ಪದ್ಯ ೪೭: ಕರ್ಣನು ಯುದ್ಧಕ್ಕೆ ಹೇಗೆ ಸಿದ್ಧನಾದನು?

ರಥದ ಸಂತೈಸಿದನು ಬಳಿಕತಿ
ರಥ ಭಯಂಕರನೇರಿದನು ನಿಜ
ರಥವನತಿಹರುಷದಲಿ ತೊಳೆದನು ಚರಣ ಕರತಳವ
ಪೃಥಿವಿ ನೆನದಪಕಾರ ಲೋಕ
ಪ್ರಥಿತವಾಯಿತು ಸಾಕು ಬದುಕಲಿ
ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ (ಕರ್ಣ ಪರ್ವ, ೨೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕರ್ಣನು ರಥವನ್ನೆತ್ತಿ ಸಿದ್ಧಪಡಿಸಿಕೊಂಡನು. ಅತಿರಥ ಭಯಂಕರನಾದ ಕರ್ಣನು ಕೈಕಾಲುಗಳನ್ನು ತೊಳೆದುಕೊಂಡು, “ಭೂಮಿಯು ನನಗೆ ಮಾಡಿದ ಅಪಕಾರವು ಲೋಕಪ್ರಸಿದ್ಧವಾಯಿತು, ಒಳ್ಳೆಯದು, ಕುಂತಿಯ ಮಕ್ಕಳೇ ಬದುಕಲಿ, ಎನ್ನುತ್ತಾ ನಕ್ಕು ವೀಳೆಯನ್ನು ಹಾಕಿಕೊಂಡನು.

ಅರ್ಥ:
ರಥ: ಬಂಡಿ; ಸಂತೈಸು: ಕಾಪಾಡು, ನಿವಾರಿಸು; ಬಳಿಕ: ನಂತರ; ಅತಿರಥ: ಪರಾಕ್ರಮಿ; ಭಯಂಕರ: ಭೀಕರ, ಉಗ್ರ; ಏರು: ಮೇಲೇಳು; ನಿಜ: ತನ್ನ ಸ್ವಂತ, ದಿಟ; ಹರುಷ: ಸಂತೋಷ; ತೊಳೆ: ಸ್ವಚ್ಛಗೊಳಿಸು; ಚರಣ: ಪಾದ; ಕರತಳ: ಅಂಗೈ; ಪೃಥಿವಿ: ಭೂಮಿ; ಅಪಕಾರ: ಕೆಡಕು ಮಾಡುವವ, ದ್ರೋಹ; ಲೋಕ: ಜಗತ್ತು; ಪ್ರಥಿತ: ಹೆಸರುವಾಸಿಯಾದ; ಸಾಕು: ಇನ್ನು ಬೇಡ, ಪೋಷಿಸು; ಬದುಕು: ಜೀವಿಸು; ಮಕ್ಕಳು: ತನುಜರು; ಕೊಂಡು: ಹಿಡಿದು; ನಗುತ: ಸಂತಸ; ವೀಳೆ: ತಾಂಬೂಲ;

ಪದವಿಂಗಡಣೆ:
ರಥದ +ಸಂತೈಸಿದನು +ಬಳಿಕ್+ಅತಿ
ರಥ +ಭಯಂಕರನ್+ಏರಿದನು +ನಿಜ
ರಥವನ್+ಅತಿ+ಹರುಷದಲಿ +ತೊಳೆದನು +ಚರಣ +ಕರತಳವ
ಪೃಥಿವಿ +ನೆನದ್+ಅಪಕಾರ +ಲೋಕ
ಪ್ರಥಿತವಾಯಿತು +ಸಾಕು +ಬದುಕಲಿ
ಪೃಥೆಯ +ಮಕ್ಕಳೆನುತ್ತ+ ಕೊಂಡನು +ನಗುತ +ವೀಳೆಯವ

ಅಚ್ಚರಿ:
(೧) ೧-೩ ಸಾಲಿನ ಮೊದಲ ಪದ “ರಥ”, ೪-೬ ಸಾಲು “ಪೃಥಿ, ಪೃಥ”
(೨) ಕರ್ಣನ ನೋವಿನ ನುಡಿ – ಪೃಥಿವಿ ನೆನದಪಕಾರ ಲೋಕ ಪ್ರಥಿತವಾಯಿತು ಸಾಕು ಬದುಕಲಿ
ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ

ನಿಮ್ಮ ಟಿಪ್ಪಣಿ ಬರೆಯಿರಿ