ಪದ್ಯ ೬: ಅರ್ಜುನನು ಧರ್ಮಜನಿಗೆ ಯಾವ ಭಾಷೆಯನ್ನು ನೀಡಿದನು?

ಬರಸು ಭಾಷೆಯನಿಂದು ಕರ್ಣನ
ಶಿರವುಳಿದು ತಾವರೆಯ ನಗೆ ಪೈ
ಸರಿಸಿದರೆ ಮೈಬೆಸುಗೆ ಬಿಟ್ಟರೆ ಜಕ್ಕವಕ್ಕಿಗಳ
ಇರುಳ ಬೀಜವನಿಂದು ನಭದಲಿ
ಹರಹಿದರೆ ಕಲಿ ಭೀಮನಯ್ಯನ
ಹರಹು ನಿಂದರೆ ಬಳಿಕ ನಿಮ್ಮಯ ತಮ್ಮನಲ್ಲೆಂದ (ಕರ್ಣ ಪರ್ವ, ೧೮ ಸಂಧಿ, ೬ ಪದ್ಯ)

ತಾತ್ಪರ್ಯ:
ಅರ್ಜುನನು ಧರ್ಮಜನಿಗೆ ಅತ್ಯಂತ ಉತ್ಸಾಹದಿಂದ, ರಾಜ ಇದನ್ನು ಬರೆದುಕೋ, ಕರ್ಣನ ತಲೆ ಉಳಿದುಕೊಂಡು, ಕಮಲಗಳು ಮುಚ್ಚಿದರೆ, ಚಕ್ರವಾಕ ಸಂತಸದಿಂದ ಸೇರುವುದನ್ನು ಬಿಟ್ಟರೆ, ರಾತ್ರಿಯು ಕತ್ತಲಿನ ಬೀಜವನ್ನು ಆಗಸದಲ್ಲಿ ಬಿತ್ತಿದರೆ, ಗಾಳಿ ನಿಂತರೆ ನಾನು ನಿಮ್ಮ ತಮ್ಮನೇ ಅಲ್ಲ ಎಂದು ನುಡಿದನು.

ಅರ್ಥ:
ಬರಸು: ಲಿಖಿತವಾಗಿಸು; ಭಾಷೆ: ಮಾತು, ಆಣೆ; ಶಿರ: ತಲೆ; ಉಳಿ: ಜೀವಿಸು, ಹೊರತಾಗು; ತಾವರೆ: ಕಮಲ; ನಗೆ: ಅರಳು, ಸಂತಸ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ;ಮೈ: ತನು; ಬೆಸುಗೆ: ಪರಸ್ಪರ ಸೇರುವುದು, ಒಂದಾಗುವುದು; ಬಿಡು: ತ್ಯಜಿಸು; ಜಕ್ಕವಕ್ಕಿ: ಚಕ್ರವಾಕ ಪಕ್ಷಿ; ಇರುಳು: ರಾತ್ರಿ; ಬೀಜ:ಉತ್ಪತ್ತಿ ಸ್ಥಾನ, ಮೂಲ; ಹರಹು: ಹಬ್ಬುವಿಕೆ, ಪ್ರಸರ; ನಭ: ಆಗಸ; ಕಲಿ: ಶೂರ; ಅಯ್ಯ: ತಂದೆ; ನಿಂದರೆ: ನಿಲ್ಲು, ತಡೆ; ಬಳಿಕ: ನಂತರ; ತಮ್ಮ: ಸಹೋದರ;

ಪದವಿಂಗಡಣೆ:
ಬರಸು +ಭಾಷೆಯನ್+ಇಂದು +ಕರ್ಣನ
ಶಿರವುಳಿದು+ ತಾವರೆಯ +ನಗೆ +ಪೈ
ಸರಿಸಿದರೆ +ಮೈಬೆಸುಗೆ +ಬಿಟ್ಟರೆ +ಜಕ್ಕವಕ್ಕಿಗಳ
ಇರುಳ +ಬೀಜವನ್+ಇಂದು+ ನಭದಲಿ
ಹರಹಿದರೆ +ಕಲಿ +ಭೀಮನ್+ಅಯ್ಯನ
ಹರಹು +ನಿಂದರೆ +ಬಳಿಕ +ನಿಮ್ಮಯ +ತಮ್ಮನಲ್ಲೆಂದ

ಅಚ್ಚರಿ:
(೧) ಕಮಲ ಮುದುಡಿದರೆ ಎಂದು ಹೇಳಲು – ತಾವರೆಯ ನಗೆ ಪೈಸರಿಸಿದರೆ
(೨) ವಾಯು ಎಂದು ಹೇಳಲು – ಭೀಮನಯ್ಯನ ಹರಹು ಎಂದು ಬಳಸಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ