ಎಲೆ ಮರುಳೆ ಭೂಪಾಲ ನೊರಜಿನ
ಕಳಕಳಕೆ ಕರಿ ಬೆಚ್ಚುವುದೆ ಮಂ
ಡಳಿಯ ಮರಿ ಮಿಡುಕಿದರೆ ಕಳವಳಿಸುವುದೆ ಕಲಿಸಿಂಹ
ಗಿಳಿಯ ಮುರಕಕೆ ಗಿಡಗನಗಿದ
ವ್ವಳಿಸುವುದೆ ಹರಿಗಿವನು ಗಣ್ಯನೆ
ಗಳಹನಿವನೊಡನಾವುದನುನಯವೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೪೬ ಪದ್ಯ)
ತಾತ್ಪರ್ಯ:
ಧರ್ಮರಾಯನು ಉತ್ತರೀಯವನ್ನು ಹಿಡಿದು ಶಿಶುಪಾಲನನ್ನು ತಡೆಯಲು, ಎಲೈ ರಾಜ ನಿನಗೆಲ್ಲೋ ಹುಚ್ಚು, ಚಿಕ್ಕ ಹುಳುವಿನ ಸದ್ದಿಗೆ ಆನೆಯು ಹೆದರುವುದೇ? ಬೆಕ್ಕಿನ ಮರಿಯು ಕಿರುಚಾಡಿದರೆ ಸಿಂಹಕ್ಕೆ ಕಳವಳವಾಗುತ್ತದೆಯೇ? ಗಿಳಿಯು ಜೋರು ಮಾಡಿದರೆ ಗಿಡುಗವು ಬೆದರುತ್ತದೆಯೇ? ಶ್ರೀಕೃಷ್ಣನಿಗೆ ಇವನೋಬ್ಬ ಲಿಕ್ಕವೇ? ಬಾಯಿಬಡುಕನಾದ ಇವನೊಡನೆ ಅನುನಯದ ಮಾತೇಕೆ ಎಂದು ಭೀಷ್ಮರು ನುಡಿದರು.
ಅರ್ಥ:
ಮರುಳ:ತಿಳಿಗೇಡಿ, ದಡ್ಡ, ಹುಚ್ಚ; ಭೂಪಾಲ: ರಾಜ; ನೊರಜು: ಸಣ್ಣ ಕೀಟ, ಅಲ್ಪ; ಕಳಕಳ: ಉದ್ವಿಘ್ನತೆ; ಕರಿ: ಆನೆ; ಬೆಚ್ಚು: ಭಯ, ಹೆದರಿಕೆ; ಮಂಡಲಿ: ಬೆಕ್ಕು; ಮರಿ: ಎಳೆಯದು, ಕೂಸು; ಮಿಡುಕು: ನಡುಕ, ಕಂಪನ; ಕಳವಳ: ಚಿಂತೆ; ಕಲಿ: ಶೂರ; ಸಿಂಹ: ಕೇಸರಿ; ಗಿಳಿ: ಶುಕ; ಮುರಕ: ಸೊಕ್ಕು, ಗರ್ವ; ಗಿಡುಗ: ಒಂದು ಬಗೆಯ ಹಕ್ಕಿ, ಹದ್ದು; ಅವ್ವಳಿಸು: ಆರ್ಭಟಿಸು; ಹರಿ: ಕೃಷ್ಣ; ಗಣ್ಯ: ಶ್ರೇಷ್ಠ; ಅನುನಯ: ನಯವಾದ ಮಾತುಗಳಿಂದ ಮನವೊಲಿಸುವುದು; ಗಳಹ: ಅತಿಯಾಗಿ ಹರಟುವ; ಒಡನೆ: ಜೊತೆ;
ಪದವಿಂಗಡಣೆ:
ಎಲೆ +ಮರುಳೆ +ಭೂಪಾಲ +ನೊರಜಿನ
ಕಳಕಳಕೆ +ಕರಿ+ ಬೆಚ್ಚುವುದೆ+ ಮಂ
ಡಳಿಯ +ಮರಿ +ಮಿಡುಕಿದರೆ+ ಕಳವಳಿಸುವುದೆ +ಕಲಿಸಿಂಹ
ಗಿಳಿಯ +ಮುರಕಕೆ+ ಗಿಡಗನಗಿದ್
ಅವ್ವಳಿಸುವುದೆ +ಹರಿಗಿವನು+ ಗಣ್ಯನೆ
ಗಳಹನ್+ಇವನೊಡನ್+ಆವುದ್+ಅನುನಯವ್+ಎಂದನಾ ಭೀಷ್ಮ
ಅಚ್ಚರಿ:
(೧) ಉಪಮಾನಗಳ ಬಳಕೆ – ನೊರಜಿನ ಕಳಕಳಕೆ ಕರಿ ಬೆಚ್ಚುವುದೆ, ಮಂಡಳಿಯ ಮರಿ ಮಿಡುಕಿದರೆ ಕಳವಳಿಸುವುದೆ ಕಲಿಸಿಂಹ, ಗಿಳಿಯ ಮುರಕಕೆ ಗಿಡಗನಗಿದ
ವ್ವಳಿಸುವುದೆ