ಪದ್ಯ ೪೦: ಸಹದೇವನು ಜರಾಸಂಧನಿಗೆ ಏನು ಹೇಳಿದ?

ನಿಲಿಸಿದನು ಕಳವಳವನೀ ಯದು
ಬಲವ ತೆಗೆದನು ಮತ್ತೆ ಮೌನದ
ಜಲಧಿಯಾಯ್ತಾಸ್ಥಾನದಿದಿರಲಿ ನಿಂದು ಸಹದೇವ
ಎಲೆ ಸುನೀತ ವೃಥಾ ವಿರೋಧ
ಸ್ಖಲಿತನಾದೆ ಮುರಾರಿ ಮಾನ್ಯರ
ತಿಲಕನೀತನ ಪೂಜೆ ಯಾಗಕೆ ಕಳಸವಾಯ್ತೆಂದ (ಸಭಾ ಪರ್ವ, ೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಭೀಷ್ಮರು ಯಾದವರ ಸೈನ್ಯದಲ್ಲಾದ ಕಳವಳವನ್ನು ನಿಲ್ಲಿಸಲು ಅವರ ಸೈನ್ಯವು ಹಿಂದಕ್ಕೆ ಹೋಯಿತು. ಆಸ್ಥಾನದಲ್ಲಿ ಮೌನವು ಆವರಿಸಿತು. ಆಗ ಸಹದೇವನು ಎದ್ದುನಿಂತು ಶಿಶುಪಾಲನಿಗೆ, ಎಲವೋ ಸುನೀತ, ಕೃಷ್ಣನ ಮೇಲಿನ ವಿರೋಧದಿಂದ ವೃಥಾ ಆರೋಪ ಮಾದಿ ಜಾರಿ ಬೀಳುತ್ತಿರುವೆ, ಶ್ರೀಕೃಷ್ಣನು ಮಾನ್ಯರಲ್ಲಿ ತಿಲಕಪ್ರಾಯನಾದವನು, ಈತನ ಪೂಜೆಯು ಈ ಮಹಾಯಜ್ಞಕ್ಕೆ ಕಳಶಪ್ರಾಯವಿದ್ದಂತೆ ಎಂದನು.

ಅರ್ಥ:
ನಿಲಿಸು: ತಡೆ; ಕಳವಳ: ಗೊಂದಲ; ಬಲ: ಸೈನ್ಯ; ತೆಗೆ: ಈಚೆಗೆ ತರು, ಹೊರತರು; ಮತ್ತೆ; ಪುನಃ; ಮೌನ: ನಿಶ್ಯಬ್ದ, ಸದ್ದಿಲ್ಲದೆ ಇರುವುದು, ನೀರವತೆ; ಜಲಧಿ; ಸಾಗರ; ಆಸ್ಥಾನ: ದರ್ಬಾರು, ಓಲಗ; ಇದಿರು: ಎದುರು; ನಿಂದು: ನಿಲ್ಲು; ವೃಥಾ: ಸುಮ್ಮನೆ; ವಿರೋಧ: ವೈರ; ಸ್ಖಲಿತ: ಜಾರಿಬಿದ್ದ, ಕಳಚಿ ಬಿದ್ದಿರುವ; ಮುರಾರಿ: ಕೃಷ್ಣ; ಮಾನ್ಯ: ಗೌರವ, ಮನ್ನಣೆ; ತಿಲಕ: ಶ್ರೇಷ್ಠ; ಪೂಜೆ: ಆರಾಧನೆ; ಯಾಗ: ಯಜ್ಞ; ಕಳಸ: ಶ್ರೇಷ್ಠ, ಗಣ್ಯವ್ಯಕ್ತಿ, ಹಿರಿಯ;

ಪದವಿಂಗಡಣೆ:
ನಿಲಿಸಿದನು +ಕಳವಳವನ್+ಈ+ ಯದು
ಬಲವ +ತೆಗೆದನು+ ಮತ್ತೆ+ ಮೌನದ
ಜಲಧಿಯಾಯ್ತ್+ ಆಸ್ಥಾನದ್+ಇದಿರಲಿ+ ನಿಂದು +ಸಹದೇವ
ಎಲೆ +ಸುನೀತ +ವೃಥಾ +ವಿರೋಧ
ಸ್ಖಲಿತನಾದೆ +ಮುರಾರಿ +ಮಾನ್ಯರ
ತಿಲಕನ್+ಈತನ +ಪೂಜೆ +ಯಾಗಕೆ +ಕಳಸವಾಯ್ತೆಂದ

ಅಚ್ಚರಿ:
(೧) ಮೌನದ ಗಾಢತೆಯನ್ನು ವಿವರಿಸುವ ಪದ – ಮೌನದಜಲಧಿಯಾಯ್ತಾಸ್ಥಾನದಿದಿರಲಿ
(೨) ಕೃಷ್ಣನ ಗುಣಗಾನ – ಮುರಾರಿ ಮಾನ್ಯರ ತಿಲಕನೀತನ ಪೂಜೆ ಯಾಗಕೆ ಕಳಸವಾಯ್ತೆಂದ