ಪದ್ಯ ೩೧: ದೇವತೆಗಳೇಕೆ ಆಶ್ಚರ್ಯಚಕಿತರಾದರು?

ರಾಯ ಕೇಳಭಿಮಂತ್ರಿಸಿದನಾ
ಗ್ನೇಯವನು ಹೂಡಿದನು ಸುರಕುಲ
ಬಾಯಬಿಡಲಂಬುಗಿದು ಹಾಯ್ದುದು ಬಿಲುದಿರುವ ನೊದೆದು
ವಾಯು ಪಡಿಬಲವಾಗೆ ಕಿಡಿಗಳ
ಬಾಯಿಧಾರೆಯ ಹೊದರ ಕರ್ಬೊಗೆ
ಲಾಯದಲಿ ಲವಣಿಸುವ ದಳ್ಳುರಿದಿರುಳ ಚೂಣಿಯಲಿ (ಕರ್ಣ ಪರ್ವ, ೨೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕರ್ಣನು ಆಗ್ನೇಯಾಸ್ತ್ರವನ್ನು ಹೂಡಿ ಬಿಡಲು ಅದು ಹೆದೆಯನ್ನೊದೆದು ಮುಂದೆ ಹೋಯಿತು. ಅದಕ್ಕೆ ವಾಯುವಿನ ಬೆಂಬಲವೂ ಒದಗಿತು. ಅದರ ಮುಖದಿಂದ ದಟ್ಟವಾದ ಕಪ್ಪುಹೊಗೆ ಕಿಡಿಗಳು, ದಳ್ಳುರಿಗಳು ಹಬ್ಬುತ್ತಿದ್ದವು. ಅದನ್ನು ನೋಡಿ ದೇವತೆಗಳು ಬಾಯಿಬಿಟ್ಟರು.

ಅರ್ಥ:
ರಾಯ: ರಾಜ; ಕೇಳು: ಆಲಿಸು; ಅಭಿಮಂತ್ರಿಸಿದ: ಮಂತ್ರದಿಂದ ಆಶೀರ್ವದಿಸಿದ; ಆಗ್ನೇಯ: ಅಗ್ನಿ;ಹೂಡು: ತೊಡು; ಸುರಕುಲ: ದೇವತೆಗಳ ವಂಶ; ಬಾಯಬಿಡು: ಆಶ್ಚರ್ಯ;ಅಂಬು: ಬಾಣ; ಹಾಯ್ದು: ಹಾರು; ಬಿಲುದಿರುವ: ಬಿಲ್ಲಿನ ಹಗ್ಗ; ಒದೆ: ತಳ್ಳು; ವಾಯು: ಗಾಳಿ; ಪಡಿಬಲ: ವೈರಿಸೈನ್ಯ, ಬೆಂಬಲ, ಸಹಾಯ; ಕಿಡಿ: ಬೆಂಕಿ; ಬಾಯಿಧಾರೆ: ಮೊನೆಯಾದ ಅಲಗು; ಹೊದರು:ತೊಡಕು, ತೊಂದರೆ, ಗುಂಪು; ಕರ್ಬೊಗೆ: ಕಪ್ಪು ಹೊಗೆ; ಲವಣಿ: ಕಾಂತಿ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಇರುಳು: ರಾತ್ರಿ; ಚೂಣಿ: ಮೊದಲು;

ಪದವಿಂಗಡಣೆ:
ರಾಯ +ಕೇಳ್+ಅಭಿಮಂತ್ರಿಸಿದನ್
ಆಗ್ನೇಯವನು +ಹೂಡಿದನು +ಸುರಕುಲ
ಬಾಯಬಿಡಲ್+ಅಂಬುಗ್+ಇದು+ ಹಾಯ್ದುದು +ಬಿಲುದಿರುವನ್ +ಒದೆದು
ವಾಯು +ಪಡಿಬಲವಾಗೆ +ಕಿಡಿಗಳ
ಬಾಯಿಧಾರೆಯ +ಹೊದರ +ಕರ್ಬೊಗೆ
ಲಾಯದಲಿ +ಲವಣಿಸುವ+ ದಳ್ಳುರಿದಿರುಳ+ ಚೂಣಿಯಲಿ

ಅಚ್ಚರಿ:
(೧) ಆಗ್ನೇಯಾಸ್ತ್ರದ ಪ್ರಭಾವ – ಕಿಡಿಗಳ ಬಾಯಿಧಾರೆಯ ಹೊದರ ಕರ್ಬೊಗೆ
ಲಾಯದಲಿ ಲವಣಿಸುವ ದಳ್ಳುರಿದಿರುಳ ಚೂಣಿಯಲಿ

ನಿಮ್ಮ ಟಿಪ್ಪಣಿ ಬರೆಯಿರಿ