ಪದ್ಯ ೪೨: ಸಹದೇವನು ಏನೆಂದು ಗರ್ಜಿಸಿದನು?

ನಿನ್ನನೆನ್ನೆನು ಚೈದ್ಯ ಕೃಷ್ಣನ
ಮನ್ನಣೆಗೆ ಸೆಣಸುವರಿಗಿದೆ ತೊಡ
ರೆನ್ನ ಪಾದದಲೆನುತ ಧರಣಿಯನೊದೆದನಂಘ್ರಿಯಲಿ
ಇನ್ನು ನೀನು ಸುಲೋಚನಾಂಧಕ
ನಿನ್ನೊಡನೆ ಫಲವೇನು ಕದನಕೆ
ಬನ್ನಿ ಮಿಡುಕುಳ್ಳವರೆನುತ ಗಜರಿದನು ಸಹದೇವ (ಸಭಾ ಪರ್ವ, ೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಸಹದೇವನು ಶಿಶುಪಾಲನೆದುರು ಗರ್ಜಿಸುತ್ತಾ, ಎಲವೋ ಶಿಶುಪಾಲ, ನಿನಗೇ ನಾನು ಹೇಳುತ್ತಿಲ್ಲ, ಕೃಷ್ಣನನ್ನು ನಾವು ಅಗ್ರಪೂಜೆಯಿಂದ ಮನ್ನಿಸುವೆವು, ಅದನ್ನು ವಿರೋಧಿಸುವರಿಗೆ ನನ್ನ ಪಾದವೇ ಉತ್ತರಕೊಡುತ್ತದೆ ಎಂದು ಭೂಮಿಯನ್ನು ಪಾದದಿಂದ ಹೊಡೆದನು. ಶಿಶುಪಾಲ ನೀನು ಕಣ್ಣಿದ್ದು ಕುರುಡ ನಿನ್ನ ಹತ್ತಿರ ಮಾತಾಡಿ ಫಲವೇನು, ನೆರೆದಿರುವ ರಾಜರೇ ನಿಮ್ಮಲ್ಲಿ ಶಕ್ತಿ, ಧೈರ್ಯ ಇದ್ದವರು ಯುದ್ಧಕ್ಕೆ ಬನ್ನಿ ಎಂದು ಗರ್ಜಿಸಿದನು.

ಅರ್ಥ:
ಚೈದ್ಯ: ಶಿಶುಪಾಲ; ಮನ್ನಣೆ: ಗೌರವ; ಸೆಣಸು: ಹೋರಾದು; ತೊಡರು: ಸರಪಳಿ, ಬಂಧನ; ಪಾದ: ಚರಣ; ಧರಣಿ: ಭೂಮಿ; ಒದೆ: ನೂಕು, ತಳ್ಳು; ಅಂಘ್ರಿ: ಪಾದ; ಸುಲೋಚನ: ಒಳ್ಳೆಯ ಕಣ್ಣುಳ್ಳವ; ಅಂಧ: ಕುರುಡ; ಫಲ: ಪ್ರಯೋಜನ; ಕದನ: ಯುದ್ಧ; ಬನ್ನಿ: ಆಗಮಿಸು; ಮಿಡುಕು:ನಡುಕ, ಕಂಪನ, ಭಯಪಡು; ಗಜರು: ಗರ್ಜಿಸು;

ಪದವಿಂಗಡಣೆ:
ನಿನ್ನನ್+ಎನ್ನೆನು +ಚೈದ್ಯ +ಕೃಷ್ಣನ
ಮನ್ನಣೆಗೆ+ ಸೆಣಸುವರಿಗಿದೆ +ತೊಡರ್
ಎನ್ನ +ಪಾದದಲೆನುತ +ಧರಣಿಯನ್+ಒದೆದನ್+ಅಂಘ್ರಿಯಲಿ
ಇನ್ನು +ನೀನು +ಸುಲೋಚನ+ಅಂಧಕ
ನಿನ್ನೊಡನೆ +ಫಲವೇನು +ಕದನಕೆ
ಬನ್ನಿ+ ಮಿಡುಕುಳ್ಳವರ್+ಎನುತ+ ಗಜರಿದನು +ಸಹದೇವ

ಅಚ್ಚರಿ:
(೧) ಜರಾಸಂಧನನ್ನು ಬಯ್ಯುವ ಬಗೆ – ಇನ್ನು ನೀನು ಸುಲೋಚನಾಂಧಕ ನಿನ್ನೊಡನೆ ಫಲವೇನು

ಪದ್ಯ ೪೧: ಸಹದೇವನು ಮುಕುಂದನ ಗುಣಗಾನ ಹೇಗೆ ಮಾಡಿದ?

ಧರಣಿಪತಿಯೇ ಸಕಲ ಧರ್ಮದ
ಪರಮ ಸೀಮೆ ಮುಕುಂದನೇ ಮಾ
ನ್ಯರಿಗೆ ಗುರು ವಂದ್ಯರಿಗೆ ವಂದ್ಯನು ದೈವಕಧಿದೈವ
ಸುರನದೀನಂದನನು ಸಾಕ್ಷಾ
ತ್ಪರಮಶಿವನೀ ಯಜ್ಞಲೋಕೋ
ತ್ತರದ ಮಖವಿದು ನಿನ್ನ ಕುಮತಿಗೆ ಸಾಧ್ಯವಲ್ಲೆಂದ (ಸಭಾ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಸಹದೇವನು ತನ್ನ ಮಾತನ್ನು ಮುಂದುವರಿಸುತ್ತಾ, ಯುಧಿಷ್ಠಿರನು ಸಕಲ ಧರ್ಮದ ಎಲ್ಲೆಯನ್ನು ಬಲ್ಲವನು, ಶ್ರೀಕೃಷ್ಣನು ಮಾನ್ಯರಿಗೆ ಮಾನ್ಯನು, ಪೂಜ್ಯಗೊಳ್ಳುವವರಲ್ಲಿ ಅಗ್ರಗಣ್ಯನು, ದೇವರಲ್ಲಿ ಆದಿ ದೇವನು, ಗಂಗಾಪುತ್ರ ಭೀಷ್ಮರು ಸಾಕ್ಷಾತ್ ಪರಮಶಿವ, ಇಂತಹ ಯಜ್ಞ ಲೋಕದಲ್ಲಿ ಎಂದು ಆಗಿರಲಿಲ್ಲ ಇದು ಲೋಕಕಲ್ಯಾಣಕ್ಕಾಗಿದೆ. ಜರಾಸಂಧ, ನಿನ್ನಂತಹ ದುರ್ಬುದ್ಧಿಯುಳ್ಳವರಿಗೆ ಇದು ತಿಳಿಯಲಾಗುವುದಿಲ್ಲ ಎಂದು ಹೇಳಿದನು.

ಅರ್ಥ:
ಧರಣಿ: ಭೂಮಿ; ಧರಣೀಪತಿ: ರಾಜ; ಸಕಲ: ಎಲ್ಲಾ; ಧರ್ಮ: ಧಾರಣೆ ಮಾಡಿದುದು, ಆಚಾರ; ಪರಮ: ಶ್ರೇಷ್ಠ; ಸೀಮೆ: ಎಲ್ಲೆ; ಮಾನ್ಯ: ಮನ್ನಣೆ, ಪೂಜ್ಯ; ಗುರು: ಆಚಾರ್ಯ; ವಂದ್ಯ: ಪೂಜನೀಯ; ದೈವ: ಭಗವಂತ; ಅಧಿದೈವ: ಶ್ರೇಷ್ಠವಾದ, ಮುಖ್ಯವಾದ ದೈವ; ಸುರನದಿ: ಗಂಗೆ; ನಂದನ: ಮಗ; ಸಾಕ್ಷಾತ್: ಪ್ರತ್ಯಕ್ಷವಾಗಿ; ಪರಮಶಿವ: ಶಂಕರ; ಯಜ್ಞ: ಯಾಗ; ಲೋಕ: ಜಗತ್ತು; ಲೋಕೋತ್ತರ: ಜಗತ್ತಿನ್ನು ಅಭಿವೃದ್ಧಿಯತ್ತ ಒಯ್ಯುವ, ಒಳಿತಾದ; ಉತ್ತರ: ಅಭಿವೃದ್ಧಿ, ಉತ್ತಮ; ಮಖ: ಯಜ್ಞ; ಕುಮತಿ: ದುಷ್ಟಬುದ್ಧಿ; ಸಾಧ್ಯ: ಲಭ್ಯವಾಗುವ;

ಪದವಿಂಗಡಣೆ:
ಧರಣಿಪತಿಯೇ+ ಸಕಲ+ ಧರ್ಮದ
ಪರಮ +ಸೀಮೆ +ಮುಕುಂದನೇ+ ಮಾ
ನ್ಯರಿಗೆ+ ಗುರು +ವಂದ್ಯರಿಗೆ+ ವಂದ್ಯನು +ದೈವಕ್+ಅಧಿದೈವ
ಸುರನದೀನಂದನನು+ ಸಾಕ್ಷಾತ್
ಪರಮಶಿವನ್+ಈ+ ಯಜ್ಞ+ಲೋಕೋ
ತ್ತರದ+ ಮಖವಿದು+ ನಿನ್ನ +ಕುಮತಿಗೆ+ ಸಾಧ್ಯವಲ್ಲೆಂದ

ಅಚ್ಚರಿ:
(೧) ಯಜ್ಞ, ಮಖ – ಸಮನಾರ್ಥಕ ಪದ
(೨) ಕೃಷ್ಣನ ಗುಣಗಾನ – ಮುಕುಂದನೇ ಮಾನ್ಯರಿಗೆ ಗುರು ವಂದ್ಯರಿಗೆ ವಂದ್ಯನು ದೈವಕಧಿದೈವ

ನುಡಿಮುತ್ತುಗಳು: ಸಭಾ ಪರ್ವ, ೯ ಸಂಧಿ

  • ಮುಕುಂದನೇ ಮಾನ್ಯರಿಗೆ ಗುರು ವಂದ್ಯರಿಗೆ ವಂದ್ಯನು ದೈವಕಧಿದೈವ – ಪದ್ಯ ೪೧
  • ಮೌನದಜಲಧಿಯಾಯ್ತಾಸ್ಥಾನದಿದಿರಲಿಪದ್ಯ ೪೦
  • ಅವುಚಿದನು ಮಧುರೋಕ್ತಿಯಲಿ ನುಡಿಸಿದನು ಬೋಳೈಸಿ – ಪದ್ಯ ೪೪
  • ನೊರಜಿನ ಕಳಕಳಕೆ ಕರಿ ಬೆಚ್ಚುವುದೆ, ಮಂಡಳಿಯ ಮರಿ ಮಿಡುಕಿದರೆ ಕಳವಳಿಸುವುದೆ ಕಲಿಸಿಂಹ, ಗಿಳಿಯ ಮುರಕಕೆ ಗಿಡಗನಗಿದ – ಪದ್ಯ ೪೬
  • ಗರುವ ಗರುವನನಖಿಳ ವಿದ್ಯಾ ಪರಿಣತನ ಪರಿಣತನು ವೀರನು ಧುರದ ವೀರನನರಿವನಿಂತಿದು ಲೋಕವಿಖ್ಯಾತ – ಪದ್ಯ ೪೭
  • ಜ್ಞಾನವೃದ್ಧನು ಕೃಷ್ಣನ್ – ಪದ್ಯ ೫೦
  • ನಿಶಾಟರು ಮೆಚ್ಚರಗ್ಗದ ಭಾನುರಶ್ಮಿಯನಂಧಕಾರ ಜ್ಞಾನನಿಷ್ಠರು ನಿಪುಣರೈಸಲೆ – ಪದ್ಯ ೫೧