ಪದ್ಯ ೩೫: ಕರ್ಣನು ಮೆಲ್ಲನೆ ಯಾರ ಎದುರು ಯುದ್ಧಮಾಡಲು ಹೋದನು?

ಮತ್ತೆ ಜೋಡಿಸಿ ಕೌರವೇಂದ್ರನ
ನೊತ್ತಲಿಕ್ಕೆ ಮಹಾರಥರು ರಿಪು
ಮತ್ತದಂತಿಯ ಕೆಣಕಿದರು ಕೆದರಿದರು ಮಾರ್ಗಣವ
ಎತ್ತಲವನೀಪತಿಯ ಮೋಹರ
ವತ್ತ ಮೆಲ್ಲನೆ ರಥವ ಬಿಟ್ಟನು
ಮತ್ತೆ ಮೂದಲಿಸಿದನು ಯಮಸೂನುವನು ಕಲಿಕರ್ಣ (ಕರ್ಣ ಪರ್ವ, ೧೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಪುನಃ ಅವರೆಲ್ಲರೂ ಒಟ್ಟುಗೂಡಿ, ಕೌರವನನ್ನು ಅತ್ತನಿಲ್ಲಿಸಿ ಭೀಮನೆಂಬ ಮದದಾನೆಯನ್ನು ಬಾಣಗಳಿಂದ ಕೆಣಕಿದರು. ಕರ್ಣನು ಈ ಕೋಲಾಹಲದ ಮಧ್ಯೆ ನಿಧಾನವಾಗಿ ಮತ್ತೆ ಧರ್ಮಜನ ಎದುರು ಹೋಗಿ ಅವನನ್ನು ತಡೆದು ಮೂದಲಿಸಿದನು.

ಅರ್ಥ:
ಮತ್ತೆ: ಪುನಃ; ಜೋಡಿಸು: ಸೇರಿಸು; ಒತ್ತು: ಆಕ್ರಮಿಸು, ಮುತ್ತು; ಮಹಾರಥ: ಪರಾಕ್ರಮಿ; ರಿಪು: ವೈರಿ; ಮತ್ತದಂತಿ: ಮದದಾನೆ; ಕೆಣಕು: ರೇಗಿಸು; ಕೆದರು: ಹರಡು; ಮಾರ್ಗಣ:ಬಾಣ, ಅಂಬು; ಅವನೀಪತಿ: ರಾಜ; ಮೋಹರ: ಯುದ್ಧ; ಮೆಲ್ಲನೆ: ನಿಧಾನ; ರಥ: ಬಂಡಿ; ಬಿಟ್ಟನು: ತೆಗೆದನು; ಮೂದಲಿಸು: ಹಂಗಿಸು; ಯಮಸೂನು: ಯಮನ ಮಗ (ಧರ್ಮರಾಯ); ಕಲಿ: ಶೂರ;

ಪದವಿಂಗಡಣೆ:
ಮತ್ತೆ +ಜೋಡಿಸಿ +ಕೌರವೇಂದ್ರನನ್
ಒತ್ತಲಿಕ್ಕೆ +ಮಹಾರಥರು +ರಿಪು
ಮತ್ತದಂತಿಯ +ಕೆಣಕಿದರು +ಕೆದರಿದರು +ಮಾರ್ಗಣವ
ಎತ್ತಲ್+ಅವನೀಪತಿಯ+ ಮೋಹರವ್
ಅತ್ತ +ಮೆಲ್ಲನೆ +ರಥವ +ಬಿಟ್ಟನು
ಮತ್ತೆ +ಮೂದಲಿಸಿದನು+ ಯಮಸೂನುವನು+ ಕಲಿ+ಕರ್ಣ

ಅಚ್ಚರಿ:
(೧) ಭೀಮನನ್ನು ಮತ್ತದಂತಿ ಎಂದು ಕರೆದಿರುವುದು
(೨) ಮತ್ತೆ – ೧, ೬ ಸಾಲಿನ ಮೊದಲ ಪದ
(೩) ಮತ್ತ, ಅತ್ತ, ಎತ್ತ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ