ಧರಣಿಪತಿ ಸಪ್ರಾಣನೇ ಗಜ
ಪುರದ ರಾಜ್ಯಕೆ ನಿಲಿಸುವೆನು ಮೇಣ್
ಸುರರೊಳಗೆ ಸಮ್ಮೇಳವೇ ಕುಂತೀಕುಮಾರಂಗೆ
ಅರೆಘಳಿಗೆ ಧರ್ಮಜನ ಬಿಟ್ಟಾ
ನಿರೆನು ಮುರಹರ ರಥವ ಮರಳಿಚು
ಮರಳಿಚೈ ರಥ ಮುಂಚುವುದೊ ಮನ ಮುಂಚುವುದೊ ಎಂದ (ಕರ್ಣ ಪರ್ವ, ೧೪ ಸಂಧಿ, ೧೨ ಪದ್ಯ)
ತಾತ್ಪರ್ಯ:
ಅರಸನು ಪ್ರಾಣದಿಂದಿದ್ದರೆ ಅವನಿಗೆ ಹಸ್ತಿನಾಪುರದ ದೊರೆಯ ಪಟ್ಟವನ್ನು ಕಟ್ಟುತ್ತೇನೆ, ಅವನೇನಾದರೂ ಸ್ವರ್ಗಸ್ತನಾದರೆ, ನಾನು ಅರ್ಧಗಳಿಗೆಯೂ ಜೀವಿಸಿರುವುದಿಲ್ಲ. ಕೃಷ್ಣ ರಥವನ್ನು ಹಿಂದಿರುಗಿಸು, ಹಿಂದಿರುಗಿಸು, ರಥ ಮುಂದೆ ಹೋಗುವುದೋ ಇಲ್ಲ ನನ್ನ ಮನಸ್ಸು ಮುಂದೆಹೋಗುವುದೋ ನೋಡಬೇಕು ಎಂದು ಅರ್ಜುನನು ಕೃಷ್ಣನಿಗೆ ಹೇಳಿದನು.
ಅರ್ಥ:
ಧರಣಿಪತಿ: ಭೂಮಿಯ ಒಡೆಯ, ರಾಜ; ಸಪ್ರಾಣ: ಜೀವಂತ; ಗಜಪುರ: ಹಸ್ತಿನಾಪುರ; ರಾಜ್ಯ: ರಾಷ್ಟ್ರ; ನಿಲುಸು: ತಡೆ; ಮೇಣ್: ಹಾಗೂ, ಮತ್ತು; ಸುರ: ದೇವತೆ; ಸಮ್ಮೇಳನ: ಗುಂಪು; ಅರೆಘಳಿಗೆ: ಒಂದು ಕ್ಷಣವೂ; ಬಿಟ್ಟಿರೆನು: ಬದುಕುವುದಿಲ್ಲ; ಮುರಹರ: ಮುರನೆಂಬ ರಾಕ್ಷಸನನ್ನು ಸಂಹಾರ ಮಾಡಿದವ (ಕೃಷ್ಣ); ಮರಳಿಚು: ಹಿಂದಿರುಗಿಸು; ಮುಂಚು: ಮುಂದೆ; ಮನ: ಮನಸ್ಸು; ರಥ: ಬಂಡಿ, ತೇರು;
ಪದವಿಂಗಡಣೆ:
ಧರಣಿಪತಿ +ಸಪ್ರಾಣನೇ +ಗಜ
ಪುರದ +ರಾಜ್ಯಕೆ +ನಿಲಿಸುವೆನು +ಮೇಣ್
ಸುರರೊಳಗೆ +ಸಮ್ಮೇಳವೇ +ಕುಂತೀಕುಮಾರಂಗೆ
ಅರೆಘಳಿಗೆ+ ಧರ್ಮಜನ +ಬಿಟ್ಟಾನ್
ಇರೆನು +ಮುರಹರ +ರಥವ+ ಮರಳಿಚು
ಮರಳಿಚೈ +ರಥ +ಮುಂಚುವುದೊ +ಮನ +ಮುಂಚುವುದೊ +ಎಂದ
ಅಚ್ಚರಿ:
(೧) ಮರಳಿಚು, ಮುಂಚುವುದೊ – ೨ ಬಾರಿ ಪ್ರಯೋಗ
(೨) ಸತ್ತರೆ ಎಂದು ಹೇಳಲು – ಸುರರೊಳಗೆ ಸಮ್ಮೇಳವೇ