ಪದ್ಯ ೪: ಕರ್ಣನ ಪ್ರತಾಪವು ಹೇಗೆ ಹೆಚ್ಚಿತು?

ತೊಳಗಿ ಬೆಳಗುವ ಶಿರದ ಪಚ್ಚೆಯ
ಹಳುಕು ಬೆರಸಿದ ವೀಳೆಯವನಿ
ಕ್ಕೆಲದ ಶಲ್ಯಾದಿಗಳಿಗಿತ್ತನು ವರರಥಾಗ್ರದಲಿ
ಕಳಚಿ ತೆಗೆದನು ಜೋಡ ಮೈವೆ
ಗ್ಗಳಿಸಿ ದಳವೇರಿದುದು ಮನ ಮೊಗ
ಥಳಥಳಿಸೆ ಬಹಳಪ್ರತಾಪದಲಿದರ್ನಾ ಕರ್ಣ (ಕರ್ಣ ಪರ್ವ, ೨೧ ಸಂಧಿ, ೪ ಪದ್ಯ)

ತಾತ್ಪರ್ಯ:
ಕರ್ಣನು ರಥದಲ್ಲಿ ಕುಳಿತು ಪಚ್ಚಕರ್ಪೂರದ ವೀಳೆಯವನ್ನು ಉಡುಗೊರೆಯಾಗಿ ಶಲ್ಯ ಮೊದಲಾದವರಿಗೆ ಕೊಟ್ಟನು ತನ್ನ ಕವಚವನ್ನು ತೆಗೆದಿಟ್ತುಬಿಟ್ಟನು. ಮೈಪ್ರತಾಪದಿಂದ ಹೆಚ್ಚಿತು. ಮನಸ್ಸು ಉಲ್ಲಾಸ ಭರಿತವಾಯಿತು. ಮುಖವು ಕಾಂತಿಯಿಂದ ಹೊಳೆಯಿತು. ಕರ್ಣನ ಪ್ರತಾಪ ಹೆಚ್ಚಿತು.

ಅರ್ಥ:
ತೊಳಗು: ಹೊಳೆ, ಕಾಂತಿ; ಬೆಳಗು: ಹೊಳೆ; ಶಿರ: ತಲೆ; ಪಚ್ಚೆ: ಕರ್ಪೂರ; ಹಳುಕು: ಚೂರು; ಬೆರಸು: ಕಲಿಸು; ವೀಳೆ: ತಾಂಬೂಲ; ಇಕ್ಕೆಲ: ಎರಡೂ ಕಡೆ; ಆದಿ: ಮುಂತಾದವರು; ವರ: ಶ್ರೇಷ್ಠ; ರಥ: ಬಂಡಿ; ಅಗ್ರ: ಮುಂದೆ; ಕಳಚು: ತೆಗೆ, ಬಿಚ್ಚು; ತೆಗೆ: ಹೊರತರು; ಜೋಡು: ಜೊತೆ; ಮೈ: ತನು; ವೆಗ್ಗಳ: ಹೆಚ್ಚು, ಆಧಿಕ್ಯ; ದಳ: ಸೈನ್ಯ; ಏರು: ಹತ್ತು; ಮನ: ಮನಸ್ಸು; ಮೊಗ: ಮುಖ; ಥಳಥಳ: ಹೊಳೆ; ಬಹಳ: ತುಂಬ; ಪ್ರತಾಪ: ಪರಾಕ್ರಮ;

ಪದವಿಂಗಡಣೆ:
ತೊಳಗಿ +ಬೆಳಗುವ +ಶಿರದ +ಪಚ್ಚೆಯ
ಹಳುಕು +ಬೆರಸಿದ+ ವೀಳೆಯವನ್
ಇಕ್ಕೆಲದ +ಶಲ್ಯಾದಿಗಳಿಗ್+ಇತ್ತನು +ವರ+ರಥಾಗ್ರದಲಿ
ಕಳಚಿ +ತೆಗೆದನು +ಜೋಡ +ಮೈವೆ
ಗ್ಗಳಿಸಿ+ ದಳವೇರಿದುದು +ಮನ +ಮೊಗ
ಥಳಥಳಿಸೆ+ ಬಹಳ+ಪ್ರತಾಪದಲ್+ಇದರ್ನಾ +ಕರ್ಣ

ನಿಮ್ಮ ಟಿಪ್ಪಣಿ ಬರೆಯಿರಿ