ಪದ್ಯ ೧೬: ಅರ್ಜುನನು ಧರ್ಮಜನ ಬಳಿ ಏನು ಮಾಡುವೆನೆಂದು ಹೇಳಿದನು?

ಈಸು ಪರಿಯಲಿ ನಿಮ್ಮ ಚಿತ್ತದೊ
ಳಾಸರಾಯಿತೆ ನಮ್ಮ ದುಷ್ಕೃತ
ವಾಸನಾ ಫಲವೈಸಲೇ ತಾನಿದ್ದು ಫಲವೇನು
ಆ ಸುಯೋಧನ ವಿಗಡ ಭಟ ವಾ
ರಾಸಿಯನು ಮುಕ್ಕುಳಿಸುವೆನು ಧರ
ಣೀಶ ನಿಮ್ಮಡಿಯಾಣೆ ನೇವಮ ಕೊಂಡೆ ನಾನೆಂದ (ಕರ್ಣ ಪರ್ವ, ೧೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಒಡೆಯ ನಿಮ್ಮ ಮನಸ್ಸಿಗೆ ಇಷ್ಟೊಂದು ಬೇಸರವಾಯಿತೇ? ನಿಮಗೆ ಹೀಗಾದ ಮೇಲೆ ನಾನು ಇದ್ದೂ ಏನು ಬಂತು. ಇದೆಲ್ಲಾ ಪಾಪಕರ್ಮಗಳ ವಾಸನೆಯ ಫಲ. ಕುರುಸೇನೆಯ ವೀರರ ಸಮುದ್ರವನ್ನೇ ಮುಕ್ಕಳಿಸಿ ಉಗುಳುತ್ತೇನೆ, ನಿಮ್ಮಾಣೆ, ನನಗೆ ಅಪ್ಪಣೆ ನೀಡಿ ಎಂದು ಅರ್ಜುನನು ಹೇಳಿದನು.

ಅರ್ಥ:
ಈಸು: ಇಷ್ಟು; ಪರಿ: ರೀತಿ; ಚಿತ್ತ: ಮನಸ್ಸು; ಆಸರಾಗು: ಆಶ್ರಯವಾಗು; ದುಷ್ಕೃತ: ಕೆಟ್ಟ ಕೆಲಸ; ವಾಸನೆ: ಹಿಂದಿನ ಸ್ಮರಣೆಯಿಂದ ಉಂಟಾಗುವ ತಿಳಿವಳಿಕೆ; ಫಲ: ಪ್ರಯೋಜನ; ಐಸಲೇ:ಅಲ್ಲವೇ; ಇದ್ದು: ಉಳಿದು; ವಿಗಡ: ಶೌರ್ಯ, ಪರಾಕ್ರಮ; ಭಟ: ಸೈನಿಕ; ವಾರಾಸಿ: ಸಮುದ್ರ; ಮುಕ್ಕುಳಿಸು: ಚೆಲ್ಲು; ಧರಣೀಶ: ರಾಜ; ಆಣೆ: ಪ್ರಮಾಣ; ನೇಮ: ನಿಯಮ; ಕೊಂಡೆ: ತೆಗೆದುಕೊ;

ಪದವಿಂಗಡಣೆ:
ಈಸು+ ಪರಿಯಲಿ +ನಿಮ್ಮ +ಚಿತ್ತದೊಳ್
ಆಸರಾಯಿತೆ +ನಮ್ಮ +ದುಷ್ಕೃತ
ವಾಸನಾ+ ಫಲವೈಸಲೇ +ತಾನಿದ್ದು +ಫಲವೇನು
ಆ +ಸುಯೋಧನ +ವಿಗಡ +ಭಟ +ವಾ
ರಾಸಿಯನು +ಮುಕ್ಕುಳಿಸುವೆನು +ಧರ
ಣೀಶ +ನಿಮ್ಮಡಿಯಾಣೆ+ ನೇವಮ+ ಕೊಂಡೆ +ನಾನೆಂದ

ಅಚ್ಚರಿ:
(೧) ಅರ್ಜುನನು ಕುರುಸೇನೆಯನ್ನು ಸಂಹರಿಸುವ ಬಗೆ (ನೀರನ್ನು ಮುಕ್ಕುಳಿಸಿ ಹೊರಹಾಕುವ ಹಾಗೆ) ಉಪಮಾನದ ಪ್ರಯೋಗ – ಆ ಸುಯೋಧನ ವಿಗಡ ಭಟ ವಾರಾಸಿಯನು ಮುಕ್ಕುಳಿಸುವೆನು

ನಿಮ್ಮ ಟಿಪ್ಪಣಿ ಬರೆಯಿರಿ