ಏನ ಹೇಳುವೆನೆನ್ನ ದಳದಲಿ
ತಾನು ಭೀಮನ ಥಟ್ಟಿನಲಿ ಬಳಿ
ಕೀ ನಕುಲ ಸಹದೇವ ಸಾತ್ಯಕಿ ದ್ರುಪದರೊಡ್ಡಿನಲಿ
ಮಾನನಿಧಿ ರಾಧೇಯನತ್ತಲು
ತಾನೆ ತನುಮಯವಾಯ್ತು ಪಾಂಡವ
ಸೇನ ಬಡ ಸಾಹಸಿಕರೆಣೆಯೇ ಸೂತತನಯಂಗೆ (ಕರ್ಣ ಪರ್ವ, ೧೬ ಸಂಧಿ, ೨೨ ಪದ್ಯ)
ತಾತ್ಪರ್ಯ:
ಅರ್ಜುನ ನಾನು ಏನೆಂದು ಹೇಳಲಿ, ನನ್ನ ಸೇನೆಯ ಜೊತೆ, ಭೀಮನ ಸೈನ್ಯದೆದುರು, ಸಹದೇವ, ಸಾತ್ಯಕಿ ದ್ರುಪದರ ದಳಗಳ ವಿರುದ್ಧ, ಎಲ್ಲಿ ನೋಡಿದರೂ ಅಲ್ಲಿ ಕರ್ಣನೇ ಕಾಣುತ್ತಿದ್ದನು, ಪಾಂಡವ ಸೇನೆಯ ಅಲ್ಪ ವೀರರು ಅವನಿಗೆ ಸರಿಸಮಾನರೇ ಎಂದು ಕರ್ಣನ ಪರಾಕ್ರಮವನ್ನು ಅರ್ಜುನನೆದುರು ಧರ್ಮಜನು ಹೇಳಿದ.
ಅರ್ಥ:
ಹೇಳು: ತಿಳಿಸು; ದಳ: ಸೈನ್ಯ; ಥಟ್ಟು: ಗುಂಪು; ಬಳಿಕ: ನಂತರ; ಒಡ್ಡು: ಸೈನ್ಯ, ಪಡೆ; ಮಾನ: ಮರ್ಯಾದೆ, ಗೌರವ; ನಿಧಿ: ಸಂಪತ್ತು; ರಾಧೇಯ: ಕರ್ಣ; ತನು: ದೇಹ; ಮಯ: ತುಂಬು; ಬಡ: ದುರ್ಬಲ; ಸಾಹಸಿಕ: ಪರಾಕ್ರಮಿ; ಎಣೆ: ಸಮಾನ; ಸೂತ: ರಥವನ್ನು ಓಡಿಸುವವ; ತನಯ: ಮಗ;
ಪದವಿಂಗಡಣೆ:
ಏನ +ಹೇಳುವೆನ್+ಎನ್ನ +ದಳದಲಿ
ತಾನು +ಭೀಮನ +ಥಟ್ಟಿನಲಿ +ಬಳಿ
ಕೀ+ ನಕುಲ +ಸಹದೇವ+ ಸಾತ್ಯಕಿ+ ದ್ರುಪದರ್+ಒಡ್ಡಿನಲಿ
ಮಾನನಿಧಿ +ರಾಧೇಯನ್+ಅತ್ತಲು
ತಾನೆ +ತನುಮಯವಾಯ್ತು +ಪಾಂಡವ
ಸೇನ+ ಬಡ+ ಸಾಹಸಿಕರ್+ಎಣೆಯೇ +ಸೂತತನಯಂಗೆ
ಅಚ್ಚರಿ:
(೧) ಸೂತತನಯ, ಮಾನನಿಧಿ, ರಾಧೇಯ – ಕರ್ಣನಿಗೆ ಬಳಸಿದ ಪದಗಳು
(೨) ದಳ, ಥಟ್ಟು, ಒಡ್ಡು – ಸಾಮ್ಯಾರ್ಥ ಪದಗಳು