ಪದ್ಯ ೮೨:ಭೀಮನು ದ್ರೌಪದಿಯನ್ನು ಏನು ಕೇಳಿದನು?

ಮುಡಿಗೆ ಹಾಯ್ದವನುದರರಕ್ತವ
ತೊಡೆದು ಕಬರಿಯ ಕಟ್ಟೆ ಕಟ್ಟುವೆ
ನುಡಿಗೆಯಳಿದನ ಚರ್ಮವನು ನೀನುಡಿಸಲುಟ್ಟಪೆನು
ಎಡೆಯಲೊಯ್ಯಾರದಲಿ ಕಟ್ಟೆನು
ಮುಡಿಯ ಮಡಿಯುಡೆನೆಂಬ ತೇಜದ
ನುಡಿದ ನುಡಿ ಸಲೆ ಸಂದುದೇ ತನ್ನಾಣೆ ಹೇಳೆಂದ (ಕರ್ಣ ಪರ್ವ, ೧೯ ಸಂಧಿ, ೮೨ ಪದ್ಯ)

ತಾತ್ಪರ್ಯ:
ನಿನ್ನ ತಲೆಗೂದಲಿಗೆ ಕೈ ಬಾಚಿದವನ ರಕ್ತವನ್ನು ಲೇಪಿಸಿ ಮುಡಿಯನ್ನು ಕಟ್ಟುತ್ತೇನೆ. ನನ್ನ ವಸ್ತ್ರವನ್ನೆಳೆದವನ ಚರ್ಮವನ್ನು ನೀನು ಉಡಿಸಿದರೆ ಉಡುತ್ತೇನೆ ಎಂದು ನೀನು ಘಂತಾಘ್ಷವಾಗಿ ಹೇಳಿದ ಮಾತು ಪೂರ್ಣವಾಯಿತೇ? ದ್ರೌಪದಿ ನನ್ನಾಣೆಯಾಗಿ ಹೇಳು, ಎಂದು ಭೀಮನು ದ್ರೌಪದಿಯನ್ನು ಕೇಳಿದನು.

ಅರ್ಥ:
ಮುಡಿ: ಶಿರ; ಹಾಯ್ದು: ಹೊಡೆದ, ಹಾಕಿದ; ಉದರ: ಹೊಟ್ಟೆ, ಜಠರ; ರಕ್ತ: ನೆತ್ತರು; ತೊಡೆ:ಲೇಪಿಸು, ಬಳಿ, ಸವರು; ಕಬರಿ: ಹೆರಳು, ಜಡೆ; ಕಟ್ಟು: ಬಂಧಿಸು; ನುಡಿ: ಮಾತು; ಅಳಿ: ಸಾವು; ಚರ್ಮ: ತೊಗಲು; ಉಡಿಸು: ತೊಡು; ಎಡೆ:ಬಹಳವಾಗಿ; ಒಯ್ಯಾರ: ಬೆಡಗು, ಬಿನ್ನಾಣ; ಮಡಿ: ಶುಭ್ರ, ನೈರ್ಮಲ್ಯ; ಉಡು: ತೊಡು; ತೇಜ: ಪ್ರಕಾಶ; ನುಡಿ: ಮಾತು; ಸಂದು: ಅವಕಾಶ, ಸಂದರ್ಭ; ಆಣೆ: ಪ್ರಮಾಣ; ಹೇಳು: ತಿಳಿಸು;

ಪದವಿಂಗಡಣೆ:
ಮುಡಿಗೆ +ಹಾಯ್ದವನ್+ಉದರ+ರಕ್ತವ
ತೊಡೆದು +ಕಬರಿಯ +ಕಟ್ಟೆ +ಕಟ್ಟುವೆ
ನುಡಿಗೆ+ಅಳಿದನ +ಚರ್ಮವನು +ನೀನ್+ಉಡಿಸಲ್+ಉಟ್ಟಪೆನು
ಎಡೆಯಲ್+ಒಯ್ಯಾರದಲಿ +ಕಟ್ಟೆನು
ಮುಡಿಯ +ಮಡಿಯುಡೆನೆಂಬ+ ತೇಜದ
ನುಡಿದ+ ನುಡಿ+ ಸಲೆ+ ಸಂದುದೇ +ತನ್ನಾಣೆ+ ಹೇಳೆಂದ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಬರಿಯ ಕಟ್ಟೆ ಕಟ್ಟುವೆ

ನಿಮ್ಮ ಟಿಪ್ಪಣಿ ಬರೆಯಿರಿ