ಪದ್ಯ ೨೪: ವಿಶೋಕನಿಗೆ ಭೀಮನು ಏನು ಹೇಳಿದ?

ಪೂತು ಸಾರಥಿ ಈಸುಬಾಣ
ವ್ರಾತವುಳಿದುದೆ ತನ್ನ ಕರ ಕಂ
ಡೂತಿಯನು ಕಳುಚುವೆನಲಾ ಕೌರವನ ನೆತ್ತಿಯಲಿ
ಆತನೇನಾದನು ಯುಧಿಷ್ಠಿರ
ಸೋತು ಪಿಂಗಿದನೆಂಬ ಹಂಬಲು
ಬೀತುದಿನ್ನೇನೆನ್ನ ನೋಡಾ ಎನುತ ಗರ್ಜಿಸಿದ (ಕರ್ಣ ಪರ್ವ, ೧೮ ಸಂಧಿ, ೨೪ ಪದ್ಯ)

ತಾತ್ಪರ್ಯ:
ಭಲೆ ಭೇಷ್ ವಿಶೋಕ ಎಂದು ಭೀಮನು ತನ್ನ ಸಾರಥಿಯನ್ನು ಹುರಿದುಂಬಿಸಿದನು, ಇಷ್ಟು ಆಯುಧಗಳು ಉಳಿದಿವೆಯೇ? ಕೌರವನ ನೆತ್ತಿಯಮೇಲೆ ಹೊಡೆದು ನನ್ನ ತೋಳಿನ ಕಡಿತವನ್ನು ಕಳೆದುಕೊಳ್ಳುತ್ತೇನೆ. ಆದರೆ ಅವನೆಲ್ಲಿ, ಯುಧಿಷ್ಠಿರನು ಸೋತು ಹಿಮ್ಮೆಟ್ಟಿದನೆಂಬ ಚಿಂತೆ ಈಗ ಮಾಗವಾಯಿಗು, ಇನ್ನೇನು, ನೋಡು ನನ್ನನ್ನು ಎಂದು ಭೀಮನು ಗರ್ಜಿಸಿದನು.

ಅರ್ಥ:
ಪೂತು: ಭಲೇ; ಸಾರಥಿ:ಸೂತ, ರಥವನ್ನು ಓಡಿಸುವವ; ಈಸು: ಇಷ್ಟು; ಬಾಣ: ಶರ; ವ್ರಾತ: ಗುಂಪು; ಉಳಿ: ಮಿಕ್ಕು; ಕರ: ಕೈ; ಕಂಡೂತಿ: ಕೆರೆತ, ನವೆ; ಕಳುಚು: ತೆಗೆ, ಬಿಚ್ಚು; ನೆತ್ತಿ: ಶಿರ; ಸೋತು: ಪರಾಭವ; ಪಿಂಗಿದ: ಹಿಮ್ಮೆಟ್ಟು; ಹಂಬಲು: ಚಿಂತೆ; ಬೀತುದು: ಕಳೆದುದು; ಗರ್ಜಿಸು: ಜೋರಾಗಿ ಕೂಗು, ಆರ್ಭಟಿಸು;

ಪದವಿಂಗಡಣೆ:
ಪೂತು +ಸಾರಥಿ +ಈಸು+ಬಾಣ
ವ್ರಾತವ್+ಉಳಿದುದೆ +ತನ್ನ +ಕರ +ಕಂ
ಡೂತಿಯನು +ಕಳುಚುವೆನಲಾ+ ಕೌರವನ+ ನೆತ್ತಿಯಲಿ
ಆತತ್+ಏನಾದನು +ಯುಧಿಷ್ಠಿರ
ಸೋತು +ಪಿಂಗಿದನೆಂಬ +ಹಂಬಲು
ಬೀತುದ್+ಇನ್ನೇನ್+ಎನ್ನ +ನೋಡಾ +ಎನುತ+ ಗರ್ಜಿಸಿದ

ಅಚ್ಚರಿ:
(೧) ದುರ್ಯೋಧನನನ್ನು ಹೊಡೆಯುವೆ ಎಂದು ಹೇಳಲು ಬಳಸಿದ ಉಪಮಾನ – ತೋಳಿನ ಕೆರೆತವನ್ನು ನಿವಾರಿಸಿಕೊಳ್ಳುವೆ ಎಂದು – ತನ್ನ ಕರ ಕಂಡೂತಿಯನು ಕಳುಚುವೆನಲಾ ಕೌರವನ ನೆತ್ತಿಯಲಿ

ನಿಮ್ಮ ಟಿಪ್ಪಣಿ ಬರೆಯಿರಿ