ಪದ್ಯ ೫೩: ಧರ್ಮಜನು ಭೀಷ್ಮರಲ್ಲಿ ಏನು ಕೋರಿದ?

ಕರುಣಿಸೈ ಗಾಂಗೇಯ ಕೃಷ್ಣನ
ಚರಿತವನು ಶಿಶುಪಾಲ ಭೂಪನ
ಕರಣವೃತ್ತಿಯ ಕದಡು ತಿಳಿಯಲಿ ದೈವ ದೂರನಲೇ
ದುರುಳನಿವನ ದುರುಕ್ತಿಗಳ ಕೇ
ಳ್ದರಿಗೆ ಪ್ರಾಯಶ್ಚಿತ್ತವಿದು ವಿ
ಸ್ತರಿಸಬೇಹುದು ಸಕಲ ಜನಮತವೆಂದನಾ ಭೂಪ (ಸಭಾ ಪರ್ವ, ೯ ಸಂಧಿ, ೫೩ ಪದ್ಯ)

ತಾತ್ಪರ್ಯ:
ಧರ್ಮಜನು ಭೀಷ್ಮರಲ್ಲಿ ಕೇಳಿದನು, ಎಲೈ ಗಂಗಾಪುತ್ರ ಭೀಷ್ಮರೇ, ಶ್ರೀ ಕೃಷ್ಣನ ಚರಿತೆಯನ್ನು ಹೇಳಿರಿ, ಅದನ್ನು ಕೇಳಿ ದೈವದಿಂದ ದೂರನಾಗಿರುವ ಶಿಶುಪಾಲನ ಮನಸ್ಸಿನ ಕದಡು ತಿಳಿಯಾಗಲಿ, ಈ ದುಷ್ಟನ ದುರುಕ್ತಿಗಳನ್ನು ಕೇಳಿದ ತಪ್ಪಿಗೆ ಶ್ರೀಕೃಷ್ಣನ ಅರಿತೆಯನ್ನು ಕೇಳುವುದೇ ಪ್ರಾಯಶ್ಚಿತ್ತ, ಸಮಸ್ತರೂ ಅದನ್ನು ಕೇಳಲು ಕಾತುರರಾಗಿದ್ದಾರೆ ಎಂದನು.

ಅರ್ಥ:
ಕರುಣಿಸು: ದಯಪಾಲಿಸು; ಗಾಂಗೇಯ: ಭೀಷ್ಮ; ಚರಿತ: ಚಾರಿತ್ರ, ಕಥೆ; ಭೂಪ: ರಾಜ; ಕರಣ: ಕಿವಿ; ವೃತ್ತಿ: ಕೆಲಸ; ಕರಣವೃತ್ತಿ: ಕೇಳುವ ಕಾಯಕ; ಕದಡು:ಕಲಕು; ತಿಳಿ: ಅರಿ; ದೈವ: ಭಗವಂತ; ದೂರ: ಅಂತರ; ದುರುಳ: ದುಷ್ಟ; ದುರುಕ್ತಿ: ಕೆಟ್ಟ ಮಾತು; ಕೇಳು: ಆಲಿಸು; ಪ್ರಾಯಶ್ಚಿತ್ತ: ತಾನು ಮಾಡಿದ ತಪ್ಪಿಗಾಗಿ ವ್ಯಥೆ ಪಟ್ಟು ಪರಿಹಾರ ಮಾಡಿಕೊಳ್ಳುವ ಕರ್ಮ ವಿಧಿ; ವಿಸ್ತರಿಸು: ಹರಡು; ಸಕಲ: ಎಲ್ಲಾ; ಜನಮತ: ಜನರ ಅಭಿಪ್ರಾಯ;

ಪದವಿಂಗಡಣೆ:
ಕರುಣಿಸೈ +ಗಾಂಗೇಯ +ಕೃಷ್ಣನ
ಚರಿತವನು +ಶಿಶುಪಾಲ +ಭೂಪನ
ಕರಣವೃತ್ತಿಯ +ಕದಡು +ತಿಳಿಯಲಿ +ದೈವ +ದೂರನಲೇ
ದುರುಳನ್+ಇವನ +ದುರುಕ್ತಿಗಳ+ ಕೇ
ಳ್ದರಿಗೆ +ಪ್ರಾಯಶ್ಚಿತ್ತವಿದು+ ವಿ
ಸ್ತರಿಸ+ಬೇಹುದು +ಸಕಲ+ ಜನಮತವೆಂದನಾ +ಭೂಪ

ಅಚ್ಚರಿ:
(೧) ದುರುಳ, ದುರುಕ್ತಿ, ಕರಣವೃತ್ತಿ – ಪದಗಳ ಬಳಕೆ
(೨) ದ ಕಾರದ ಸಾಲು ಪದಗಳು – ದೈವ ದೂರನಲೇ ದುರುಳನಿವನ ದುರುಕ್ತಿಗಳ

ನಿಮ್ಮ ಟಿಪ್ಪಣಿ ಬರೆಯಿರಿ