದ ಶ್ರೀಕೃಷ್ಣನ ರೀತಿಯನ್ನು ನಿಜವನ್ನು ಮನುವು ಬಲ್ಲ, ಬ್ರಹ್ಮನುಬಲ್ಲ, ಶಿವನು ನೆನೆಯುತ್ತಾನೆ, ನಾರದನು ಕೀರ್ತಿಸುತ್ತಾನೆ. ಸನಕಾದಿಗಳಿಗೆ ಈ ತತ್ವವನ್ನು ಸ್ಮರಿಸುವದೇ ಗೀಳು ಆತ್ಮ ತತ್ತ್ವವನ್ನು ಮನನಮಾಡುವ ಮುನಿಗಳಿಗೆ ಆತ್ಮ ನಿಷ್ಠೆಯಲ್ಲಿ ನೆಲೆ ನಿಂತ ಜೀವನ್ಮುಕ್ತರಿಗೆ ವೈದಿಕ ಕರ್ಮ ನಿರತರಿಗೆ ತಿಳಿದ ವಿದ್ವಾಂಸರಿಗೆ ಈ ತತ್ತ್ವವೇ ಜೀವನ. ಅವರೆಲ್ಲಾ ಬಂದು ಸೇರುವುದು ಇಲ್ಲಿಯೇ ಎಂದು ಭೀಷ್ಮರು ತಿಳಿಸಿದರು.

ಅರ್ಥ:
ಅಜ: ಬ್ರಹ್ಮ; ಮನು: ಸ್ವಾಯಂಭು ಮನು; ಅರಿ: ತಿಳಿ; ಈಶ್ವರ: ಭಗವಂತ; ಬಲ್ಲ: ತಿಳಿ; ನೆನೆ: ಜ್ಞಾಪಿಸಿಕೊಳ್ಳು, ಸ್ಮರಿಸು; ಮುನಿ: ಋಷಿ; ವರ್ಣಿಪ: ಮನ: ಮನಸ್ಸು; ಆದಿ: ಮುಂತಾದ; ವ್ಯಸನ: ಗೀಳು, ಚಟ; ಮುಕ್ತ: ಬಿಡುಗಡೆ ಹೊಂದಿದವನು; ಕರ್ಮ: ಕೆಲಸ; ಕಣಿ: ನೋಟ, ಕಾಣ್ಕೆ; ಕೋವಿದ: ವಿದ್ವಾಂಸ, ಪಂಡಿತ; ಜೀವನ: ಬಾಳು, ಬದುಕು; ಗತಿ: ಅವಸ್ಥೆ; ಪರಮ: ಶ್ರೇಷ್ಠ; ವೈಷ್ಣವ: ವಿಷ್ಣುಭಕ್ತ; ತತ್ವ: ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಸ್ವರೂಪ

ಪದವಿಂಗಡಣೆ:
ಮನುವ್+ಅರಿವನ್+ಅಜ +ಬಲ್ಲನ್+ಈಶ್ವರ
ನೆರೆವ+ ನಾರದ+ ಮುನಿಪ+ ವರ್ಣಿಪ
ಮನದಿ +ಸನಕ+ ಸನತ್ಸುಜಾತಾದ್ಯರಿಗ್+ಇದೇ +ವ್ಯಸನ
ಮುನಿಗಳಿಗೆ +ಮುಕ್ತರಿಗೆ +ಕರ್ಮದ
ಕಣಿಗಳಿಗೆ+ ಕೋವಿದರಿಗಿದೆ +ಜೀ
ವನವ್+ಇದೇಗತಿ+ ಪರಮವೈಷ್ಣವ +ತತ್ತ್ವವಿದೆಯೆಂದ

ನಿಮ್ಮ ಟಿಪ್ಪಣಿ ಬರೆಯಿರಿ