ಪದ್ಯ ೪೯: ಯಾರ ಮಕ್ಕಳು ಕೃಷ್ಣನಿಂದ ಪಟ್ಟಾಭಿಷಿಕ್ತರಾದರು?

ಮಗಧಸುತನೀ ಸಾಲ್ವ ಹಂಸನ
ಮಗ ನಿಶುಂಭನ ಸೂನು ನರಕನ
ಮಗನು ಪೌಂಡ್ರಕ ದಂತವಕ್ತ್ರನ ತನುಜರಿವರೆಲ್ಲ
ಹಗೆಯ ಮಾಡಿ ಮುರಾಂತಕನ ಕಾ
ಳಗದೊಳೆಲ್ಲರನಿಕ್ಕಿ ಪಟ್ಟವ
ಬಿರಿಸಿಕೊಂಡವರಲ್ಲವೇ ಹೇಳೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೪೯ ಪದ್ಯ)

ತಾತ್ಪರ್ಯ:
ಜರಾಸಂಧನ ಮಗ, ಸಾಲ್ವ, ಹಂಸ, ನಿಶುಂಭ, ನರಕ, ಪೌಂಡ್ರಕ, ದಂತವಕ್ತ್ರ ಇವರ ಮಕ್ಕಳೂ ಯುದ್ಧದಲ್ಲಿ ಕೃಷ್ಣನಿಂದ ತಮ್ಮ ತಂದೆಯರನ್ನು ಕಳೆದುಕೊಂಡ ನಂತರ ಕೃಷ್ಣನಿಂದಲೇ ಪಟ್ಟಕ್ಕೆ ಬಂದವರಲ್ಲವೇ ಎಂದು ಭೀಷ್ಮರು ಕೇಳಿದರು.

ಅರ್ಥ:
ಸುತ: ಮಗ; ಮಗಧಸುತ: ಜರಾಸಂಧ; ಹಗೆ: ವೈರತ್ವ; ಮುರಾಂತಕ: ಕೃಷ್ಣ; ಕಾಳಗ: ಯುದ್ಧ;ಇಕ್ಕು: ಸಾಯಿಸು; ಪಟ್ಟ: ಪದವಿ; ಬಿರಿಸು: ಕಟ್ಟು; ಹೇಳು: ತಿಳಿಸು;

ಪದವಿಂಗಡಣೆ:
ಮಗಧಸುತನ್+ಈ+ ಸಾಲ್ವ +ಹಂಸನ
ಮಗ +ನಿಶುಂಭನ+ ಸೂನು +ನರಕನ
ಮಗನು +ಪೌಂಡ್ರಕ +ದಂತವಕ್ತ್ರನ+ ತನುಜರ್+ಇವರೆಲ್ಲ
ಹಗೆಯ +ಮಾಡಿ +ಮುರಾಂತಕನ+ ಕಾ
ಳಗದೊಳ್+ಎಲ್ಲರನ್+ಇಕ್ಕಿ +ಪಟ್ಟವ
ಬಿರಿಸಿಕೊಂಡವರ್+ಅಲ್ಲವೇ +ಹೇಳೆಂದನಾ +ಭೀಷ್ಮ

ಅಚ್ಚರಿ:
(೧) ಮಗ, ಸೂನು, ತನುಜ – ಸಮನಾರ್ಥಕ ಪದ
(೨) ಮಗ – ೧-೩ ಸಾಲಿನ ಮೊದಲ ಪದ

ನಿಮ್ಮ ಟಿಪ್ಪಣಿ ಬರೆಯಿರಿ