ಪದ್ಯ ೬: ಬಾಣದ ಹೊಗೆಯು ಯಾವುದನ್ನು ಆವರಿಸಿತು?

ಹೊರೆಯವರು ಮರನಾದರಾ ರಥ
ತುರಗತತಿ ಲಟಕಟಿಸಿದವು ನಿ
ಬ್ಬರದ ಬೆರಗಿನೊಳದ್ದು ಹೋದನು ಶಲ್ಯ ನಿಮಿಷದಲಿ
ಉರಿ ಛಡಾಳಿಸಿ ಪೂತ್ಕೃತಿಯ ಪಂ
ಜರದೊಳಗೆ ಪಲ್ಲವಿಸಿತುಬ್ಬಿದ
ಹೊರಳಿಹೊಗೆಯಂಬರವ ತುಂಬಿತು ಭೂಪ ಕೇಳೆಂದ (ಕರ್ಣ ಪರ್ವ, ೨೪ ಸಂಧಿ, ೬ ಪದ್ಯ)

ತಾತ್ಪರ್ಯ:
ಸರ್ಪಾಸ್ತ್ರದ ಪ್ರಭಾವದಿಂದ ಅಕ್ಕಪಕ್ಕದವರ ಮೈಗಳು ಮರಗಟ್ಟಿದವು. ರಥದ ಕುದುರೆಗಳು ಆಯಾಸಗೊಂಡವು. ಶಲ್ಯನು ಅತಿಶಯ ವಿಸ್ಮಯದಲ್ಲಿ ಮುಳುಗಿಹೋದನು. ಉರಿ ಸುತ್ತಲೂ ಹಬ್ಬಿತು. ಹೊಗೆಯು ಆಗಸವನ್ನೇ ತುಂಬಿತು.

ಅರ್ಥ:
ಹೊರೆ: ರಕ್ಷಣೆ, ಆಶ್ರಯ, ಸಮೀಪ; ಮರನಾದರು: ಗಟ್ಟಿಯಾಗು, ಬಿರುಸಾದ; ರಥ: ಬಂಡಿ; ತುರಗ: ಕುದುರೆ; ತತಿ: ಗುಂಪು, ಸಮೂಹ; ಲಟಕಟಿಸು: ಉದ್ರೇಕಗೊಳ್ಳು; ನಿಬ್ಬರ: ಅತಿಶಯ, ಹೆಚ್ಚಳ; ಬೆರಗು: ವಿಸ್ಮಯ, ಸೋಜಿಗ; ಅದ್ದು: ತೋಯ್ದು; ನಿಮಿಷ: ಕಾಲ ಪ್ರಮಾಣ; ಉರಿ: ಬೆಂಕಿಯ ಕಿಡಿ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಪೂತ: ತೂರಿದ; ಕೃತಿ: ಕೆಲಸ; ಪಂಜರ: ಹಕ್ಕಿ, ಪ್ರಾಣಿಗಳನ್ನು ಕೂಡುವ ಸಾಧನ; ಪಲ್ಲವಿಸು: ವಿಕಸಿಸು; ಉಬ್ಬು: ಹೆಚ್ಚಾಗು, ಹಿಗ್ಗು; ಹೊರಳು: ತಿರುವು, ಬಾಗು; ಹೊಗೆ: ಧೂಮ; ಅಂಬರ: ಆಗಸ; ತುಂಬು: ಪೂರ್ತಿಗೊಳ್ಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹೊರೆಯವರು +ಮರನಾದರ್+ಆ+ ರಥ
ತುರಗ+ತತಿ +ಲಟಕಟಿಸಿದವು+ ನಿ
ಬ್ಬರದ +ಬೆರಗಿನೊಳ್+ಅದ್ದು +ಹೋದನು +ಶಲ್ಯ +ನಿಮಿಷದಲಿ
ಉರಿ+ ಛಡಾಳಿಸಿ +ಪೂತ್ಕೃತಿಯ+ ಪಂ
ಜರದೊಳಗೆ +ಪಲ್ಲವಿಸಿತ್+ಉಬ್ಬಿದ
ಹೊರಳಿ+ಹೊಗೆ+ಅಂಬರವ+ ತುಂಬಿತು +ಭೂಪ +ಕೇಳೆಂದ

ಅಚ್ಚರಿ:
(೧) ಪ ಕಾರದ ತ್ರಿವಳಿ ಪದ – ಪೂತ್ಕೃತಿಯ ಪಂಜರದೊಳಗೆ ಪಲ್ಲವಿಸಿತುಬ್ಬಿದ

ನಿಮ್ಮ ಟಿಪ್ಪಣಿ ಬರೆಯಿರಿ