ಪದ್ಯ ೨೮: ಮಧುಕೈಟಭರೆಂಬ ರಾಕ್ಷಸರು ಹೇಗೆ ಹುಟ್ಟಿದರು?

ಇರಲಿರಲು ಕಲ್ಪಾವಸಾನಕೆ
ಬರಿದುದೀ ಬ್ರಹ್ಮಾಂಡ ಬಹಿರಾ
ವರಣ ಜಲವೀ ಜಲದೊಳೊಂದಾಯ್ತೇಕ ರೂಪದಲಿ
ಹರಿವಿನೋದದಲೊಬ್ಬನೇ ಸಂ
ಚರಿಸುತಿದ್ದನು ಬಳಿಕ ಕಾಲಾಂ
ತರದೊಳಗೆ ಮಧುಕೈಟಭರು ಜನಿಸಿದರು ಕರ್ಣದಲಿ (ಸಭಾ ಪರ್ವ, ೧೦ ಸಂಧಿ, ೨೮ ಪದ್ಯ)

ತಾತ್ಪರ್ಯ:
ಹೀಗೆ ಜಗತ್ತು ನಡೆಯುತ್ತಿರಲು ಹಿಂದನ ಕಲ್ಪವು ಮುಗಿಯಲು ಸಮಯವಾಯಿತು, ಬ್ರಹ್ಮಾಂಡವು ಬಿರಿದುಹೋಯಿತು, ಆಕಾಶದ ಆಚೆಗಿದ್ದ ನೀರು ಈ ನೀರಿನೊಡನೆ ಒಂದಾಗಿ ಸರೀ ನೀರೇ ಎಲ್ಲೆಲ್ಲೂ ಇತ್ತು. ವಿಷ್ಣುವು ವಿನೋದದಿಂದ ಸಂಚಾರಮಾಡುತ್ತಿದ್ದನು, ಅವನು ಯೋಗನಿದ್ರೆಯಲ್ಲಿರುವಾಗ ಅವನ ಎರಡು ಕಿವಿಗಳಿಂದ ಮಧುಕೈಟಭರೆಂಬ ರಾಕ್ಷಸರು ಹುಟ್ಟಿದರು.

ಅರ್ಥ:
ಇರಲಿರಲು: ಹೀಗಿರಲು; ಕಲ್ಪ: ಬ್ರಹ್ಮನ ಒಂದು ದಿವಸ ಯಾ ಸಹಸ್ರ ಯುಗ; ಅವಸಾನ: ಅಂತ್ಯ; ಬಿರಿ: ಬಿರುಕು, ಸೀಳು; ಬ್ರಹ್ಮಾಂಡ: ವಿಶ್ವ, ಜಗತ್ತು; ಬಹಿರ: ಹೊರಗಡೆ; ಆವರಣ: ಪ್ರಾಕಾರ; ಜಲ: ನೀರು; ರೂಪ: ಆಕಾರ; ಹರಿ: ವಿಷ್ಣು; ವಿನೋದ: ಸಂತಸ; ಸಂಚರಿಸು: ಓಡಾದು; ಬಳಿಕ: ನಂತರ; ಕಾಲಾಂತರ: ಸಮಯ ಕಳೆದಂತೆ; ಜನಿಸು: ಹುಟ್ಟು; ಕರ್ಣ: ಕಿವಿ;

ಪದವಿಂಗಡಣೆ:
ಇರಲಿರಲು+ ಕಲ್ಪ+ಅವಸಾನಕೆ
ಬಿರಿದುದ್+ಈ+ ಬ್ರಹ್ಮಾಂಡ +ಬಹಿರ್
ಆವರಣ+ ಜಲವ್+ಈ+ ಜಲದೊಳ್+ಒಂದಾಯ್ತ್+ಏಕ+ ರೂಪದಲಿ
ಹರಿ+ವಿನೋದದಲ್+ಒಬ್ಬನೇ +ಸಂ
ಚರಿಸುತಿದ್ದನು+ ಬಳಿಕ+ ಕಾಲಾಂ
ತರದೊಳಗೆ+ ಮಧುಕೈಟಭರು+ ಜನಿಸಿದರು +ಕರ್ಣದಲಿ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬರಿದುದೀ ಬ್ರಹ್ಮಾಂಡ ಬಹಿರಾವರಣ
(೨) ಲಯದ ಪ್ರಕ್ರಿಯೆ – ಬಹಿರಾವರಣ ಜಲವೀ ಜಲದೊಳೊಂದಾಯ್ತೇಕ ರೂಪದಲಿ

ಪದ್ಯ ೨೭: ಇಡೀ ವಿಶ್ವಕ್ಕೆ ಕೃಷ್ಣನು ಯಾವ ರೀತಿ ಹೊಂದಿಕೊಂಡಿದ್ದಾನೆ?

ವಿಶ್ವ ಶಿಲ್ಪದ ಕುಶಲ ಹಸ್ತನು
ವಿಶ್ವರಕ್ಷೆಯ ಮಂತ್ರವಾದಿಯು
ವಿಶ್ವ ಸಮಿಧೆಗಳಗ್ನಿಕಾರ್ಯದ ಮೊಬ್ಬಚಾರಿವಟು
ವಿಶ್ವನಾಟಕ ಸೂತ್ರಧಾರನು
ವಿಶ್ವ ವಿಸ್ಮಯದೈಂದ್ರಜಾಲಿಕ
ವಿಶ್ವದಂತಸ್ಯೂತ ಚೇತನನೀತ ನೋಡೆಂದ (ಸಭಾ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ವಿಶ್ವವು ಶಿಲ್ಪವೆಂದರೆ ಅದನ್ನು ಕಟೆದ ಶಿಲ್ಪಿ ಇವನು. ವಿಶ್ವಕ್ಕೆ ಗ್ರಹಬಾಧೆ ಹಿಡಿದಿದೆಯೇ? ಅದನ್ನು ಬಿಡಿಸುವ ಮಂತ್ರವಾದಿ ಇವನು. ವಿಶ್ವದ ಸಮಿತ್ತೇ ಇವನು, ಅದನ್ನು ಹಿಡಿದು ಅಗ್ನಿಕಾರ್ಯಮಾಡುವ ಬ್ರಹ್ಮಚಾರಿವಟುವು ಸಹ ಈತನೇ, ಇವನು ವಿಶ್ವವೆಂಬ ನಾಟಕದ ಸೂತ್ರಧಾರ, ವಿಶ್ವವೊಂದು ಮಹದ್ವಿಸ್ಮಯವೆಂದರೆ ಅದನ್ನು ನಿರ್ಮಿಸಿದ ಐಂದ್ರಜಾಲಿಕನಿವನು, ವಿಶ್ವದೊಳಗಿರುವ ಚೈತನ್ಯವೂ ಇವನೇ ಎಂದು ಕೃಷ್ಣನ ಗುಣಗಾನವನ್ನು ವರ್ಣಿಸಿದರು.

ಅರ್ಥ:
ವಿಶ್ವ: ಜಗತ್ತು; ಶಿಲ್ಪ: ಕೆತ್ತನೆಯ ಕೆಲಸ; ಕುಶಲ: ಚಾತುರ್ಯ; ಹಸ್ತ: ಕರ; ರಕ್ಷೆ: ಕಾಪು, ರಕ್ಷಣೆ; ಮಂತ್ರವಾದಿ: ಜಾದೂಗಾರ; ಸಮಿಧೆ: ಸಮಿತೆ, ಯಜ್ಞಕ್ಕಾಗಿ ಬಳಸುವ ಉರುವಲು ಕಡ್ಡಿ; ಅಗ್ನಿಕಾರ್ಯ: ಯಜ್ಞ; ಬೊಮ್ಮಚಾರಿ: ಬ್ರಹ್ಮಚಾರಿ; ವಟು: ಬ್ರಹ್ಮಚಾರಿ; ನಾಟಕ: ಅಭಿನಯ ಪ್ರಧಾನವಾದ ದೃಶ್ಯ ಪ್ರಬಂಧ, ರೂಪಕ; ಸೂತ್ರಧಾರ: ನಿರ್ದೇಶಕ, ವ್ಯವಸ್ಥಾಪಕ; ವಿಸ್ಮಯ: ಆಶ್ಚರ್ಯ, ಅಚ್ಚರಿ; ಐಂದ್ರಜಾಲ: ಗಾರುಡಿ; ಸ್ಯೂತ: ಚೇತನ: ಮನಸ್ಸು, ಬುದ್ಧಿ, ಪ್ರಜ್ಞೆ;

ಪದವಿಂಗಡಣೆ:
ವಿಶ್ವ +ಶಿಲ್ಪದ +ಕುಶಲ+ ಹಸ್ತನು
ವಿಶ್ವರಕ್ಷೆಯ +ಮಂತ್ರವಾದಿಯು
ವಿಶ್ವ+ ಸಮಿಧೆಗಳ್+ಅಗ್ನಿಕಾರ್ಯದ +ಬೊಮ್ಮಚಾರಿವಟು
ವಿಶ್ವನಾಟಕ+ ಸೂತ್ರಧಾರನು
ವಿಶ್ವ +ವಿಸ್ಮಯದ್+ಐಂದ್ರಜಾಲಿಕ
ವಿಶ್ವದಂತಸ್ಯೂತ+ ಚೇತನನೀತ +ನೋಡೆಂದ

ಅಚ್ಚರಿ:
(೧) ವಿಶ್ವ – ೧-೬ ಸಾಲಿನ ಮೊದಲನೇ ಪದ

ಪದ್ಯ ೨೬: ಕೃಷ್ಣನ ಹಿರಿಮೆ ಎಂತಹುದು?

ದೇವರಂಗೋಪಾಂಗದಲಿ ವೇ
ದಾವಳಿಗಳುಚ್ಛ್ವಾಸದಲಿ ತೀ
ರ್ಥಾವಳಿಗಳಂಘ್ರಿದ್ವಯಾಂಬುಜ ಮಾಕರಂದದಲಿ
ಪಾವನಕೆ ಪಾವನನು ಜೀವರ
ಜೀವನನು ಮೃತ್ಯುವಿಗೆ ಮೃತ್ಯುವಿ
ದಾವಲೆಕ್ಕದೊಳೀತನಹನೆಂದರಿವರಾರೆಂದ (ಸಭಾ ಪರ್ವ, ೧೦ ಸಂಧಿ, ೨೬ ಪದ್ಯ)

ತಾತ್ಪರ್ಯ:
ಇವನ ಅಂಗೋಪಾಂಗಗಳಲ್ಲಿ ದೇವರುಗಳು, ಇವನ ಉಸಿರಾಟದಲ್ಲಿ ವೇದಗಳು, ಪಾದಕಮಲಗಳ ಮಕರಂದದಲ್ಲಿ ತೀರ್ಥಗಳು, ಇವೆ. ಪವಿತ್ರವಾದುದಕ್ಕೆ ಪಾವಿತ್ರ್ಯವನ್ನು ಕೊಡುವವನು ಇವನು. ಜೀವರ ಜೀವನವು ಇವನೇ, ಮೃತ್ಯುವಿಗಿವನು ಮೃತ್ಯು ಇವನು ಯಾವಲೆಕ್ಕಕ್ಕನುಗುಣವಾಗಿ ಆದನೋ ಇರುವನೋ ತಿಳಿದವರು ಯಾರು ಎಂದು ಭೀಷ್ಮರು ಕೃಷ್ಣನ ಗುಣಗಾನವನ್ನು ಹೇಳಿದರು.

ಅರ್ಥ:
ದೇವ: ಭಗವಂತ, ಸುರ; ಅಂಗೋಪಾಂಗ: ಅಂಗಾಗಳು; ವೇದ: ಜ್ಞಾನ; ಉಚ್ಛ್ವಾಸ: ಉಸಿರಾಟ; ತೀರ್ಥ: ಪವಿತ್ರವಾದ ಜಲ; ಆವಳಿ: ಗುಂಪು; ಅಂಘ್ರಿ: ಪಾದ; ಅಂಬುಜ: ಕಮಲ; ಮಕರಂದ: ಹೂವಿನ ರಸ; ಪಾವನ:ಶುದ್ಧ; ಜೀವ: ಉಸಿರು; ಮೃತ್ಯು: ಸಾವು; ಲೆಕ್ಕ: ಗಣನೆ; ಅರಿ: ತಿಳಿ;

ಪದವಿಂಗಡಣೆ:
ದೇವರ್+ಅಂಗೋಪಾಂಗದಲಿ+ ವೇ
ದಾವಳಿಗಳ್+ಉಚ್ಛ್ವಾಸದಲಿ +ತೀ
ರ್ಥಾವಳಿಗಳ್+ಅಂಘ್ರಿದ್ವಯ+ಅಂಬುಜ +ಮಾಕರಂದದಲಿ
ಪಾವನಕೆ+ ಪಾವನನು+ ಜೀವರ
ಜೀವನನು +ಮೃತ್ಯುವಿಗೆ ಮೃತ್ಯುವಿದ್
ಆವಲೆಕ್ಕದೊಳ್+ಈತನಹನೆಂದ್+ಅರಿವರಾರೆಂದ

ಅಚ್ಚರಿ:
(೧) ಕೃಷ್ಣನ ಹಿರಿಮೆ – ಪಾವನಕೆ ಪಾವನನು ಜೀವರ ಜೀವನನು ಮೃತ್ಯುವಿಗೆ ಮೃತ್ಯು