ಅರಸನರಸನು ಕಾದಿ ಹಿಡಿದಾ
ದರಿಸಿ ಬಿಟ್ಟು ತದೀಯ ರಾಜ್ಯದೊ
ಳಿರಿಸಿದರೆ ಗುರುವಾತನಾತಂಗಿದುವೆ ಶೃತಿಸಿದ್ಧ
ಅರಸುಗಳನನಿಬರನು ಸೋಲಿಸಿ
ಮರಳಿ ರಾಜ್ಯದೊಳಿರಿಸನೇ ಮುರ
ಹರನು ಗುರುವಲ್ಲಾ ಮಹೀಶರಿಗೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೪೮ ಪದ್ಯ)
ತಾತ್ಪರ್ಯ:
ಒಬ್ಬ ರಾಜನನ್ನು ಯುದ್ಧದಲ್ಲಿ ಗೆದ್ದು ಸೋತ ರಾಜನನ್ನು ಮನ್ನಿಸಿ ಅವನ ರಾಜ್ಯದಲ್ಲೇ ಅವನನ್ನು ರಾಜ್ಯಭಾರ ಮಾಡಲು ಬಿಡುವವನು ರಾಜನಾದವನ ಗುರುವೆನಿಸಿಕೊಳ್ಳುತ್ತಾನೆ, ಇದು ವೇದಸಿದ್ಧ. ಹೀಗಿರುವಾಗ ಶ್ರೀಕೃಷ್ಣನು ಎಷ್ಟು ಜನ ರಾಜರನ್ನು ಸೋಲಿಸಿ ಮತ್ತೆ ರಾಜ್ಯದಲ್ಲಿಟ್ಟಿಲ್ಲ, ಶ್ರೀಕೃಷ್ಣನು ರಾಜರಿಗೆ ಗುರುವಲ್ಲವೇ ಎಂದು ಭೀಷ್ಮನು ಹೇಳಿದನು.
ಅರ್ಥ:
ಅರಸ: ರಾಜ; ಕಾದಿ: ಹೋರಾಡು; ಹಿಡಿ: ಬಂಧಿಸು; ಆದರ: ಮನ್ನಿಸು; ಬಿಟ್ಟು: ತೊರೆದು; ರಾಜ್ಯ: ರಾಷ್ಟ್ರ; ಇರಿಸು: ಇಡು; ಗುರು: ಆಚಾರ್ಯ; ಶೃತಿ: ವೇದ; ಅನಿಬರು: ಅಷ್ಟು; ಸೋಲಿಸು: ಪರಾಭವಗೊಳಿಸು; ಮರಳಿ: ಮತ್ತೆ; ಮುರಹರ: ಕೃಷ್ಣ; ಮಹೀಶ: ರಾಜ;
ಪದವಿಂಗಡಣೆ:
ಅರಸನ್+ಅರಸನು +ಕಾದಿ +ಹಿಡಿದ್
ಆದರಿಸಿ +ಬಿಟ್ಟು +ತದೀಯ +ರಾಜ್ಯದೊಳ್
ಇರಿಸಿದರೆ+ ಗುರುವಾತನ್+ಆತಂಗ್+ಇದುವೆ+ ಶೃತಿಸಿದ್ಧ
ಅರಸುಗಳನ್+ಅನಿಬರನು +ಸೋಲಿಸಿ
ಮರಳಿ+ ರಾಜ್ಯದೊಳ್+ಇರಿಸನೇ +ಮುರ
ಹರನು +ಗುರುವಲ್ಲಾ +ಮಹೀಶರಿಗ್+ಎಂದನಾ +ಭೀಷ್ಮ
ಅಚ್ಚರಿ:
(೧) ಅರಸನರಸ – ಪದ ಜೋಡಿಸಿರುವ ಬಗೆ