ಪದ್ಯ ೧೫: ಕರ್ಣನಿಟ್ಟ ಗುರಿಬಗ್ಗೆ ಶಲ್ಯನು ಏನು ಹೇಳಿದ?

ಆಯಿತಿದು ಸರಳೊಳ್ಳಿತೈ ಕುರು
ರಾಯನಭ್ಯುದಯ ಪ್ರಪಂಚವಿ
ದಾಯಿತೌ ಸಂಧಾನವೊಡಬಡದೆನ್ನ ಚಿತ್ತದಲಿ
ಸಾಯಕವ ನೀ ತಿರುಗಿ ತೊಡು ನಿ
ರ್ದಾಯದಲಿ ನೆಲನಹುದಲಾ ರಾ
ಧೇಯ ಎಂದನು ಶಲ್ಯನವನೀಪಾಲ ಕೇಳೆಂದ (ಕರ್ಣ ಪರ್ವ, ೨೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶಲ್ಯನು ಕರ್ಣನಿಗೆ ತನ್ನ ಮಾತನ್ನು ಮುಂದುವರಿಸುತ್ತಾ, ಈ ಅಸ್ತ್ರವೇನೋ ಅತಿ ಶ್ರೇಷ್ಠವಾದುದು, ಇದು ಕುರುರಾಯನ ಅಭ್ಯುದಯಕ್ಕೆ ಸಾಧನವಾಗಿದೆ. ಆದರೆ ನೀನಿಟ್ಟ ಗುರಿ ನನ್ನ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ. ನೀನು ಈ ಬಾಣವನ್ನು ಮತ್ತೆ ಹೂಡಿದರೆ ಕೌರವನಿಗೆ ನಿಶ್ಚಯವಾಗಿ ರಾಜ್ಯಾಧಿಪತ್ಯ ದೊರಕುತ್ತದೆ ಎಂದನು.

ಅರ್ಥ:
ಆಯಿತು: ತೀರಿತು, ಮುಗಿಯಿತು; ಸರಳು: ಬಾಣ; ರಾಯ: ರಾಜ; ಅಭ್ಯುದಯ: ಅಭಿವೃದ್ಧಿ; ಪ್ರಪಂಚ: ಜಗತ್ತು; ಸಂಧಾನ: ಸಂಯೋಗ, ಹೊಂದಿಸುವುದು; ಒಡಬಡಿಸು: ಒಪ್ಪಿಸು; ಚಿತ್ತ: ಮನಸ್ಸು; ಸಾಯಕ: ಬಾಣ; ತಿರುಗು: ಸುತ್ತು, ದಿಕ್ಕನ್ನು ಬದಲಾಯಿಸು; ತೊಡು: ಧರಿಸು; ನಿರ್ದಾಯದ: ಅಖಂಡ; ನೆಲ: ಭೂಮಿ; ಅಹುದು: ಸಮ್ಮತಿಸು, ಹೌದು; ರಾಧೇಯ: ಕರ್ಣ; ಅವನೀಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆಯಿತ್+ಇದು +ಸರಳ್+ಒಳ್ಳಿತೈ +ಕುರು
ರಾಯನ್+ಅಭ್ಯುದಯ +ಪ್ರಪಂಚವಿದ್
ಆಯಿತೌ +ಸಂಧಾನವ್+ಒಡಬಡದ್+ಎನ್ನ +ಚಿತ್ತದಲಿ
ಸಾಯಕವ+ ನೀ +ತಿರುಗಿ +ತೊಡು +ನಿ
ರ್ದಾಯದಲಿ +ನೆಲನ್+ಅಹುದಲಾ +ರಾ
ಧೇಯ +ಎಂದನು +ಶಲ್ಯನ್+ಅವನೀಪಾಲ +ಕೇಳೆಂದ

ಅಚ್ಚರಿ:
(೧) ಸಮನಾರ್ಥಕ ಪದ – ರಾಯ, ಆವನೀಪಾಲ; ಸರಳು, ಸಾಯಕ

ನಿಮ್ಮ ಟಿಪ್ಪಣಿ ಬರೆಯಿರಿ