ನಿನ್ನನೆನ್ನೆನು ಚೈದ್ಯ ಕೃಷ್ಣನ
ಮನ್ನಣೆಗೆ ಸೆಣಸುವರಿಗಿದೆ ತೊಡ
ರೆನ್ನ ಪಾದದಲೆನುತ ಧರಣಿಯನೊದೆದನಂಘ್ರಿಯಲಿ
ಇನ್ನು ನೀನು ಸುಲೋಚನಾಂಧಕ
ನಿನ್ನೊಡನೆ ಫಲವೇನು ಕದನಕೆ
ಬನ್ನಿ ಮಿಡುಕುಳ್ಳವರೆನುತ ಗಜರಿದನು ಸಹದೇವ (ಸಭಾ ಪರ್ವ, ೯ ಸಂಧಿ, ೪೨ ಪದ್ಯ)
ತಾತ್ಪರ್ಯ:
ಸಹದೇವನು ಶಿಶುಪಾಲನೆದುರು ಗರ್ಜಿಸುತ್ತಾ, ಎಲವೋ ಶಿಶುಪಾಲ, ನಿನಗೇ ನಾನು ಹೇಳುತ್ತಿಲ್ಲ, ಕೃಷ್ಣನನ್ನು ನಾವು ಅಗ್ರಪೂಜೆಯಿಂದ ಮನ್ನಿಸುವೆವು, ಅದನ್ನು ವಿರೋಧಿಸುವರಿಗೆ ನನ್ನ ಪಾದವೇ ಉತ್ತರಕೊಡುತ್ತದೆ ಎಂದು ಭೂಮಿಯನ್ನು ಪಾದದಿಂದ ಹೊಡೆದನು. ಶಿಶುಪಾಲ ನೀನು ಕಣ್ಣಿದ್ದು ಕುರುಡ ನಿನ್ನ ಹತ್ತಿರ ಮಾತಾಡಿ ಫಲವೇನು, ನೆರೆದಿರುವ ರಾಜರೇ ನಿಮ್ಮಲ್ಲಿ ಶಕ್ತಿ, ಧೈರ್ಯ ಇದ್ದವರು ಯುದ್ಧಕ್ಕೆ ಬನ್ನಿ ಎಂದು ಗರ್ಜಿಸಿದನು.
ಅರ್ಥ:
ಚೈದ್ಯ: ಶಿಶುಪಾಲ; ಮನ್ನಣೆ: ಗೌರವ; ಸೆಣಸು: ಹೋರಾದು; ತೊಡರು: ಸರಪಳಿ, ಬಂಧನ; ಪಾದ: ಚರಣ; ಧರಣಿ: ಭೂಮಿ; ಒದೆ: ನೂಕು, ತಳ್ಳು; ಅಂಘ್ರಿ: ಪಾದ; ಸುಲೋಚನ: ಒಳ್ಳೆಯ ಕಣ್ಣುಳ್ಳವ; ಅಂಧ: ಕುರುಡ; ಫಲ: ಪ್ರಯೋಜನ; ಕದನ: ಯುದ್ಧ; ಬನ್ನಿ: ಆಗಮಿಸು; ಮಿಡುಕು:ನಡುಕ, ಕಂಪನ, ಭಯಪಡು; ಗಜರು: ಗರ್ಜಿಸು;
ಪದವಿಂಗಡಣೆ:
ನಿನ್ನನ್+ಎನ್ನೆನು +ಚೈದ್ಯ +ಕೃಷ್ಣನ
ಮನ್ನಣೆಗೆ+ ಸೆಣಸುವರಿಗಿದೆ +ತೊಡರ್
ಎನ್ನ +ಪಾದದಲೆನುತ +ಧರಣಿಯನ್+ಒದೆದನ್+ಅಂಘ್ರಿಯಲಿ
ಇನ್ನು +ನೀನು +ಸುಲೋಚನ+ಅಂಧಕ
ನಿನ್ನೊಡನೆ +ಫಲವೇನು +ಕದನಕೆ
ಬನ್ನಿ+ ಮಿಡುಕುಳ್ಳವರ್+ಎನುತ+ ಗಜರಿದನು +ಸಹದೇವ
ಅಚ್ಚರಿ:
(೧) ಜರಾಸಂಧನನ್ನು ಬಯ್ಯುವ ಬಗೆ – ಇನ್ನು ನೀನು ಸುಲೋಚನಾಂಧಕ ನಿನ್ನೊಡನೆ ಫಲವೇನು