ಪದ್ಯ ೮: ಅರ್ಜುನನೇಕೆ ಧರ್ಮಜನನನ್ನು ಸಾಯಿಸಲು ಹೊರಟನು?

ದೇವ ಪೂರ್ವದಲೆನ್ನ ನುಡಿ ಗಾಂ
ಡೀವವೇತಕೆ ನಿನಗೆ ನಿನಗೀ
ದೇವಧನು ಸಾದೃಶ್ಯವೇ ತೆಗೆಯೆಂದು ರೋಷದಲಿ
ಆವನೊಬ್ಬನು ನುಡಿದನಾತನ
ಜೀವನವ ಜಕ್ಕುಲಿಸಿಯೆನ್ನ ವ
ಚೋವಿಳಾಸವ ಕಾಯ್ವೆನೆಂದೆನು ಕೃಷ್ಣ ಕೇಳೆಂದ (ಕರ್ಣ ಪರ್ವ, ೧೭ ಸಂಧಿ, ೮ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಮಾತನ್ನು ಮುಂದುವರೆಸುತ್ತಾ, ಕೃಷ್ಣ ಈ ಹಿಂದೆ ನಿನಗೆ ಈ ದೇವತೆಗಳ ಬಿಲ್ಲೇಕೆ, ತೆಗೆ ಎಂದು ಯಾರು ಹೇಳುವರೋ ಅವರ ಪ್ರಾಣವನ್ನು ತೆಗೆಯುತ್ತೇನೆ ಎಂದು ಶಪಥಮಾಡಿದ್ದೆ. ಈಗ ಧರ್ಮಜನು ಈ ಮಾತನ್ನು ಹೇಳಿದ್ದಾನೆ, ನನ್ನ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ತನ್ನನ್ನು ಸಮರ್ಥಿಸಿಕೊಂಡನು.

ಅರ್ಥ:
ದೇವ: ಭಗವಂತ; ಪೂರ್ವ: ಈ ಹಿಂದೆ; ನುಡಿ: ಮಾತು; ಧನು: ಬಿಲ್ಲು; ಸಾದೃಶ್ಯ:ಹೋಲಿಕೆ; ತೆಗೆ: ಈಚೆಗೆ ತರು, ಹೊರತರು; ರೋಷ: ಕೋಪ; ನುಡಿ: ಮಾತು; ಜೀವ: ಬದುಕು, ಉಸಿರು; ಜಕ್ಕುಲಿಸು: ಗೇಲಿ, ಹಾಸ್ಯಮಾಡು; ವಚೋವಿಳಾಸ: ಮಾತಿನ ಸೌಂದರ್ಯ; ಕಾಯುವೆ: ಕಾಪಾಡು;

ಪದವಿಂಗಡಣೆ:
ದೇವ +ಪೂರ್ವದಲ್+ಎನ್ನ +ನುಡಿ +ಗಾಂ
ಡೀವವ್+ಏತಕೆ +ನಿನಗೆ +ನಿನಗೀ
ದೇವ+ಧನು+ ಸಾದೃಶ್ಯವೇ +ತೆಗೆ+ಯೆಂದು +ರೋಷದಲಿ
ಆವನೊಬ್ಬನು +ನುಡಿದನ್+ಆತನ
ಜೀವನವ+ ಜಕ್ಕುಲಿಸಿ+ ಎನ್ನ +ವ
ಚೋವಿಳಾಸವ +ಕಾಯ್ವೆನ್+ಎಂದೆನು +ಕೃಷ್ಣ +ಕೇಳೆಂದ

ಅಚ್ಚರಿ:
(೧) ಜೀವವನ್ನು ತೆಗೆಯುತ್ತೇನೆ ಎಂದು ಹೇಳಲು – ಜೀವನವ ಜಕ್ಕುಲಿಸಿ
(೨) ವಚೋವಿಳಾಸ – ಮಾತಿನ ಹಿರಿಮೆ – ಪದಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ