ಪದ್ಯ ೧೦: ವೃಷಸೇನನ ಬಾಣಗಳು ಹೇಗೆ ಮುತ್ತಿದವು?

ಫಲಿತ ಶಾಳೀವನದ ಮುತ್ತಿದ
ಗಿಳಿಗಳೋ ತಾವರೆಯ ತೆಕ್ಕೆಯೊ
ಳಿಳಿದ ಮರಿದುಂಬಿಗಳೊ ವೃಷಸೇನನ ಶರಾವಳಿಯೊ
ಹಿಳುಕು ಹೇರಿದವಾತನಶ್ವಾ
ವಳಿಯಲಾತನ ಸೂತನೊಡಲಲಿ
ಹಲವು ಮಾತೇನಾತನಂಗೋಪಾಂಗ ನಿಕರದಲಿ (ಕರ್ಣ ಪರ್ವ, ೨೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ತೆನೆಬಿಟ್ಟ ಬತ್ತದ ಗದ್ದೆಯನ್ನು ಮುತ್ತುವ ಗಿಳಗಳ ತೆರದಿ, ತಾವರೆಯ ವನದಲ್ಲಿ ಮುತ್ತಿದ ಮರಿದುಂಬಿಗಳ ತೆರದಿ ವೃಷಸೇನನ ಬಾಣಗಳು ಭೀಮನ ರಥದ ಕುದುರೆಗಳು, ಅವನ ಸಾರಥಿ, ಭೀಮನ ದೇಹ ಇವುಗಳ ಮೇಲೆ ಮುತ್ತಿದವು.

ಅರ್ಥ:
ಫಲಿತ: ಹಣ್ಣಾದ; ಶಾಳಿ: ಬತ್ತ; ವನ: ಕಾಡು; ಮುತ್ತು: ಆವರಿಸು; ಗಿಳಿ: ಶುಕ; ತಾವರೆ: ಕಮಲ; ತೆಕ್ಕೆ: ಗುಂಪು; ಇಳಿ: ಕೆಳಕ್ಕೆ ಬರು; ಮರಿ: ಚಿಕ್ಕ; ದುಂಬಿ: ಜೇನುನೊಣ; ಶರಾವಳಿ: ಬಾಣದ ಗುಂಪು; ಹಿಳುಕು: ಬಾಣದ ಗರಿ; ಹೇರು: ಬಡಿ, ಹೊಡೆ; ಅಶ್ವ:ಕುದುರೆ; ಆವಳಿ: ಗುಂಪು; ಸೂತ: ರಥವನ್ನು ಓಡಿಸುವವ; ಒಡಲು:ಶರೀರ; ಹಲವು: ಬಹಳ; ಅಂಗೋಪಾಂಗ: ಶರೀರದ ಅತ್ಯಂತವಾದ ನಾಡಿ; ನಿಕರ: ಗುಂಪು;

ಪದವಿಂಗಡಣೆ:
ಫಲಿತ +ಶಾಳೀವನದ +ಮುತ್ತಿದ
ಗಿಳಿಗಳೋ +ತಾವರೆಯ +ತೆಕ್ಕೆಯೊಳ್
ಇಳಿದ +ಮರಿದುಂಬಿಗಳೊ +ವೃಷಸೇನನ +ಶರಾವಳಿಯೊ
ಹಿಳುಕು +ಹೇರಿದವ್+ಆತನ್+ಅಶ್ವಾ
ವಳಿಯಲ್+ಆತನ+ ಸೂತನ್+ಒಡಲಲಿ
ಹಲವು+ ಮಾತೇನ್+ಆತನ್+ಅಂಗೋಪಾಂಗ +ನಿಕರದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಫಲಿತ ಶಾಳೀವನದ ಮುತ್ತಿದಗಿಳಿಗಳೋ ತಾವರೆಯ ತೆಕ್ಕೆಯೊ
ಳಿಳಿದ ಮರಿದುಂಬಿಗಳೊ ವೃಷಸೇನನ ಶರಾವಳಿಯೊ

ನಿಮ್ಮ ಟಿಪ್ಪಣಿ ಬರೆಯಿರಿ