ದ್ಯುಮಣಿ ಕರ್ಣದ್ಯುಮಣಿಸಹಿತ
ಸ್ತಮಿಸೆ ಕಮಲಿನಿ ಕೌರವನ ಮುಖ
ಕಮಲ ಬಾಡಿತು ತಿಮಿರ ಹೆಚ್ಚಿತು ಶೋಕತಮದೊಡನೆ
ಅಮಳ ಚಕ್ರಾಂಗಕ್ಕೆ ಭೂಪೋ
ತ್ತಮನ ವಿಜಯಾಂಗನೆಗೆ ಅಗಲಿಕೆ
ಸಮನಿಸಿತು ಕೇಳಯ್ಯ ಜನಮೇಜಯ ಮಹೀಪಾಲ (ಕರ್ಣ ಪರ್ವ, ೨೭ ಸಂಧಿ, ೩೧ ಪದ್ಯ)
ತಾತ್ಪರ್ಯ:
ಸೂರ್ಯನು, ಕರ್ಣಭಾಸ್ಕರನೂ ಅಸ್ತಂಗತರಾದರು, ತನ್ನ ಮಿತ್ರನನ್ನು ಕಾಣದೆ ಕಮಲ ಬಾಡಿದರೆ, ತನ್ನ ಆಪ್ತಮಿತ್ರನನ್ನು ಕಳೆದುಕೊಂಡ ದುಃಖದಿಂದ ದುರ್ಯೋಧನನ ಮುಖಕಮಲವು ಮುದುಡಿತು. ಅಂಧಕಾರವು ಹೆಚ್ಚುತ್ತಿದ್ದಂತೆ, ಕೌರವನ ಶೋಕದ ಅಂಧಕಾರವೂ ಹೆಚ್ಚಿತು. ಬಿಸುಲು ಹಕ್ಕಿಗೆ ಸೂರ್ಯನ ಅಗಲಿಕೆಯಾದರೆ, ಕೌರವನಿಗೆ ವಿಜಯಲಕ್ಷ್ಮಿಯ ಅಗಲಿಕೆ ಸಂಭವಿಸಿತು.
ಅರ್ಥ:
ದ್ಯುಮಣಿ: ಸೂರ್ಯ; ಸಹಿತ: ಜೊತೆ; ಅಸ್ತಮಿಸು: ಕಾಣಲಾಗು, ಸಾವು; ಕಮಲ: ಅಂಬುಜ; ಕಮಲಿನಿ: ತಾವರೆಯ ಬಳ್ಳಿ, ಕಮಲಗಳ ಗುಂಪು; ಮುಖ: ಆನನ; ಮುದುಡು: ಬಾಡು, ಸೊರಗು; ತಿಮಿರ: ಅಂಧಕಾರ; ಹೆಚ್ಚು: ಅಧಿಕವಾಗು; ಶೋಕ: ದುಃಖ; ಅಮಳ: ನಿರ್ಮಲ; ಚಕ್ರಾಂಗ: ಚಕ್ರವಾಕ ಪಕ್ಷಿ, ಬಿಸಿಲು ಹಕ್ಕಿ; ಭೂಪೋತ್ತಮ: ರಾಜರಲ್ಲಿ ಉತ್ತಮನಾದವ; ವಿಜಯಾಂಗನೆ: ವಿಜಯಲಕ್ಷ್ಮೀ; ಅಗಲಿಕೆ: ದೂರಹೋಗು; ಸಮನಿಸು: ಘಟಿಸು; ಕೇಳು: ಆಲಿಸು; ಮಹೀಪಾಲ: ರಾಜ;
ಪದವಿಂಗಡಣೆ:
ದ್ಯುಮಣಿ+ ಕರ್ಣದ್ಯುಮಣಿ+ಸಹಿತ್
ಅಸ್ತಮಿಸೆ +ಕಮಲಿನಿ+ ಕೌರವನ ಮುಖ
ಕಮಲ+ ಬಾಡಿತು +ತಿಮಿರ+ ಹೆಚ್ಚಿತು+ ಶೋಕತಮದೊಡನೆ
ಅಮಳ +ಚಕ್ರಾಂಗಕ್ಕೆ+ ಭೂಪೋ
ತ್ತಮನ +ವಿಜಯಾಂಗನೆಗೆ+ ಅಗಲಿಕೆ
ಸಮನಿಸಿತು +ಕೇಳಯ್ಯ +ಜನಮೇಜಯ +ಮಹೀಪಾಲ
ಅಚ್ಚರಿ:
(೧) ಅತ್ಯಂತ ಸುಂದರ ಪರಿಕಲ್ಪನೆಯ ಪದ್ಯ, ಎರಡು ವಿಷಯಗಳನ್ನು ಹೇಳುವ ಸಾಲುಗಳು
(೨) ಕರ್ಣನನ್ನು ಸೂರ್ಯನಿಗೆ ಹೋಲಿಸುವ ಪದ – ಕರ್ಣದ್ಯುಮಣಿ
(೩) ಮಹೀಪಾಲ, ಭೂಪ – ಸಮನಾರ್ಥಕ ಪದ
(೪) ಚಕ್ರಾಂಗ, ವಿಜಯಾಂಗ – ಪ್ರಾಸ ಪದ