ಪದ್ಯ ೪೧: ಅರ್ಜುನನನ್ನು ಪ್ರೇರೇಪಿಸಲು ಕೃಷ್ಣನು ಯಾವ ಮಾರ್ಗವನ್ನು ಪ್ರಯೋಗಿಸಿದನು?

ಮತ್ತೆ ಜರೆದನು ದನುಜರಿಪು ತಲೆ
ಗುತ್ತಿದನು ಕಲಿ ಪಾರ್ಥನಾತನ
ಕುತ್ತಿ ಬರಸೆಳೆದಂತೆ ಭಂಗಿಸಿದನು ಮುರಧ್ವಂಸಿ
ಒತ್ತುವವು ಫಲುಗುಣನ ನುಡಿ ಮಿಗೆ
ಕೆತ್ತುವವು ಹರಿವಚನವಾತನ
ಚಿತ್ತವನು ಸಂತೈಸಿ ಹರಿ ತಿಳುಹಿದನು ಸಾಮದಲಿ (ಕರ್ಣ ಪರ್ವ, ೨೬ ಸಂಧಿ, ೪೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮತ್ತೆ ಅರ್ಜುನನನ್ನು ಜರೆಯಲು ಅರ್ಜುನನು ತಲೆ ತಗ್ಗಿಸಿದನು. ಅವನನ್ನು ಹೊಡೆದೆಳೆದಂತೆ ಕೃಷ್ಣನು ಹಂಗಿಸಿದನು. ಕೃಷ್ಣನ ಮಾತುಗಳು ಾವನನ್ನು ಯುದ್ಧಮಾಡಲು ಪ್ರಚೋದಿಸಿದವು, ಅರ್ಜುನನ ಮಾತುಗಳು ಅದನ್ನು ನಿರಾಕರಿಸಿದವು, ಕೊನೆಗೆ ಕೃಷ್ಣನು ಸಾಮೋಪಾಯದಿಂದ ಅರ್ಜುನನನ್ನು ಒಡಂಬಡಿಸಲು ಯತ್ನಿಸಿದನು.

ಅರ್ಥ:
ಜರೆ: ಬಯ್ಯು; ದನುಜರಿಪು: ರಾಕ್ಷಸರ ವೈರಿ; ತಲೆ: ಶಿರ; ಕಲಿ: ಶೂರ; ಕುತ್ತು: ಹೊಡೆತ, ಪೆಟ್ಟು; ಬರಸೆಳೆ: ಹತ್ತಿರಕ್ಕೆ ಬರುವಂತೆ ಎಳೆ; ಭಂಗಿಸು: ಮುರಿ; ಮುರಧ್ವಂಸಿ: ಕೃಷ್ಣ; ಒತ್ತು: ಒತ್ತಡ ಹತ್ತಿರ; ನುಡಿ: ಮಾತು; ಮಿಗೆ: ಮತ್ತು; ಕೆತ್ತು:ನಡುಕ, ಸ್ಪಂದನ; ವಚನ: ನುಡಿ, ಮಾತು; ಚಿತ್ತ: ಮನಸ್ಸು; ಸಂತೈಸು: ಸಮಾಧಾನಪಡಿಸು; ತಿಳುಹು: ತಿಳಿಸು, ಹೇಳು; ಸಾಮ: ಶಾಂತಗೊಳಿಸುವಿಕೆ, ಕಾರ್ಯ ಸಾಧನೆಯ ಚತುರೋಪಾಯಗಳಲ್ಲಿ ಒಂದು;

ಪದವಿಂಗಡಣೆ:
ಮತ್ತೆ +ಜರೆದನು +ದನುಜರಿಪು +ತಲೆ
ಗುತ್ತಿದನು+ ಕಲಿ +ಪಾರ್ಥನ್+ಆತನ
ಕುತ್ತಿ +ಬರಸೆಳೆದಂತೆ +ಭಂಗಿಸಿದನು +ಮುರಧ್ವಂಸಿ
ಒತ್ತುವವು +ಫಲುಗುಣನ+ ನುಡಿ +ಮಿಗೆ
ಕೆತ್ತುವವು +ಹರಿವಚನವ್+ಆತನ
ಚಿತ್ತವನು +ಸಂತೈಸಿ +ಹರಿ +ತಿಳುಹಿದನು +ಸಾಮದಲಿ

ಅಚ್ಚರಿ:
(೧) ಕುತ್ತು, ಒತ್ತು, ಕೆತ್ತು, – ಪದಗಳ ಬಳಕೆ
(೨) ಕಾರ್ಯಸಾಧನೆಯ ಹಲವು ಮಾರ್ಗಗಳನ್ನು ಉಪಯೋಗಿಸಿದ ಕೃಷ್ಣ
(೩) ದನುಜರಿಪು, ಮುರಧ್ವಂಸಿ, ಹರಿ; ನುಡಿ, ವಚನ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ