ಮತ್ತೆ ಜೋಡಿಸಿ ಕೌರವೇಂದ್ರನ
ನೊತ್ತಲಿಕ್ಕೆ ಮಹಾರಥರು ರಿಪು
ಮತ್ತದಂತಿಯ ಕೆಣಕಿದರು ಕೆದರಿದರು ಮಾರ್ಗಣವ
ಎತ್ತಲವನೀಪತಿಯ ಮೋಹರ
ವತ್ತ ಮೆಲ್ಲನೆ ರಥವ ಬಿಟ್ಟನು
ಮತ್ತೆ ಮೂದಲಿಸಿದನು ಯಮಸೂನುವನು ಕಲಿಕರ್ಣ (ಕರ್ಣ ಪರ್ವ, ೧೩ ಸಂಧಿ, ೩೫ ಪದ್ಯ)
ತಾತ್ಪರ್ಯ:
ಪುನಃ ಅವರೆಲ್ಲರೂ ಒಟ್ಟುಗೂಡಿ, ಕೌರವನನ್ನು ಅತ್ತನಿಲ್ಲಿಸಿ ಭೀಮನೆಂಬ ಮದದಾನೆಯನ್ನು ಬಾಣಗಳಿಂದ ಕೆಣಕಿದರು. ಕರ್ಣನು ಈ ಕೋಲಾಹಲದ ಮಧ್ಯೆ ನಿಧಾನವಾಗಿ ಮತ್ತೆ ಧರ್ಮಜನ ಎದುರು ಹೋಗಿ ಅವನನ್ನು ತಡೆದು ಮೂದಲಿಸಿದನು.
ಅರ್ಥ:
ಮತ್ತೆ: ಪುನಃ; ಜೋಡಿಸು: ಸೇರಿಸು; ಒತ್ತು: ಆಕ್ರಮಿಸು, ಮುತ್ತು; ಮಹಾರಥ: ಪರಾಕ್ರಮಿ; ರಿಪು: ವೈರಿ; ಮತ್ತದಂತಿ: ಮದದಾನೆ; ಕೆಣಕು: ರೇಗಿಸು; ಕೆದರು: ಹರಡು; ಮಾರ್ಗಣ:ಬಾಣ, ಅಂಬು; ಅವನೀಪತಿ: ರಾಜ; ಮೋಹರ: ಯುದ್ಧ; ಮೆಲ್ಲನೆ: ನಿಧಾನ; ರಥ: ಬಂಡಿ; ಬಿಟ್ಟನು: ತೆಗೆದನು; ಮೂದಲಿಸು: ಹಂಗಿಸು; ಯಮಸೂನು: ಯಮನ ಮಗ (ಧರ್ಮರಾಯ); ಕಲಿ: ಶೂರ;
ಪದವಿಂಗಡಣೆ:
ಮತ್ತೆ +ಜೋಡಿಸಿ +ಕೌರವೇಂದ್ರನನ್
ಒತ್ತಲಿಕ್ಕೆ +ಮಹಾರಥರು +ರಿಪು
ಮತ್ತದಂತಿಯ +ಕೆಣಕಿದರು +ಕೆದರಿದರು +ಮಾರ್ಗಣವ
ಎತ್ತಲ್+ಅವನೀಪತಿಯ+ ಮೋಹರವ್
ಅತ್ತ +ಮೆಲ್ಲನೆ +ರಥವ +ಬಿಟ್ಟನು
ಮತ್ತೆ +ಮೂದಲಿಸಿದನು+ ಯಮಸೂನುವನು+ ಕಲಿ+ಕರ್ಣ
ಅಚ್ಚರಿ:
(೧) ಭೀಮನನ್ನು ಮತ್ತದಂತಿ ಎಂದು ಕರೆದಿರುವುದು
(೨) ಮತ್ತೆ – ೧, ೬ ಸಾಲಿನ ಮೊದಲ ಪದ
(೩) ಮತ್ತ, ಅತ್ತ, ಎತ್ತ – ಪ್ರಾಸ ಪದಗಳು