ಪದ್ಯ೩೦: ಕೃಷ್ಣನ ಗುಣಗಾನವನ್ನು ಭೀಷ್ಮರು ಹೇಗೆ ಮಾಡಿದರು?

ಆ ಮಧುವನಾ ಕೈಟಭನ ಮುರಿ
ದೀ ಮಹಾತ್ಮಕನೊಡನೆ ವಾದಿಸು
ವೀ ಮರುಳನೇನೆಂಬೆನೈ ಶಿಶುಪಾಲ ಬಾಲಕನ
ಕಾಮರಿಪು ಕಲ್ಪಾಂತವಹ್ನಿ
ವ್ಯೋಮರೂಪನುದಾರ ಸಗುಣ ಸ
ನಾಮ ಚಿನ್ಮಯನೀತನೀತನನರಿವರಾರೆಂದ (ಸಭಾ ಪರ್ವ, ೧೦ ಸಂಧಿ, ೩೦ ಪದ್ಯ)

ತಾತ್ಪರ್ಯ:
ರಾಕ್ಷಸರಾದ ಮಧು ಕೈಟಭರನ್ನು ಸಂಹರಿಸಿದ ಈ ಮಹಾತ್ಮನನೊಡನೆ ವಾದಮಾಡುವ ಮೂರ್ಖತನ ತೋರಿದ ಶಿಶುಪಾಲ ಬಾಲಕನೆಂಬ ಹುಚ್ಚನಿಗೆ ಏನೆಂದು ಹೇಳಲಿ, ಕಲ್ಪಾಂತದಲ್ಲಿ ಶಿವನ ಹಣೆಗಣ್ಣುರಿಯೂ ಇವನೇ, ಆಕಾಶದಂತೆ ನಿರ್ಲೇಪನು ಈತ, ಭಕ್ತರಿಗಾಗಿ ಔದಾರ್ಯದಿಂದ ಸಗುಣರೂಪದಲ್ಲಿ ಅವತರಿಸುತ್ತಾನೆ, ಇವನು ಪ್ರಸಿದ್ಧ ಚಿನ್ಮಯನು, ಇಂತಹವನನ್ನು ತಿಳಿಯಬಲ್ಲವರಾರು ಎಂದು ಭೀಷ್ಮರು ತಿಳಿಸಿದರು.

ಅರ್ಥ:
ಮುರಿ: ಸೀಳು; ಮಹಾತ್ಮ: ಶ್ರೇಷ್ಠ; ವಾದಿಸು: ಚರ್ಚಿಸು; ಮರುಳ: ಮೂಢ, ಹುಚ್ಚ; ಬಾಲಕ: ಶಿಶು; ಕಾಮರಿಪು: ಶಿವ; ಕಾಮ: ಮನ್ಮಥ; ರಿಪು: ವೈರಿ; ಕಲ್ಪ:ಬ್ರಹ್ಮನ ಒಂದು ದಿವಸ, ಸಹಸ್ರಯುಗ, ಪ್ರಳಯ; ಅಂತ: ಕೊನೆ; ವಹ್ನಿ: ಬೆಂಕಿ; ವ್ಯೋಮ:ಆಕಾಶ, ಗಗನ; ರೂಪ: ಆಕಾರ; ಸಗುಣ:ಯೋಗ್ಯಗುಣಗಳಿಂದ ಕೂಡಿದ; ಸನಾಮ: ಒಳ್ಳೆಯ ಹೆಸರು; ಚಿನ್ಮಯ: ಶುದ್ಧಜ್ಞಾನದಿಂದ ಕೂಡಿದ; ಅರಿ: ತಿಳಿ;

ಪದವಿಂಗಡಣೆ:
ಆ +ಮಧುವನ್+ಆ+ ಕೈಟಭನ+ ಮುರಿದ್
ಈ+ ಮಹಾತ್ಮಕನೊಡನೆ+ ವಾದಿಸುವ್
ಈ+ ಮರುಳನ್+ಏನೆಂಬೆನೈ +ಶಿಶುಪಾಲ +ಬಾಲಕನ
ಕಾಮರಿಪು+ ಕಲ್ಪಾಂತ+ವಹ್ನಿ
ವ್ಯೋಮ+ರೂಪನ್+ಉದಾರ+ ಸಗುಣ+ ಸ
ನಾಮ +ಚಿನ್ಮಯನ್+ಈತನ್+ಅರಿವರಾರೆಂದ

ಅಚ್ಚರಿ:
(೧) ಶಿಶುಪಾಲಕನನ್ನು ತೆಗಳುವ ಪರಿ – ಬಾಲಕ, ಮರುಳ
(೨) ಶಿವನನ್ನು ಕಾಮರಿಪು ಎಂದು ಕರೆದಿರುವುದು
(೩) ಕೃಷ್ಣನ ಗುಣಗಾನ: ಸಗುಣ, ಸನಾಮ, ಚಿನ್ಮಯ, ವಹ್ನಿ ವ್ಯೋಮ ರೂಪ, ಉದಾರ

ನಿಮ್ಮ ಟಿಪ್ಪಣಿ ಬರೆಯಿರಿ