ಪದ್ಯ ೨೭: ಇಡೀ ವಿಶ್ವಕ್ಕೆ ಕೃಷ್ಣನು ಯಾವ ರೀತಿ ಹೊಂದಿಕೊಂಡಿದ್ದಾನೆ?

ವಿಶ್ವ ಶಿಲ್ಪದ ಕುಶಲ ಹಸ್ತನು
ವಿಶ್ವರಕ್ಷೆಯ ಮಂತ್ರವಾದಿಯು
ವಿಶ್ವ ಸಮಿಧೆಗಳಗ್ನಿಕಾರ್ಯದ ಮೊಬ್ಬಚಾರಿವಟು
ವಿಶ್ವನಾಟಕ ಸೂತ್ರಧಾರನು
ವಿಶ್ವ ವಿಸ್ಮಯದೈಂದ್ರಜಾಲಿಕ
ವಿಶ್ವದಂತಸ್ಯೂತ ಚೇತನನೀತ ನೋಡೆಂದ (ಸಭಾ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ವಿಶ್ವವು ಶಿಲ್ಪವೆಂದರೆ ಅದನ್ನು ಕಟೆದ ಶಿಲ್ಪಿ ಇವನು. ವಿಶ್ವಕ್ಕೆ ಗ್ರಹಬಾಧೆ ಹಿಡಿದಿದೆಯೇ? ಅದನ್ನು ಬಿಡಿಸುವ ಮಂತ್ರವಾದಿ ಇವನು. ವಿಶ್ವದ ಸಮಿತ್ತೇ ಇವನು, ಅದನ್ನು ಹಿಡಿದು ಅಗ್ನಿಕಾರ್ಯಮಾಡುವ ಬ್ರಹ್ಮಚಾರಿವಟುವು ಸಹ ಈತನೇ, ಇವನು ವಿಶ್ವವೆಂಬ ನಾಟಕದ ಸೂತ್ರಧಾರ, ವಿಶ್ವವೊಂದು ಮಹದ್ವಿಸ್ಮಯವೆಂದರೆ ಅದನ್ನು ನಿರ್ಮಿಸಿದ ಐಂದ್ರಜಾಲಿಕನಿವನು, ವಿಶ್ವದೊಳಗಿರುವ ಚೈತನ್ಯವೂ ಇವನೇ ಎಂದು ಕೃಷ್ಣನ ಗುಣಗಾನವನ್ನು ವರ್ಣಿಸಿದರು.

ಅರ್ಥ:
ವಿಶ್ವ: ಜಗತ್ತು; ಶಿಲ್ಪ: ಕೆತ್ತನೆಯ ಕೆಲಸ; ಕುಶಲ: ಚಾತುರ್ಯ; ಹಸ್ತ: ಕರ; ರಕ್ಷೆ: ಕಾಪು, ರಕ್ಷಣೆ; ಮಂತ್ರವಾದಿ: ಜಾದೂಗಾರ; ಸಮಿಧೆ: ಸಮಿತೆ, ಯಜ್ಞಕ್ಕಾಗಿ ಬಳಸುವ ಉರುವಲು ಕಡ್ಡಿ; ಅಗ್ನಿಕಾರ್ಯ: ಯಜ್ಞ; ಬೊಮ್ಮಚಾರಿ: ಬ್ರಹ್ಮಚಾರಿ; ವಟು: ಬ್ರಹ್ಮಚಾರಿ; ನಾಟಕ: ಅಭಿನಯ ಪ್ರಧಾನವಾದ ದೃಶ್ಯ ಪ್ರಬಂಧ, ರೂಪಕ; ಸೂತ್ರಧಾರ: ನಿರ್ದೇಶಕ, ವ್ಯವಸ್ಥಾಪಕ; ವಿಸ್ಮಯ: ಆಶ್ಚರ್ಯ, ಅಚ್ಚರಿ; ಐಂದ್ರಜಾಲ: ಗಾರುಡಿ; ಸ್ಯೂತ: ಚೇತನ: ಮನಸ್ಸು, ಬುದ್ಧಿ, ಪ್ರಜ್ಞೆ;

ಪದವಿಂಗಡಣೆ:
ವಿಶ್ವ +ಶಿಲ್ಪದ +ಕುಶಲ+ ಹಸ್ತನು
ವಿಶ್ವರಕ್ಷೆಯ +ಮಂತ್ರವಾದಿಯು
ವಿಶ್ವ+ ಸಮಿಧೆಗಳ್+ಅಗ್ನಿಕಾರ್ಯದ +ಬೊಮ್ಮಚಾರಿವಟು
ವಿಶ್ವನಾಟಕ+ ಸೂತ್ರಧಾರನು
ವಿಶ್ವ +ವಿಸ್ಮಯದ್+ಐಂದ್ರಜಾಲಿಕ
ವಿಶ್ವದಂತಸ್ಯೂತ+ ಚೇತನನೀತ +ನೋಡೆಂದ

ಅಚ್ಚರಿ:
(೧) ವಿಶ್ವ – ೧-೬ ಸಾಲಿನ ಮೊದಲನೇ ಪದ

ನಿಮ್ಮ ಟಿಪ್ಪಣಿ ಬರೆಯಿರಿ