ವಾಯದಲಿ ಕೌರವರ ವಿಜಯ
ಶ್ರೀಯ ಸೆರೆವೋಯಿತ್ತು ಶಿವ ಶಿವ
ಕಾಯಲಾಪವರಿಲ್ಲಲಾ ಗುರುಸೂನು ಮೊದಲಾದ
ನಾಯಕರು ದುಷ್ಕೀರ್ತಿ ನಾರಿಯ
ನಾಯಕರು ಸುಪಲಾಯನದ ನಿ
ರ್ಣಾಯಕರು ಮಝ ಪೂತುರೆಂದುದು ನಿಖಿಳ ಪರಿವಾರ (ಕರ್ಣ ಪರ್ವ, ೧೩ ಸಂಧಿ, ೪೭ ಪದ್ಯ)
ತಾತ್ಪರ್ಯ:
ಮೋಸದಲಿ ಕೌರವನ ವಿಜಯಲಕ್ಷ್ಮೀ ಸೆರೆಯಾದಳಲ್ಲಾ ಶಿವ ಶಿವಾ, ಕಾಪಾಡಬೇಕಾದ ಪರಾಕ್ರಮಿಗಳಾದ ಅಶ್ವತ್ಥಾಮ ಮೊದಲಾದ ನಾಯಕರು ಅಪಕೀರ್ತಿ ನಾರಿಯ ಒಡೆಯರಾದರಲ್ಲಾ! ಭಲೇ ಭೇಷ್ ಮೊದಲೇ ಇವರೆಲ್ಲರೂ ತಮ್ಮ ಕೈಲಾಗದೆಂದು ನಿರ್ಣಯಿಸಿ ಪಲಾಯನ ಮಾಡಿದರು ಎಂದು ಕೌರವರ ಸೈನ್ಯದ ಪರಿವಾರದವರು ವ್ಯಥೆಪಟ್ಟರು.
ಅರ್ಥ:
ವಾಯ: ಕಾರಣ, ಸುಳ್ಳು, ಮೋಸ; ವಿಜಯ: ಗೆಲುವು, ಜಯ; ಶ್ರೀ: ಲಕ್ಷ್ಮಿ; ಸೆರೆ: ಬಂಧನ; ಕಾಯಲು: ಕಾಪಾಡಲು; ಕಾಯಲಾಪು: ಕಾಯಲು ಶಕ್ತನಾಗು; ಗುರುಸೂನು: ಆಚಾರ್ಯರ ಮಗ (ಅಶ್ವತ್ಥಾಮ); ಮೊದಲಾದ: ಮುಂತಾದ; ನಾಯಕ: ಒಡೆಯ; ದುಷ್ಕೀರ್ತಿ: ಅಪಖ್ಯಾತಿ; ನಾರಿ: ಹೆಣ್ಣು; ಸುಪಲಾಯನ: ಓಡಿಹೋಗು; ನಿರ್ಣಾಯಕ: ನಿರ್ಧಾರ ಮಾಡುವ; ಮಝ: ಭಲೆ; ಪೂತು: ಪಾಯ್ಕು, ಭೇಷ್; ನಿಖಿಳ: ಎಲ್ಲಾ; ಪರಿವಾರ: ಸುತ್ತಲಿನವರು, ಪರಿಜನ;
ಪದವಿಂಗಡಣೆ:
ವಾಯದಲಿ +ಕೌರವರ +ವಿಜಯ
ಶ್ರೀಯ +ಸೆರೆವೋಯಿತ್ತು +ಶಿವ+ ಶಿವ
ಕಾಯಲಾಪವರ್+ಇಲ್ಲಲಾ +ಗುರುಸೂನು +ಮೊದಲಾದ
ನಾಯಕರು +ದುಷ್ಕೀರ್ತಿ +ನಾರಿಯ
ನಾಯಕರು+ ಸುಪಲಾಯನದ +ನಿ
ರ್ಣಾಯಕರು+ ಮಝ +ಪೂತುರೆಂದುದು +ನಿಖಿಳ+ ಪರಿವಾರ
ಅಚ್ಚರಿ:
(೧) ನಾಯಕರನ್ನು ವಿವರಿಸುವ ಬಗೆ – ನಾಯಕರು ದುಷ್ಕೀರ್ತಿ ನಾರಿಯ ನಾಯಕರು ಸುಪಲಾಯನದ ನಿರ್ಣಾಯಕರು ಮಝ