ಪದ್ಯ ೨೮: ಮಧುಕೈಟಭರೆಂಬ ರಾಕ್ಷಸರು ಹೇಗೆ ಹುಟ್ಟಿದರು?

ಇರಲಿರಲು ಕಲ್ಪಾವಸಾನಕೆ
ಬರಿದುದೀ ಬ್ರಹ್ಮಾಂಡ ಬಹಿರಾ
ವರಣ ಜಲವೀ ಜಲದೊಳೊಂದಾಯ್ತೇಕ ರೂಪದಲಿ
ಹರಿವಿನೋದದಲೊಬ್ಬನೇ ಸಂ
ಚರಿಸುತಿದ್ದನು ಬಳಿಕ ಕಾಲಾಂ
ತರದೊಳಗೆ ಮಧುಕೈಟಭರು ಜನಿಸಿದರು ಕರ್ಣದಲಿ (ಸಭಾ ಪರ್ವ, ೧೦ ಸಂಧಿ, ೨೮ ಪದ್ಯ)

ತಾತ್ಪರ್ಯ:
ಹೀಗೆ ಜಗತ್ತು ನಡೆಯುತ್ತಿರಲು ಹಿಂದನ ಕಲ್ಪವು ಮುಗಿಯಲು ಸಮಯವಾಯಿತು, ಬ್ರಹ್ಮಾಂಡವು ಬಿರಿದುಹೋಯಿತು, ಆಕಾಶದ ಆಚೆಗಿದ್ದ ನೀರು ಈ ನೀರಿನೊಡನೆ ಒಂದಾಗಿ ಸರೀ ನೀರೇ ಎಲ್ಲೆಲ್ಲೂ ಇತ್ತು. ವಿಷ್ಣುವು ವಿನೋದದಿಂದ ಸಂಚಾರಮಾಡುತ್ತಿದ್ದನು, ಅವನು ಯೋಗನಿದ್ರೆಯಲ್ಲಿರುವಾಗ ಅವನ ಎರಡು ಕಿವಿಗಳಿಂದ ಮಧುಕೈಟಭರೆಂಬ ರಾಕ್ಷಸರು ಹುಟ್ಟಿದರು.

ಅರ್ಥ:
ಇರಲಿರಲು: ಹೀಗಿರಲು; ಕಲ್ಪ: ಬ್ರಹ್ಮನ ಒಂದು ದಿವಸ ಯಾ ಸಹಸ್ರ ಯುಗ; ಅವಸಾನ: ಅಂತ್ಯ; ಬಿರಿ: ಬಿರುಕು, ಸೀಳು; ಬ್ರಹ್ಮಾಂಡ: ವಿಶ್ವ, ಜಗತ್ತು; ಬಹಿರ: ಹೊರಗಡೆ; ಆವರಣ: ಪ್ರಾಕಾರ; ಜಲ: ನೀರು; ರೂಪ: ಆಕಾರ; ಹರಿ: ವಿಷ್ಣು; ವಿನೋದ: ಸಂತಸ; ಸಂಚರಿಸು: ಓಡಾದು; ಬಳಿಕ: ನಂತರ; ಕಾಲಾಂತರ: ಸಮಯ ಕಳೆದಂತೆ; ಜನಿಸು: ಹುಟ್ಟು; ಕರ್ಣ: ಕಿವಿ;

ಪದವಿಂಗಡಣೆ:
ಇರಲಿರಲು+ ಕಲ್ಪ+ಅವಸಾನಕೆ
ಬಿರಿದುದ್+ಈ+ ಬ್ರಹ್ಮಾಂಡ +ಬಹಿರ್
ಆವರಣ+ ಜಲವ್+ಈ+ ಜಲದೊಳ್+ಒಂದಾಯ್ತ್+ಏಕ+ ರೂಪದಲಿ
ಹರಿ+ವಿನೋದದಲ್+ಒಬ್ಬನೇ +ಸಂ
ಚರಿಸುತಿದ್ದನು+ ಬಳಿಕ+ ಕಾಲಾಂ
ತರದೊಳಗೆ+ ಮಧುಕೈಟಭರು+ ಜನಿಸಿದರು +ಕರ್ಣದಲಿ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬರಿದುದೀ ಬ್ರಹ್ಮಾಂಡ ಬಹಿರಾವರಣ
(೨) ಲಯದ ಪ್ರಕ್ರಿಯೆ – ಬಹಿರಾವರಣ ಜಲವೀ ಜಲದೊಳೊಂದಾಯ್ತೇಕ ರೂಪದಲಿ

ನಿಮ್ಮ ಟಿಪ್ಪಣಿ ಬರೆಯಿರಿ