ರಥದ ಸಂತೈಸಿದನು ಬಳಿಕತಿ
ರಥ ಭಯಂಕರನೇರಿದನು ನಿಜ
ರಥವನತಿಹರುಷದಲಿ ತೊಳೆದನು ಚರಣ ಕರತಳವ
ಪೃಥಿವಿ ನೆನದಪಕಾರ ಲೋಕ
ಪ್ರಥಿತವಾಯಿತು ಸಾಕು ಬದುಕಲಿ
ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ (ಕರ್ಣ ಪರ್ವ, ೨೬ ಸಂಧಿ, ೪೭ ಪದ್ಯ)
ತಾತ್ಪರ್ಯ:
ಕರ್ಣನು ರಥವನ್ನೆತ್ತಿ ಸಿದ್ಧಪಡಿಸಿಕೊಂಡನು. ಅತಿರಥ ಭಯಂಕರನಾದ ಕರ್ಣನು ಕೈಕಾಲುಗಳನ್ನು ತೊಳೆದುಕೊಂಡು, “ಭೂಮಿಯು ನನಗೆ ಮಾಡಿದ ಅಪಕಾರವು ಲೋಕಪ್ರಸಿದ್ಧವಾಯಿತು, ಒಳ್ಳೆಯದು, ಕುಂತಿಯ ಮಕ್ಕಳೇ ಬದುಕಲಿ, ಎನ್ನುತ್ತಾ ನಕ್ಕು ವೀಳೆಯನ್ನು ಹಾಕಿಕೊಂಡನು.
ಅರ್ಥ:
ರಥ: ಬಂಡಿ; ಸಂತೈಸು: ಕಾಪಾಡು, ನಿವಾರಿಸು; ಬಳಿಕ: ನಂತರ; ಅತಿರಥ: ಪರಾಕ್ರಮಿ; ಭಯಂಕರ: ಭೀಕರ, ಉಗ್ರ; ಏರು: ಮೇಲೇಳು; ನಿಜ: ತನ್ನ ಸ್ವಂತ, ದಿಟ; ಹರುಷ: ಸಂತೋಷ; ತೊಳೆ: ಸ್ವಚ್ಛಗೊಳಿಸು; ಚರಣ: ಪಾದ; ಕರತಳ: ಅಂಗೈ; ಪೃಥಿವಿ: ಭೂಮಿ; ಅಪಕಾರ: ಕೆಡಕು ಮಾಡುವವ, ದ್ರೋಹ; ಲೋಕ: ಜಗತ್ತು; ಪ್ರಥಿತ: ಹೆಸರುವಾಸಿಯಾದ; ಸಾಕು: ಇನ್ನು ಬೇಡ, ಪೋಷಿಸು; ಬದುಕು: ಜೀವಿಸು; ಮಕ್ಕಳು: ತನುಜರು; ಕೊಂಡು: ಹಿಡಿದು; ನಗುತ: ಸಂತಸ; ವೀಳೆ: ತಾಂಬೂಲ;
ಪದವಿಂಗಡಣೆ:
ರಥದ +ಸಂತೈಸಿದನು +ಬಳಿಕ್+ಅತಿ
ರಥ +ಭಯಂಕರನ್+ಏರಿದನು +ನಿಜ
ರಥವನ್+ಅತಿ+ಹರುಷದಲಿ +ತೊಳೆದನು +ಚರಣ +ಕರತಳವ
ಪೃಥಿವಿ +ನೆನದ್+ಅಪಕಾರ +ಲೋಕ
ಪ್ರಥಿತವಾಯಿತು +ಸಾಕು +ಬದುಕಲಿ
ಪೃಥೆಯ +ಮಕ್ಕಳೆನುತ್ತ+ ಕೊಂಡನು +ನಗುತ +ವೀಳೆಯವ
ಅಚ್ಚರಿ:
(೧) ೧-೩ ಸಾಲಿನ ಮೊದಲ ಪದ “ರಥ”, ೪-೬ ಸಾಲು “ಪೃಥಿ, ಪೃಥ”
(೨) ಕರ್ಣನ ನೋವಿನ ನುಡಿ – ಪೃಥಿವಿ ನೆನದಪಕಾರ ಲೋಕ ಪ್ರಥಿತವಾಯಿತು ಸಾಕು ಬದುಕಲಿ
ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ