ಪದ್ಯ ೧೫: ಅರ್ಜುನನು ಧರ್ಮಜನಿಗೆ ಏನು ಉತ್ತರವನ್ನು ನೀಡಿದನು?

ಜೀಯ ಖಾತಿಯಿದೇಕೆ ಕರ್ಣನ
ಕಾಯಿದುಳುಹಿದೆನೊಂದು ಬಾರಿ ವಿ
ಘಾತದಲಿ ಘಟ್ಟಿಸುವೆನೀಗಳೆ ಹಾಯ್ಕು ವೀಳೆಯವ
ರಾಯದಳಗಿಳವೆನ್ನ ಕೂಡೆ ನ
ವಾಯಿಯೇ ಕಲಿ ಕರ್ಣನಾಯುಷ
ಹೋಯಿತಿದೆಯೆಂದೊರಸಿದನು ವಾಮಾಂಘ್ರಿಯಲಿ ನೆಲನ (ಕರ್ಣ ಪರ್ವ, ೧೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಅರ್ಜುನನು ಧರ್ಮಜನಿಗೆ ಉತ್ತರಿಸುತ್ತಾ, ಒಡೆಯಾ ಏಕೆ ಕೋಪಗೊಳ್ಳುವೆ? ಒಂದು ಬಾರಿ ಅವನನ್ನು ಕಾದು ಜೀವಸಹಿತ ಬಿಟ್ಟಿದ್ದೇನೆ, ಈಗಲೇ ಹೋಗಿ ಬಡಿದು ಕೊಲ್ಲುತ್ತೇನೆ. ವೀಳೆಯವನ್ನು ಕೋಡು, ಶತ್ರು ಸೇನೆ ನನ್ನೆದಿರಿನಲ್ಲಿ ಏನು ಮಾಡೀತು? ಕರ್ಣನ ಆಯಸ್ಸು ಇದೋ ಮುಗಿಯಿತು ಎಂದು ಎಡಗಾಲಿನಲ್ಲಿ ನೆಲವನ್ನು ಘಟ್ಟಿಸಿದನು.

ಅರ್ಥ:
ಜೀಯ: ಒಡೆಯ; ಖಾತಿ: ಕೋಪ, ಕ್ರೋಧ; ಕಾಯಿದು: ಕಾದು, ಹೋರಾಡು; ಉಳುಹಿದೆ: ಉಳಿಸಿದೆ; ಬಾರಿ: ಸಲ, ಸರದಿ; ವಿಘಾಯ: ಗಾಯ, ಪೆಟ್ಟು; ಘಟ್ಟಿಸು: ಗಟ್ಟಿಯಾಗಿ ತುಳಿ, ಹೊಡೆ; ಹಾಯ್ಕು: ಹೊಡೆ; ವೀಳೆ: ತಾಂಬೂಲ; ರಾಯದಳ: ಸೈನ್ಯ; ಕೂಡೆ: ಜೊತೆ; ನವಾಯಿ: ಹೊಸರೀತಿ, ಠೀವಿ; ಕಲಿ: ಶೂರ; ಆಯುಷ: ಜೀವಿಸುವ ಕಾಲ; ಹೋಯಿತು: ಅಳಿ, ದೂರಹೋಗು; ಒರಸು: ಸಾರಿಸು, ನಾಶಮಾಡು; ವಮಾಂಘ್ರಿ: ಎಡಗಾಲಿನಲ್ಲಿ; ನೆಲ: ಭೂಮಿ;

ಪದವಿಂಗಡಣೆ:
ಜೀಯ +ಖಾತಿಯಿದೇಕೆ +ಕರ್ಣನ
ಕಾಯಿದುಳುಹಿದೆನ್+ಒಂದು +ಬಾರಿ +ವಿ
ಘಾತದಲಿ +ಘಟ್ಟಿಸುವೆನ್+ಈಗಳೆ +ಹಾಯ್ಕು +ವೀಳೆಯವ
ರಾಯದಳಗಿಳವ್+ಎನ್ನ +ಕೂಡೆ +ನ
ವಾಯಿಯೇ +ಕಲಿ +ಕರ್ಣನ್+ಆಯುಷ
ಹೋಯಿತಿದೆಯೆಂದ್+ಒರಸಿದನು +ವಾಮಾಂಘ್ರಿಯಲಿ +ನೆಲನ

ಅಚ್ಚರಿ:
(೧) ಅರ್ಜುನನ ಪರಾಕ್ರಮದ ನುಡಿ: ವಿಘಾತದಲಿ ಘಟ್ಟಿಸುವೆನೀಗಳೆ ಹಾಯ್ಕು ವೀಳೆಯವ

ನಿಮ್ಮ ಟಿಪ್ಪಣಿ ಬರೆಯಿರಿ