ಪದ್ಯ ೧೪: ಕೌಶಿಕನನ್ನು ಬೇಟೆಗಾರರು ಏನು ಕೇಳಿದರು?

ವನದೊಳೊಬ್ಬನು ಕೌಶಿಕಾಹ್ವಯ
ಮುನಿ ತಪಶ್ಚರಿಯದಲಿ ಸತ್ಯವೆ
ತನಗೆ ಸುವ್ರತವೆಂದು ಬಟ್ಟೆಯೊಲಿದ್ದನೊಂದುದಿನ
ವನಚರರು ಬೇಹಿನಲಿ ಭೂಸುರ
ಜನವ ಬೆಂಬತ್ತಿದರು ಕೌಶಿಕ
ಮುನಿಯ ಬೆಸಗೊಂಡರು ಮಹೀಸುರ ಮಾರ್ಗಸಂಗತಿಯ (ಕರ್ಣ ಪರ್ವ, ೧೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಧರ್ಮದ ಬಗ್ಗೆ ತಿಳಿಸಲು ಒಂದು ಪ್ರಸಂಗವನ್ನು ಹೇಳಲು ಪ್ರಾರಂಭಿಸಿದನು. ಹಿಂದೆ ಕೌರ್ಶಿಕನೆಂಬ ಮುನಿಯೊಬ್ಬನು ಕಾಡಿನಲ್ಲಿ ತಪಸ್ಸನ್ನು ಮಾಡುತ್ತಿದ್ದನು. ಸತ್ಯವೇ ವ್ರತವೆಂದು ಕೈಗೊಂಡಿದ್ದನು. ಒಂದಾನೊಂದು ದಿನ ಕಾಡಿನ ಜರನು ಬ್ರಾಹ್ಮಣರ ಬೆನ್ನುಹತ್ತಿ ಬರುತ್ತಾ, ಕೌಶಿಕನನ್ನು ಬ್ರಾಹ್ಮಣರು ಎತ್ತ ಹೋದರೆಂದು ಕೇಳಿದರು.

ಅರ್ಥ:
ವನ: ಅರಣ್ಯ; ಆಹ್ವಯ: ಕರೆಯುವಿಕೆ; ಮುನಿ: ಋಷಿ; ತಪಸ್ಸು: ಧ್ಯಾನ; ಸತ್ಯ: ದಿಟ, ನೈಜ; ಸುವ್ರತ: ಒಳ್ಳೆಯ ಆಚಾರ, ನಿಯಮ; ಬಟ್ಟೆ: ಹಾದಿ, ಮಾರ್ಗ; ದಿನ: ದಿವಸ; ವನಚರರು: ಬೇಟೆಗಾರರು; ಬೇಹು: ಗುಪ್ತಚಾರಿಕೆ; ಭೂಸುರ: ಬ್ರಾಹ್ಮಣ; ಜನ: ಮನುಷ್ಯರು; ಬೆಂಬತ್ತು: ಹಿಂಬಾಲಿಸು; ಬೆಸಗೊಳ್: ಕೇಳು; ಮಹೀಸುರ: ಬ್ರಾಹ್ಮಣ; ಮಾರ್ಗ: ದಾರಿ; ಸಂಗತಿ: ವಿಚಾರ;

ಪದವಿಂಗಡಣೆ:
ವನದೊಳ್+ಒಬ್ಬನು +ಕೌಶಿಕ+ಆಹ್ವಯ
ಮುನಿ +ತಪಶ್ಚರಿಯದಲಿ +ಸತ್ಯವೆ
ತನಗೆ +ಸುವ್ರತವೆಂದು +ಬಟ್ಟೆಯೊಲಿದ್ದನ್+ಒಂದುದಿನ
ವನಚರರು +ಬೇಹಿನಲಿ +ಭೂಸುರ
ಜನವ +ಬೆಂಬತ್ತಿದರು +ಕೌಶಿಕ
ಮುನಿಯ +ಬೆಸಗೊಂಡರು +ಮಹೀಸುರ +ಮಾರ್ಗ+ಸಂಗತಿಯ

ಅಚ್ಚರಿ:
(೧) ಭೂಸುರ, ಮಹೀಸುರ – ಬ್ರಾಹ್ಮಣ – ಸಮನಾರ್ಥಕ ಪದ
(೨) ಜೋಡಿ ಪದಗಳು: ಬೇಹಿನಲಿ ಭೂಸುರ; ಮಹೀಸುರ ಮಾರ್ಗಸಂಗತಿಯ

ನಿಮ್ಮ ಟಿಪ್ಪಣಿ ಬರೆಯಿರಿ