ಪಿತೃಸಮೋಭ್ರಾತಾ ಎನಿಪ್ಪುದು
ಶ್ರುತಿವಚನವರಸಂಗೆ ನೀನುಪ
ಹತಿಯ ಮಾಡಲು ನೆನೆದ ಮಾತಿನ ವಾಸಿ ಬೇಕೆಂದು
ಕ್ಷಿತಿಯೊಳಬುಜ ಮೃಣಾಳಕೋಸುಗ
ಕೃತತಟಾಕವನೊಡೆದವೊಲು ಭೂ
ಪತಿ ವಧವ್ಯಾಪಾರ ನಿರ್ಮಳ ಧರ್ಮವಹುದೆಂದ (ಕರ್ಣ ಪರ್ವ, ೧೭ ಸಂಧಿ, ೨೦ ಪದ್ಯ)
ತಾತ್ಪರ್ಯ:
ಹಿರಿಯಣ್ಣನು ತಂದೆಯ ಸಮಾನ ಎಂದು ವೇದವಾಕ್ಯವಿದೆ. ಮಾತನ್ನು ಉಳಿಸಿಕೊಳ್ಳವೆನೆಂದು ಅಣ್ಣನನ್ನು ಕೊಲ್ಲಲು ಉಜ್ಜುಗಿಸಿದೆ. ಕಮಲದ ನಾಳವನ್ನು ಪಡೆಯಲು ಕೆರೆಯ ಕಟ್ಟೆಯನ್ನೊಡೆಯುವಂತೆ, ನಿನ್ನ ಮಾತನ್ನುಳಿಸಿಕೊಳ್ಳಲು ಅಣ್ನನನ್ನು ಕೊಲ್ಲಲು ನೆನೆದೆ ಎಂದು ಕೃಷ್ಣನು ಅರ್ಜುನನಿಗೆ ಹೇಳಿದನು.
ಅರ್ಥ:
ಪಿತೃ: ತಂದೆ; ಭ್ರಾತ: ಅಣ್ಣ; ಸಮ: ಸರಿಸಮಾನನು; ಶ್ರುತಿ: ವೇದ; ವಚನ: ಮಾತು, ನುಡಿ; ಅರಸ: ರಾಜ; ಉಪಹತಿ: ಕೊಲ್ಲು; ನೆನೆ: ಮನನ ಮಾಡಿ; ಮಾತು: ವಾಣಿ, ವಾಕ್; ವಾಸಿ: ಪ್ರತಿಜ್ಞೆ, ಶಪಥ; ಕ್ಷಿತಿ: ಭೂಮಿ; ಅಬುಜ: ಕಮಲ; ಮೃಣಾಳ: ನಾಳ; ಕೃತ: ಕಟ್ಟಿದ; ತಟಾಕ: ಕೆರೆ, ಜಲಾಶಯ; ಒಡೆ: ಕೆಡವು; ಭೂಪತಿ: ರಾಜ; ವಧ: ಹತ್ಯೆ; ವಧವ್ಯಾಪಾರ: ಕೊಲ್ಲುವ ಕಾರ್ಯ; ನಿರ್ಮಳ: ಸ್ವಚ್ಛವಾದ; ಧರ್ಮ: ಧಾರಣೆ ಮಾಡಿದುದು, ನಿಯಮ;
ಪದವಿಂಗಡಣೆ:
ಪಿತೃ+ಸಮೋ+ಭ್ರಾತಾ +ಎನಿಪ್ಪುದು
ಶ್ರುತಿ+ವಚನವ್+ಅರಸಂಗೆ ನೀನ್+ಉಪ
ಹತಿಯ +ಮಾಡಲು +ನೆನೆದ +ಮಾತಿನ +ವಾಸಿ +ಬೇಕೆಂದು
ಕ್ಷಿತಿಯೊಳ್+ಅಬುಜ +ಮೃಣಾಳಕೋಸುಗ
ಕೃತ+ತಟಾಕವನ್+ಒಡೆದವೊಲು +ಭೂ
ಪತಿ +ವಧವ್ಯಾಪಾರ+ ನಿರ್ಮಳ +ಧರ್ಮವಹುದೆಂದ
ಅಚ್ಚರಿ:
(೧) ಕ್ಷಿತಿ, ಪತಿ, ಹತಿ, ಶ್ರುತಿ – ಪ್ರಾಸ ಪದಗಳು
(೨) ಉಪಮಾನದ ಪ್ರಯೋಗ – ಕ್ಷಿತಿಯೊಳಬುಜ ಮೃಣಾಳಕೋಸುಗ ಕೃತತಟಾಕವನೊಡೆದವೊಲು
(೩) ಸಂಸ್ಕೃತದ ಪದಗುಚ್ಛದ ಬಳಕೆ – ಪಿತೃಸಮೋಭ್ರಾತಾ