ಏನನೆಂಬೆನು ಜೀಯ ಕರ್ಣಂ
ಗೇನಹನೊ ಫಲುಗುಣನು ಬಳಿಕಾ
ದಾನವಾರಿಯ ನುಡಿಯ ಕೇಳಿದಉ ಕೇಳಿದಾಕ್ಷಣಕೆ
ಗ್ಲಾನಿಯಲಿ ಮುಳುಗಿದನು ಮನದಭಿ
ಮಾನ ಸರ್ಪನ ಕೆಡಹಿ ಧೈರ್ಯನಿ
ಧಾನವನು ಕೈಸೂರೆಗೊಂಡುದು ಶೋಕವರ್ಜುನನ (ಕರ್ಣ ಪರ್ವ, ೨೬ ಸಂಧಿ, ೨೧ ಪದ್ಯ)
ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ವಿವರಿಸುತ್ತಾ, ಒಡೆಯ ನಾನು ಏನೆಂದು ಹೇಳಲಿ, ಅರ್ಜುನನು ಕರ್ಣನಿಗೆ ಏನಾಗಬೇಕೋ ಏನೋ? ಶ್ರೀಕೃಷ್ಣನ ಮಾತನ್ನು ಕೇಳಿ, ಅವನು ಚಿಂತೆಯಿಂದ ಜಡನಾದನು. ಅವನ ಶೋಕವು ಸ್ವಾಮಿಭಾನವೆಂಬ ಸರ್ಪವನ್ನು ಕೊಂದು ಧೈರ್ಯನಿಧಿಯನ್ನು ಅಪಹರಿಸಿತು.
ಅರ್ಥ:
ಜೀಯ: ಒಡೆಯ; ಏನಹು: ಏನನ್ನೆಲಿ; ಬಳಿಕ: ನಂತರ; ದಾನವಾರಿ: ರಾಕ್ಷಸರ ವೈರಿ; ನುಡಿ: ಮಾತು; ಕೇಳು: ಆಲಿಸು; ಗ್ಲಾನಿ: ಬಳಲಿಕೆ, ದಣಿವು; ಮುಳುಗು: ಮರೆಯಾಗು, ಹುದುಗಿರು; ಮನ: ಮನಸ್ಸು; ಅಭಿಮಾನ: ಹೆಮ್ಮೆ, ಅಹಂಕಾರ; ಸರ್ಪ: ಹಾವು; ಕೆಡಹು: ಹೊಡೆ; ಧೈರ್ಯ: ಎದೆಗಾರಿಕೆ, ಕೆಚ್ಚು, ದಿಟ್ಟತನ; ನಿಧಾನ: ವಿಳಂಬ, ಸಾವಕಾಶ; ಸೂರೆ: ಕೊಳ್ಳೆ, ಲೂಟಿ; ಶೋಕ: ದುಃಖ;
ಪದವಿಂಗಡಣೆ:
ಏನನೆಂಬೆನು +ಜೀಯ +ಕರ್ಣಂಗ್
ಏನಹನೊ+ ಫಲುಗುಣನು +ಬಳಿಕ+ಆ
ದಾನವಾರಿಯ +ನುಡಿಯ +ಕೇಳಿದು+ ಕೇಳಿದಾಕ್ಷಣಕೆ
ಗ್ಲಾನಿಯಲಿ +ಮುಳುಗಿದನು +ಮನದ್+ಅಭಿ
ಮಾನ +ಸರ್ಪನ +ಕೆಡಹಿ +ಧೈರ್ಯ+ನಿ
ಧಾನವನು +ಕೈಸೂರೆಗೊಂಡುದು +ಶೋಕವ್+ಅರ್ಜುನನ
ಅಚ್ಚರಿ:
(೧) ಉಪಮಾನದ ಪ್ರಯೋಗ – ಗ್ಲಾನಿಯಲಿ ಮುಳುಗಿದನು ಮನದಭಿಮಾನ ಸರ್ಪನ ಕೆಡಹಿ ಧೈರ್ಯನಿಧಾನವನು ಕೈಸೂರೆಗೊಂಡುದು ಶೋಕವರ್ಜುನನ