ಪದ್ಯ ೬: ಕೌರವನೇಕೆ ಉತ್ಸಾಹಿಯಾಗಿದ್ದನು?

ರಾಯನನುಜನ ರುಧಿರ ಜೀವದ
ಬೀಯದಲಿ ಕರ್ಣಾತ್ಮಜನ ಕುಲಿ
ಶಾಯುಧನ ಸಾಲೋಕ್ಯದಲಿ ಕಣ್ದೆರೆದ ವೇದನೆಯ
ಆಯಸವ ನೆರೆ ಮರೆದು ಕೌರವ
ರಾಯ ಭುಲ್ಲವಿಸಿದನು ಲಹರಿಯ
ಘಾಯದಲಿ ಸೂಳೈಸಿದವು ನಿಸ್ಸಾಳಕೋಟಿಗಳು (ಕರ್ಣ ಪರ್ವ, ೨೧ ಸಂಧಿ, ೬ ಪದ್ಯ)

ತಾತ್ಪರ್ಯ:
ದುರ್ಯೋಧನನ ತಮ್ಮನ ರಕ್ತವನ್ನು ಕುಡಿದು ಪ್ರಾಣವು ಹೋಗಿತ್ತು, ಕರ್ಣನ ಮಗ ವೃಷಸೇನನು ಇಂದ್ರನ ಓಲಗಕ್ಕೆ ಹೋಗಿದ್ದನು, ಇಂತಹ ನೋವುಗಳನ್ನು ನೋಡಿದ ಮೇಲೆ ನೋವಿನ ಆಯಾಸವು ಮರೆತುಹೋದವು, ಕೌರವನು ಉತ್ಸಾಹಿಯಾಗಿ, ರಣಭೇರಿಗಳು ಮತ್ತೆ ಮತ್ತೆ ಮೊರೆದವು.

ಅರ್ಥ:
ರಾಯ: ರಾಜ; ಅನುಜ; ತಮ್ಮ; ರುಧಿರ: ರಕ್ತ; ಜೀವ: ಉಸಿರು; ಬೀಯ: ವ್ಯಯ, ಹಾಳು, ನಷ್ಟ; ಆತ್ಮಜ: ಮಗ; ಕುಲಿಶ: ವಜ್ರಾಯುಧ; ಸಾಲೋಕ್ಯ: ಒಂದೇ ಲೋಕದಲ್ಲಿರುವಿಕೆ; ಕಣ್ದೆರೆ: ನಯನಗಳನ್ನು ಅರಳಿಸು, ನೋಡು; ವೇದನೆ: ನೋವು; ಆಯಸ: ಬಳಲಿಕೆ; ನೆರೆ: ತುಂಬು ಪ್ರವಾಹ; ಮರೆ: ಜ್ಞಾಪಕದಿಂದ ದೂರ ಹೋಗು; ಭುಲ್ಲವಿಸು: ಉತ್ಸಾಹಗೊಳ್ಳು; ಲಹರಿ: ಅಲೆ, ತೆರೆ, ರಭಸ; ಘಾಯ: ಪೆಟ್ಟು; ಸೂಳೈಸು: ಮೊರೆ, ಶಬ್ದಮಾಡು; ನಿಸ್ಸಾಳ: ರಣಭೇರಿ;

ಪದವಿಂಗಡಣೆ:
ರಾಯನ್+ಅನುಜನ +ರುಧಿರ +ಜೀವದ
ಬೀಯದಲಿ+ ಕರ್ಣಾತ್ಮಜನ+ ಕುಲಿ
ಶಾಯುಧನ+ ಸಾಲೋಕ್ಯದಲಿ +ಕಣ್ದೆರೆದ+ ವೇದನೆಯ
ಆಯಸವ+ ನೆರೆ+ ಮರೆದು+ ಕೌರವ
ರಾಯ +ಭುಲ್ಲವಿಸಿದನು +ಲಹರಿಯ
ಘಾಯದಲಿ+ ಸೂಳೈಸಿದವು +ನಿಸ್ಸಾಳ+ಕೋಟಿಗಳು

ಅಚ್ಚರಿ:
(೧) ಸತ್ತನು ಎಂದು ಹೇಳಲು – ಕರ್ಣಾತ್ಮಜನ ಕುಲಿಶಾಯುಧನ ಸಾಲೋಕ್ಯದಲಿ ಕಣ್ದೆರೆದ

ನಿಮ್ಮ ಟಿಪ್ಪಣಿ ಬರೆಯಿರಿ