ಕೊಲ್ಲನೇ ಅಭಿಮನ್ಯುವನು ಹಗೆ
ಯಲ್ಲವೇ ಮಾರುತಿಯ ಕೊರಳನು
ಬಿಲ್ಲ ಕೊಪ್ಪಿನೊಳೆಳೆಯನೇ ಕೆಡೆಯೆಸನೆ ಧರ್ಮಜನ
ಖುಲ್ಲನೀತಿಯ ನೆನೆಯದಿರು ನೀ
ನೆಲ್ಲಿಯವನೀ ವೈರಿ ಕರ್ಣನ
ದೆಲ್ಲಿಯವನೆಸು ಮರುಳೆ ಎಂದನು ನಿಜವ ತೋರಿಸದೆ (ಕರ್ಣ ಪರ್ವ, ೨೬ ಸಂಧಿ, ೪೪ ಪದ್ಯ)
ತಾತ್ಪರ್ಯ:
ಎಲೈ ಅರ್ಜುನ, ಕರ್ಣನು ನಿನ್ನ ಮಗ ಅಭಿಮನ್ಯುವನ್ನು ಕೊಲ್ಲಲಿಲ್ಲವೇ? ನಿಮ್ಮ ವೈರಿಯಲ್ಲವೇ? ಭೀಮನ ಕೊರಳನ್ನು ಬಿಲ್ಲಕೊಪ್ಪಿನಿಂದ ಎಳೆಯಲಿಲ್ಲವೇ? ಧರ್ಮಜನು ಬೀಳುವಂತೆ ಇವನು ಹೊಡೆಯಲಿಲ್ಲವೇ? ದುಷ್ಟ ನೀತಿಯನ್ನು ಅನುಸರಿಸಬೇಡ, ನೀನೆಲ್ಲಿ ಈ ಕರ್ಣನೆಲ್ಲಿ, ಬಾಣದಿಂದ ಹೊಡೆದು ಕೆಡುವು ಇವನನ್ನು ಎಂದು ಕೃಷ್ಣನು ಅರ್ಜುನನಿಗೆ ಹೇಳಿದನು.
ಅರ್ಥ:
ಕೊಲ್ಲು: ಸಾಯಿಸು; ಹಗೆ: ವೈರಿ; ಮಾರುತಿ: ಭೀಮ; ಕೊರಳು: ಗಂಟಲು; ಕೊಪ್ಪು: ಬಿಲ್ಲಿನ ಕೊನೆ; ಎಳೆ: ತನ್ನ ಕಡೆಗೆ ಸೆಳೆದುಕೊ; ಕೆಡೆ: ಕೆಟ್ಟದ್ದು; ಖುಲ್ಲ: ದುಷ್ಟ, ನೀಚ; ನೀತಿ: ಒಯ್ಯುವಿಕೆ; ನೆನೆ: ಜ್ಞಾಪಿಸಿಕೊ; ವೈರಿ: ಶತ್ರು; ಎಸು: ಬಾಣ ಬಿಡು; ಮರುಳು: ಹುಚ್ಚ; ನಿಜ: ದಿಟ; ತೋರು: ಗೋಚರಿಸು, ಪ್ರದರ್ಶಿಸು;
ಪದವಿಂಗಡಣೆ:
ಕೊಲ್ಲನೇ +ಅಭಿಮನ್ಯುವನು +ಹಗೆ
ಯಲ್ಲವೇ +ಮಾರುತಿಯ +ಕೊರಳನು
ಬಿಲ್ಲ +ಕೊಪ್ಪಿನೊಳ್+ಎಳೆಯನೇ+ ಕೆಡೆಯೆಸನೆ +ಧರ್ಮಜನ
ಖುಲ್ಲ+ನೀತಿಯ +ನೆನೆಯದಿರು +ನೀ
ನೆಲ್ಲಿ+ಅವನ್+ಈ+ ವೈರಿ +ಕರ್ಣನದ್
ಎಲ್ಲಿಯವನ್+ಎಸು +ಮರುಳೆ +ಎಂದನು +ನಿಜವ +ತೋರಿಸದೆ
ಅಚ್ಚರಿ:
(೧) ಹಗೆ, ವೈರಿ – ಸಮನಾರ್ಥಕ ಪದ
(೨) ಅರ್ಜುನನಿಗೆ ಬುದ್ಧಿವಾದ ನೀಡುವ ಪರಿ – ಖುಲ್ಲನೀತಿಯ ನೆನೆಯದಿರು, ವೈರಿ ಕರ್ಣನ
ದೆಲ್ಲಿಯವನೆಸು ಮರುಳೆ ಎಂದನು ನಿಜವ ತೋರಿಸದೆ