ಪದ್ಯ ೬೭: ಅರ್ಜುನನ್ನು ರಥದೊಳಗೆ ಯಾರು ನಿಲಿಸಿದರು?

ಅಹುದಹುದು ತಪ್ಪೇನು ತಪ್ಪೇ
ನಹಿತದುಶ್ಯಾಸನನ ಸಲಹುವೆ
ನಹಿತಬಲವೆನಗನಿಲಸುತನೆನುತೈದೆ ಬರೆ ಕಂಡು
ಬಹಳ ಭೀತಿಯೊಳಸುರರಿಪು ಸ
ನ್ನಿಹಿತ ಚಾಪವ ಹಿಡಿದು ಮನದು
ಮ್ಮಹವ ಕೆಡಿಸಿ ಕೀರೀಟಿಯನು ನಿಲಿಸಿದನು ರಥದೊಳಗೆ (ಕರ್ಣ ಪರ್ವ, ೧೯ ಸಂಧಿ, ೬೭ ಪದ್ಯ)

ತಾತ್ಪರ್ಯ:
ಅರ್ಜುನನು ಭೀಮನಿಗೆ ಉತ್ತರಿಸುತ್ತಾ, ಇದರಲ್ಲಿ ತಪ್ಪೇನು, ಏನು ತಪ್ಪು, ಶತ್ರುವಾದ ದುಶ್ಯಾಸನನನ್ನು ಕಾಪಾಡುತ್ತೇನೆ, ಭೀಮನೇ ನನಗೆ ಶತ್ರು ಎನ್ನುತ್ತಾ ಬರುತ್ತಿರಲು ಶ್ರೀಕೃಷ್ನನು ಬಹಳವಾಗಿ ಬೆದರಿ, ಅರ್ಜುನನು ಎತ್ತಿ ಹಿಡಿದಿದ್ದ ಗಾಂಡಿವವನ್ನು ಹಿಡಿದು, ಅರ್ಜುನನ ಮಹೋತ್ಸಾಹವನ್ನು ತಡೆದು ಅವನನ್ನು ರಥದಲ್ಲೇ ನಿಲ್ಲಿಸಿದನು.

ಅರ್ಥ:
ಅಹುದಹುದು: ಹೌದು; ತಪ್ಪು: ಸರಿಯಿಲ್ಲದ; ಅಹಿತ: ಶತ್ರು; ಸಲಹು: ಕಾಪಾಡು; ಅನಿಲಸುತ: ವಾಯುಪುತ್ರ (ಭೀಮ); ಐದೆ:ವಿಶೇಷವಾಗಿ; ಐದು: ಹೋಗಿಸೇರು; ಬರೆ: ಆಗಮನ; ಕಂಡು: ನೋಡಿ; ಬಹಳ: ತುಂಬ; ಭೀತಿ: ಭಯಂಕರ; ಅಸುರರಿಪು: ದಾನವರ ವೈರಿ (ಕೃಷ್ಣ); ಸನ್ನಿಹಿತ: ಹತ್ತಿರದಲ್ಲಿರುವ, ಸಮೀಪದ; ಚಾಪ: ಬಿಲ್ಲು; ಹಿಡಿ: ಗ್ರಹಿಸು, ಬಂಧನ; ಮನ: ಮನಸ್ಸು; ಉಮ್ಮಹವ: ಉತ್ಸಾಹ, ಸಂತೋಷ; ಕೆಡಿಸು: ಹಾಳುಮಾಡು; ನಿಲಿಸು: ತಡೆ; ರಥ: ಬಂಡಿ;

ಪದವಿಂಗಡಣೆ:
ಅಹುದಹುದು +ತಪ್ಪೇನು +ತಪ್ಪೇನ್
ಅಹಿತ+ ದುಶ್ಯಾಸನನ +ಸಲಹುವೆನ್
ಅಹಿತ+ಬಲವೆನಗ್+ಅನಿಲಸುತನ್+ಎನುತ್+ಐದೆ+ ಬರೆ +ಕಂಡು
ಬಹಳ +ಭೀತಿಯೊಳ್+ಅಸುರರಿಪು+ ಸ
ನ್ನಿಹಿತ+ ಚಾಪವ +ಹಿಡಿದು +ಮನದ್
ಉಮ್ಮಹವ +ಕೆಡಿಸಿ +ಕೀರೀಟಿಯನು+ ನಿಲಿಸಿದನು +ರಥದೊಳಗೆ

ಅಚ್ಚರಿ:
(೧) ತಪ್ಪೇನು, ಅಹಿತ – ೨ ಬಾರಿ ಪ್ರಯೋಗ
(೨) ಭೀಮ, ಅರ್ಜುನ, ಕೃಷ್ಣರನ್ನು – ಅನಿಲಸುತ, ಕಿರೀಟಿ, ಅಸುರರಿಪು ಎಂದು ಬಣ್ಣಿಸಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ