ಕಳೆದ ಹೂವಿನ ಪರಿಮಳವೊ ಧರೆ
ಗಿಳಿದ ಸೂರ್ಯಪ್ರಭೆಯೊ ಶರದದ
ಹೊಳೆಯೊ ಮೇಘಸ್ಥಿತಿಯೊ ಸುರಪತಿ ಚಾಪ ವಿಭ್ರಮವೊ
ಇಳಿದ ಜವ್ವನದೊಲುಮೆಯೋ ಕುರು
ಬಲವ ಕಂಡೆನು ಜೀಯ ಜಯದ
ಗ್ಗಳಿಕೆಗಳ ಜಾರುಗಳ ನಿನ್ನ ಕುಮಾರನೊಡ್ಡಿನಲಿ (ಕರ್ಣ ಪರ್ವ, ೨೬ ಸಂಧಿ, ೨ ಪದ್ಯ)
ತಾತ್ಪರ್ಯ:
ಪರಿಮಳವನ್ನು ಕಳೆದುಕೊಂಡ ಹೂವು ಮುದುಡುವಹಾಗೆ, ಸೂರ್ಯನ ಅಸ್ತಂಗತನಾದ ಬಳಿಕೆ ಇಲ್ಲದ ಸೂರ್ಯನ ಪ್ರಭೆ, ಶರತ್ಕಾಲದ ಕಾಂತಿ, ಮೋಡಗಳ ಸ್ಥಿತಿ, ಕಾಮನಬಿಲ್ಲನ ಸೌಂದರ್ಯ, ಯೌವ್ವನವಿಳಿದ ಪ್ರೇಮ, ಹೀಗೆ ಕುರುಸೈನ್ಯವು ತನ್ನ ಪ್ರಭೆಯನ್ನು ಕಳೆದುಕೊಂಡಿತು.
ಅರ್ಥ:
ಕಳಿದ: ತೀರಿಹೋದ; ಹೂವು: ಪುಷ್ಪ; ಪರಿಮಳ: ಸುಗಂಧ; ಧರೆ: ಭೂಮಿ; ಇಳಿ: ಕೆಳಕ್ಕೆ ಹೋಗು; ಸೂರ್ಯ: ರವಿ; ಪ್ರಭೆ: ಕಾಂತಿ; ಸುರಪತಿ: ಇಂದ್ರ; ಚಾಪ: ಬಿಲ್ಲು; ಶರದ: ಶರತ್ಕಾಲ; ಹೊಳೆ: ಕಾಂತಿ; ಮೇಘ: ಮೋಡ; ಸ್ಥಿತಿ: ಇರವು, ಅಸ್ತಿತ್ವ; ವಿಭ್ರಮ: ಅಲೆದಾಟ, ಸುತ್ತಾಟ; ಜವ್ವನ: ಯೌವನ; ಒಲುಮೆ: ಪ್ರೀತಿ; ಬಲ: ಸೈನ್ಯ; ಕಂಡೆ: ನೋಡು; ಜೀಯ: ಒಡೆಯ; ಜಯ: ಗೆಲುವು; ಅಗ್ಗಳಿಕೆ: ಹಿರಿಮೆ; ಜಾರು: ಕೆಳಕ್ಕೆ ಬೀಳು; ಒಡ್ಡು: ಸೈನ್ಯ, ಗುಂಪು;
ಪದವಿಂಗಡಣೆ:
ಕಳೆದ +ಹೂವಿನ +ಪರಿಮಳವೊ +ಧರೆ
ಗಿಳಿದ +ಸೂರ್ಯಪ್ರಭೆಯೊ +ಶರದದ
ಹೊಳೆಯೊ +ಮೇಘಸ್ಥಿತಿಯೊ +ಸುರಪತಿ+ ಚಾಪ +ವಿಭ್ರಮವೊ
ಇಳಿದ +ಜವ್ವನದ್+ಒಲುಮೆಯೋ +ಕುರು
ಬಲವ +ಕಂಡೆನು +ಜೀಯ +ಜಯದ್
ಅಗ್ಗಳಿಕೆಗಳ+ ಜಾರುಗಳ+ ನಿನ್ನ +ಕುಮಾರನ್+ಒಡ್ಡಿನಲಿ
ಅಚ್ಚರಿ:
(೧) ಉಪಮಾನಗಳ ಸಾಲನ್ನು ಈ ಕವನದಲ್ಲಿ ಕಾಣಬಹುದು
(೨) ಮುಪ್ಪು ಎಂದು ಹೇಳಲು – ಇಳಿದ ಜವ್ವನ
(೩) ಕಾಮನಬಿಲ್ಲು ಎಂದು ಹೇಳಲು – ಸುರಪತಿ ಚಾಪ
(೪) ಜ ಕಾರದ ತ್ರಿವಳಿ ಪದ – ಜೀಯ ಜಯದಗ್ಗಳಿಕೆಗಳ ಜಾರುಗಳ