ಪದ್ಯ ೩: ಕರ್ಣನ ಧ್ವಜವು ಬೀಳುವುದನ್ನು ನೋಡಿದವರಿಗೆ ಏನಾಯಿತು?

ಆ ಮಹಾಧ್ವಜ ದಂಡ ಪಾತದ
ಡಾಮರದ ದಳವುಳಕೆ ಹೆದರಿತು
ಹಾ ಮಹಾದೇವೇನ ಹೇಳುವೆನೈ ಮಹೀಪತಿಯೆ
ಧೂಮಚುಂಬಿತ ಚಿತ್ರದಂತೆ ಸ
ನಾಮರಿದ್ದುದು ಸೌಬಲಾಶ್ವ
ತ್ಥಾಮ ಕೃಪ ಕೃತವರ್ಮಕಾದಿಗಳೊಂದು ನಿಮಿಷದಲಿ (ಕರ್ಣ ಪರ್ವ, ೨೭ ಸಂಧಿ, ೩ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ ನಾನು ಏನೆಂದು ಹೇಳಲಿ, ಅರ್ಜುನನ ಬಾಣಗಳಿಂದ ಕರ್ಣನ ಧ್ವಜದಂಡವು ಮುರಿಯಲು ಸೈನ್ಯದಲ್ಲಿ ಭಯವು ಆವರಿಸಿತು, ಹಾ ಮಹಾದೇವ, ಪರಾಕ್ರಮಿಗಳಾದ ಶಕುನಿ, ಅಶ್ವತ್ಥಾಮ, ಕೃಪಚಾರ್ಯ, ಕೃತವರ್ಮ ಮುಂತಾದವರು ಒಂದು ನಿಮಿಷ ಸ್ತಬ್ಧರಾಗಿ ನಿಂತರು.

ಅರ್ಥ:
ಧ್ವಜ: ಬಾವುಟ; ಮಹಾ: ದೊಡ್ಡ, ಶ್ರೇಷ್ಠ; ದಂಡ: ಕೋಲು; ಪಾತ: ಬೀಳುವುದು, ಪತನ; ಡಾಮರ: ಭಯಂಕರವಾದ; ದಳ: ಸೈನ್ಯ; ಅಳುಕು: ಹೆದರು; ಹೆದರು: ಭಯಪಡು; ಹೇಳು: ತಿಳಿಸು; ಮಹೀಪತಿ: ರಾಜ; ಮಹೀ: ಭೂಮಿ; ಪತಿ: ಒಡೆಯ; ಧೂಮ: ಹೊಗೆ; ಚುಂಬಿತ: ಮುತ್ತಿದ; ಚಿತ್ರ: ಬರೆದ ಆಕೃತಿ; ಸನಾಮ: ಪ್ರಸಿದ್ಧ ವ್ಯಕ್ತಿ; ಸೌಬಲ: ಶಕುನಿ; ಆದಿ: ಮುಂತಾದ; ನಿಮಿಷ: ಕ್ಷಣಮಾತ್ರ, ಕಾಲಪ್ರಮಾಣ;

ಪದವಿಂಗಡಣೆ:
ಆ+ ಮಹಾಧ್ವಜ +ದಂಡ +ಪಾತದ
ಡಾಮರದ+ ದಳವುಳಕೆ +ಹೆದರಿತು
ಹಾ+ ಮಹಾದೇವ್+ಏನ +ಹೇಳುವೆನೈ+ ಮಹೀಪತಿಯೆ
ಧೂಮಚುಂಬಿತ +ಚಿತ್ರದಂತೆ +ಸ
ನಾಮರಿದ್ದುದು+ ಸೌಬಲ+ಅಶ್ವ
ತ್ಥಾಮ +ಕೃಪ +ಕೃತವರ್ಮಕಾದಿಗಳ್+ಒಂದು +ನಿಮಿಷದಲಿ

ಅಚ್ಚರಿ:
(೧) ಸ್ತಬ್ಧರಾದರು ಎಂದು ಹೇಳಲು – ಧೂಮಚುಂಬಿತ ಚಿತ್ರದಂತೆ ಸನಾಮರಿದ್ದುದು

ನಿಮ್ಮ ಟಿಪ್ಪಣಿ ಬರೆಯಿರಿ