ಪದ್ಯ ೪೭: ಕೌರವ ಸೈನ್ಯ ಏಕೆ ದುಃಖಿಸಿತು?

ವಾಯದಲಿ ಕೌರವರ ವಿಜಯ
ಶ್ರೀಯ ಸೆರೆವೋಯಿತ್ತು ಶಿವ ಶಿವ
ಕಾಯಲಾಪವರಿಲ್ಲಲಾ ಗುರುಸೂನು ಮೊದಲಾದ
ನಾಯಕರು ದುಷ್ಕೀರ್ತಿ ನಾರಿಯ
ನಾಯಕರು ಸುಪಲಾಯನದ ನಿ
ರ್ಣಾಯಕರು ಮಝ ಪೂತುರೆಂದುದು ನಿಖಿಳ ಪರಿವಾರ (ಕರ್ಣ ಪರ್ವ, ೧೩ ಸಂಧಿ, ೪೭ ಪದ್ಯ)

ತಾತ್ಪರ್ಯ:
ಮೋಸದಲಿ ಕೌರವನ ವಿಜಯಲಕ್ಷ್ಮೀ ಸೆರೆಯಾದಳಲ್ಲಾ ಶಿವ ಶಿವಾ, ಕಾಪಾಡಬೇಕಾದ ಪರಾಕ್ರಮಿಗಳಾದ ಅಶ್ವತ್ಥಾಮ ಮೊದಲಾದ ನಾಯಕರು ಅಪಕೀರ್ತಿ ನಾರಿಯ ಒಡೆಯರಾದರಲ್ಲಾ! ಭಲೇ ಭೇಷ್ ಮೊದಲೇ ಇವರೆಲ್ಲರೂ ತಮ್ಮ ಕೈಲಾಗದೆಂದು ನಿರ್ಣಯಿಸಿ ಪಲಾಯನ ಮಾಡಿದರು ಎಂದು ಕೌರವರ ಸೈನ್ಯದ ಪರಿವಾರದವರು ವ್ಯಥೆಪಟ್ಟರು.

ಅರ್ಥ:
ವಾಯ: ಕಾರಣ, ಸುಳ್ಳು, ಮೋಸ; ವಿಜಯ: ಗೆಲುವು, ಜಯ; ಶ್ರೀ: ಲಕ್ಷ್ಮಿ; ಸೆರೆ: ಬಂಧನ; ಕಾಯಲು: ಕಾಪಾಡಲು; ಕಾಯಲಾಪು: ಕಾಯಲು ಶಕ್ತನಾಗು; ಗುರುಸೂನು: ಆಚಾರ್ಯರ ಮಗ (ಅಶ್ವತ್ಥಾಮ); ಮೊದಲಾದ: ಮುಂತಾದ; ನಾಯಕ: ಒಡೆಯ; ದುಷ್ಕೀರ್ತಿ: ಅಪಖ್ಯಾತಿ; ನಾರಿ: ಹೆಣ್ಣು; ಸುಪಲಾಯನ: ಓಡಿಹೋಗು; ನಿರ್ಣಾಯಕ: ನಿರ್ಧಾರ ಮಾಡುವ; ಮಝ: ಭಲೆ; ಪೂತು: ಪಾಯ್ಕು, ಭೇಷ್; ನಿಖಿಳ: ಎಲ್ಲಾ; ಪರಿವಾರ: ಸುತ್ತಲಿನವರು, ಪರಿಜನ;

ಪದವಿಂಗಡಣೆ:
ವಾಯದಲಿ +ಕೌರವರ +ವಿಜಯ
ಶ್ರೀಯ +ಸೆರೆವೋಯಿತ್ತು +ಶಿವ+ ಶಿವ
ಕಾಯಲಾಪವರ್+ಇಲ್ಲಲಾ +ಗುರುಸೂನು +ಮೊದಲಾದ
ನಾಯಕರು +ದುಷ್ಕೀರ್ತಿ +ನಾರಿಯ
ನಾಯಕರು+ ಸುಪಲಾಯನದ +ನಿ
ರ್ಣಾಯಕರು+ ಮಝ +ಪೂತುರೆಂದುದು +ನಿಖಿಳ+ ಪರಿವಾರ

ಅಚ್ಚರಿ:
(೧) ನಾಯಕರನ್ನು ವಿವರಿಸುವ ಬಗೆ – ನಾಯಕರು ದುಷ್ಕೀರ್ತಿ ನಾರಿಯ ನಾಯಕರು ಸುಪಲಾಯನದ ನಿರ್ಣಾಯಕರು ಮಝ

ನಿಮ್ಮ ಟಿಪ್ಪಣಿ ಬರೆಯಿರಿ