ಲೇಸು ಮಾಡಿದೆ ಕರ್ಣ ಕೌರವ
ನೀಸುದಿನ ಸಾಕಿದ ಫಲವ ನೀ
ನೈಸಲೇ ತೋರಿದವನೀ ನೃಪಸೈನ್ಯಶರಧಿಯಲಿ
ಈಸು ಕಾಳೆಗವಾದುದೀ ಕ
ಟ್ಟಾಸುರದ ಸರಳೆಲ್ಲಿ ಗುಪ್ತಾ
ವಾಸವಾದುದು ಪೂತುರೆಂದನು ಶಲ್ಯನಿನಸುತನ (ಕರ್ಣ ಪರ್ವ, ೨೫ ಸಂಧಿ, ೧೪ ಪದ್ಯ)
ತಾತ್ಪರ್ಯ:
ಶಲ್ಯನು, ಭಲೇ ಕರ್ಣ ನೀನು ಒಳ್ಳೆಯ ಕೆಲಸವನ್ನೇ ಮಾಡಿದೆ ಕೌರವನು ಇಷ್ಟು ದಿನ ನಿನ್ನನ್ನು ಸಲಹಿದ್ದಕ್ಕೆ ತಕ್ಕ ಪ್ರತಿಫಲವನ್ನೇ ನೀಡುತ್ತಿರುವೆ, ಇಷ್ಟು ದಿನ ಮಹಾಯುದ್ಧವಾಯಿತು, ಈ ಅತಿಭಯಂಕರ ಅಸ್ತ್ರವನ್ನು ಎಲ್ಲಿ ಅಡಗಿಸಿಕೊಂಡಿದ್ದೆ? ಭಲೇ ಎಂದು ಶಲ್ಯನು ಕರ್ಣನನ್ನು ಹೊಗಳಿದನು.
ಅರ್ಥ:
ಲೇಸು: ಒಳಿತು; ಸಾಕು: ಸಲಹು; ಫಲ: ಫಲಿತಾಂಶ; ಐಸಲೇ: ಅಲ್ಲವೇ; ತೋರು: ಗೋಚರ; ನೃಪ: ರಾಜ; ಸೈನ್ಯ: ಸೇನೆ,ಬಲ; ಶರಧಿ: ಸಮುದ್ರ; ಕಾಳೆಗ: ಯುದ್ಧ; ಕಟ್ಟಾಸುರ: ಅತ್ಯಂತ ಭಯಂಕರ; ಸರಳು: ಬಾಣ; ಗುಪ್ತ: ರಹಸ್ಯ, ಗೌಪ್ಯ; ವಾಸ: ಇರುವಿಕೆ; ಗುಪ್ತಾವಾಸ: ಬಚ್ಚಿಟ್ಟುಕೊಳ್ಳು; ಪೂತು: ಭಲೇ; ಇನ: ಸೂರ್ಯ; ಸುತ: ಮಗ;
ಪದವಿಂಗಡಣೆ:
ಲೇಸು+ ಮಾಡಿದೆ +ಕರ್ಣ +ಕೌರವನ್
ಈಸುದಿನ +ಸಾಕಿದ +ಫಲವ +ನೀನ್
ಐಸಲೇ +ತೋರಿದವನ್+ಈ+ ನೃಪ+ಸೈನ್ಯ+ಶರಧಿಯಲಿ
ಈಸು +ಕಾಳೆಗವ್+ಆದುದ್+ಈ+ ಕ
ಟ್ಟಾಸುರದ +ಸರಳ್+ಎಲ್ಲಿ +ಗುಪ್ತಾ
ವಾಸವಾದುದು +ಪೂತುರ್+ಎಂದನು +ಶಲ್ಯನ್+ಇನ+ಸುತನ
ಅಚ್ಚರಿ:
(೧) ಕರ್ಣನನ್ನು ಕರೆದ ಬಗೆ – ಕರ್ಣ, ಇನಸುತ
(೨) ಕರ್ಣನನ್ನು ಹೊಗಳುವ ಪರಿ – ಕೌರವನೀಸುದಿನ ಸಾಕಿದ ಫಲವ ನೀನೈಸಲೇ ತೋರಿದವ