ಪದ್ಯ ೧೩: ಕರ್ಣನ ಸಾಹಸವನ್ನು ಯಾರು, ಹೇಗೆ ತಡೆದರು?

ಧರೆ ನೆನೆದ ದುಷ್ಕೃತವದೇನೆಂ
ದರಸ ಬೆಸಗೊಂಬೈ ನಿರಂತರ
ಸುರಿವ ರುಧಿರಾಸಾರದಲಿ ಕೆಸರೆದ್ದು ಕಳನೊಳಗೆ
ಹರಿವ ಬಿಂಕದ ರಥದ ಗಾಲಿಯ
ಗರುವತನ ಗಾಳಾಯ್ತಲೇ ಖೊ
ಪ್ಪರಿಸಿ ತಗ್ಗಿತು ತೇರು ತಡೆದುದು ಭಟನ ಸಾಹಸವ (ಕರ್ಣ ಪರ್ವ, ೨೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಭೂಮಿಯು ಮಾಡಿದ ದುಷ್ಕರ್ಮವೇನೆಂದು ಕೇಳುವೆಯಾ ರಾಜ ಧೃತರಾಷ್ಟ್ರ? ಇಷ್ಟುದಿನ ಎಡೆಬಿಡದೆ ಸುರಿದ ರಕ್ತದ ಧಾರೆಯಿಂದ ರಣರಂಗದಲ್ಲಿ ಕೆಸರೆದ್ದು ಚಲಿಸುತ್ತಿದ್ದ ಕರ್ಣನ ರಥದ ಗಾಲಿಗಳ ಬಿಂಕ ಬಯಲಾಗಿ, ರಥವು ಭೂಮಿಯಲ್ಲಿ ಸಿಕ್ಕುಹಾಕಿಕೊಂಡು ಕರ್ಣನ ಸಾಹಸವನ್ನು ತಡೆಯಿತು.

ಅರ್ಥ:
ಧರೆ: ಭೂಮಿ; ನೆನೆ: ತೋಯು; ದುಷ್ಕೃತ: ಕೆಟ್ಟ ಕೆಲಸ; ಅರಸ: ರಾಜ; ಬೆಸ: ಆದೇಶ, ಕೇಳು; ನಿರಂತರ: ಯಾವಾಗಲು; ಸುರಿ: ವರ್ಷಿಸು; ರುಧಿರ: ರಕ್ತ; ಆಸಾರ: ಜಡಿಮಳೆ, ಮುತ್ತಿಗೆ ಹಾಕುವುದು; ಕೆಸರು: ರಾಡಿ, ಪಂಕ; ಕಳ: ರಣರಂಗ; ಹರಿ: ಪ್ರವಾಹ, ನೀರಿನ ಹರಿವು; ಬಿಂಕ: ಗರ್ವ, ಜಂಬ; ರಥ: ಬಂಡಿ; ಗಾಲಿ: ಚಕ್ರ; ಗರುವ: ಸೊಕ್ಕು; ಗಾಳ: ಕೊಕ್ಕೆ, ಕುತಂತ್ರ; ಖೊಪ್ಪರಿಸು: ಮೀರು, ಹೆಚ್ಚು; ತಗ್ಗು: ಕಡಿಮೆಯಾಗು; ತೇರು: ರಥ; ತಡೆ: ನಿಲ್ಲು; ಭಟ: ಸೈನಿಕ; ಸಾಹಸ: ಪರಾಕ್ರಮ;

ಪದವಿಂಗಡಣೆ:
ಧರೆ +ನೆನೆದ +ದುಷ್ಕೃತವದ್+ಏನೆಂದ್
ಅರಸ+ ಬೆಸಗೊಂಬೈ +ನಿರಂತರ
ಸುರಿವ +ರುಧಿರ+ಆಸಾರದಲಿ +ಕೆಸರೆದ್ದು +ಕಳನೊಳಗೆ
ಹರಿವ+ ಬಿಂಕದ +ರಥದ+ ಗಾಲಿಯ
ಗರುವತನ+ ಗಾಳಾಯ್ತಲೇ+ ಖೊ
ಪ್ಪರಿಸಿ+ ತಗ್ಗಿತು+ ತೇರು +ತಡೆದುದು +ಭಟನ+ ಸಾಹಸವ

ಅಚ್ಚರಿ:
(೧) ತ್ರಿವಳಿ ಪದಗಳು – ಗಾಲಿಯ ಗರುವತನ ಗಾಳಾಯ್ತಲೇ; ತಗ್ಗಿತು ತೇರು ತಡೆದುದು

ನಿಮ್ಮ ಟಿಪ್ಪಣಿ ಬರೆಯಿರಿ