ಪದ್ಯ ೨೭: ಅರ್ಜುನನು ಕರ್ಣನಾರೆಂದು ಕೃಷ್ಣನಲ್ಲಿ ಕೇಳಿದನು – ೪?

ಕಾಲಯವನನುಪಾಯದಿಂದವೆ
ಬೀಳಿಸಿದೆ ಮಾಗಧನನಾ ಪರಿ
ಸೀಳಿಸಿದೆ ಭೀಷ್ಮಾದಿಗಳ ಸೋಲಿಸಿದೆ ಸಾಮದಲಿ
ಡಾಳನತಿ ಡೊಂಕಣಿಯ ಠಕ್ಕಿನ
ಠೌಳಿಕಾರನು ನಿನ್ನ ಮಾಯೆಯ
ಹೇಳಲಮ್ಮೆನು ಕೃಷ್ಣ ಕರುಣಿಸು ಕರ್ಣನಾರೆಂದ (ಕರ್ಣ ಪರ್ವ, ೨೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಕೃಷ್ಣ ನೀನು ಕಾಲಯವನನ್ನು ಉಪಾಯದಿಂದ ಕೊಲ್ಲಿಸಿದೆ, ಜರಾಸಂಧನನ್ನು ಹೇಗೆ ಸೀಳಿಸಿದೆಯೆಂದು ನಾನೇ ನೋಡಿದ್ದೇನೆ. ಭೀಷ್ಮ, ದ್ರೋಣರನ್ನು ಸಾಮೋಪಾಯದಿಂದ ಕೊಲ್ಲಿಸಿದೆ ಎಂದು ನಾನು ತಿಳಿದಿರವೆ, ನೀನು ವಂಚಕ, ಮಹಾ ಮೋಸಗಾರ, ವಕ್ರಮಾರ್ಗದ ಠಕ್ಕಿನವನು, ನಿನ್ನ ಮಾಯೆಯನ್ನು ವರ್ಣಿಸಲು ಮಾತುಗಳಿಲ್ಲ. ದಯವಿಟ್ಟು ಕೃಷ್ಣ ಕರ್ಣನು ಯಾರೆಂದು ತಿಳಿಸು.

ಅರ್ಥ:
ಉಪಾಯ: ಯುಕ್ತಿ; ಬೀಳಿಸು: ಅಳಿ, ಕೊಲ್ಲು; ಮಾಗಧ: ಜರಾಸಂಧ; ಸೀಳಿಸು: ಕತ್ತರಿಸು; ಸೋಲಿಸು: ಪರಾಭವ; ಸಾಮ: ಒಡಂ ಬಡಿಕೆ, ಕಾರ್ಯ ಸಾಧನೆಯ ಚತುರೋಪಾಯಗಳಲ್ಲಿ ಒಂದು; ಡಾಳ: ಮೋಸ; ಡೊಂಕಣಿ: ಈಟಿ; ಠಕ್ಕು:ಮೋಸ; ಠೌಳಿ:ಮೋಸ, ವಂಚನೆ; ಮಾಯ:ಗಾರುಡಿ, ಇಂದ್ರಜಾಲ, ಮೋಸ; ಹೇಳು: ತಿಳಿಸು; ಕರುಣಿಸು: ದಯಪಾಲಿಸು;

ಪದವಿಂಗಡಣೆ:
ಕಾಲಯವನನ್+ಉಪಾಯದಿಂದವೆ
ಬೀಳಿಸಿದೆ+ ಮಾಗಧನನ್+ಆ+ ಪರಿ
ಸೀಳಿಸಿದೆ +ಭೀಷ್ಮಾದಿಗಳ +ಸೋಲಿಸಿದೆ +ಸಾಮದಲಿ
ಡಾಳನತಿ+ ಡೊಂಕಣಿಯ +ಠಕ್ಕಿನ
ಠೌಳಿಕಾರನು+ ನಿನ್ನ +ಮಾಯೆಯ
ಹೇಳಲಮ್ಮೆನು+ ಕೃಷ್ಣ+ ಕರುಣಿಸು +ಕರ್ಣನಾರೆಂದ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೃಷ್ಣ ಕರುಣಿಸು ಕರ್ಣನಾರೆಂದ
(೨) ಕೃಷ್ಣನನ್ನು ಮೋಸಗಾರ ಎಂದು ಹೇಳುವ ಬಗೆ – ಡಾಳನತಿ ಡೊಂಕಣಿಯ ಠಕ್ಕಿನ
ಠೌಳಿಕಾರನು

ನಿಮ್ಮ ಟಿಪ್ಪಣಿ ಬರೆಯಿರಿ