ಪದ್ಯ ೩೧: ಭೀಮನು ಏನು ಯೋಚಿಸಿ ಕರ್ಣನನ್ನು ನಿಲ್ಲಿಸಲು ಎದುರಾದನು?

ಆಳಲಿಸಿದನೇ ಧರ್ಮಪುತ್ರನ
ಬಳಿಚಿ ಬಿಟ್ಟೆನು ನಾಯ ಕೊಲ್ಲದೆ
ಕಳುಹಿದರೆ ಬೆಂಬಿಡನಲಾ ಮರುಕೊಳಿಸಿ ಮರುಕೊಳಿಸಿ
ತಲೆ ಕೊರಳ ಸಂಪ್ರತಿಗೆ ಭೇದವ
ಬಳಸಿದರೆ ಸಾಕೈಸಲೇ ಎನು
ತುಲಿದು ಕಣೆಗಳ ಕೆದರಿ ಕರ್ಣನ ತರುಬಿದನು ಭೀಮ (ಕರ್ಣ ಪರ್ವ, ೧೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಈ ಕರ್ಣನು ಮತ್ತೆ ಅಣ್ಣನನ್ನು ಅಳಲಿಸುತ್ತಿದ್ದಾನೆ, ಈ ನಾಯನ್ನು ಕೊಲ್ಲದೆ ಕೈ ಬಿಟ್ಟರೆ ಅಣ್ಣನಿಗೆ ಮತ್ತೆ ಮತ್ತೆ ತೊಂದರೆ ಕೊಡುತ್ತಿದ್ದಾನೆ, ಇವನ ತಲೆ ಮತ್ತು ಕೊರಳಿನ ಸಂಧಿಯನ್ನು ತಪ್ಪಿಸಿದರೆ ಸಾಕು ಎಂದುಕೊಂಡು ಭೀಮನು ಆರ್ಭಟಿಸುತ್ತಾ ಕರ್ಣನನ್ನು ಬಾಣಗಳಿಂದ ತಡೆದನು.

ಅರ್ಥ:
ಅಳಲು: ದುಃಖ; ಧರ್ಮಪುತ್ರ: ಯುಧಿಷ್ಠಿರ; ಬಳಿಚು: ಕತ್ತರಿಸು; ಬಿಟ್ಟೆ: ಬಿಡು; ನಾಯ: ಶ್ವಾನ; ಕೊಲ್ಲು: ಸಾಯಿಸು; ಕಳುಹು: ಹಿಂದಿರುಗು; ಬೆಂಬಿಡು: ಹಿಂಬಾಲಿಸದಿರು; ಮರುಕೊಳಿಸು: ಪುನಃ ಕಾಣಿಸಿಕೊಳ್ಳು;ತಲೆ: ಶಿರ; ಕೊರಳು: ಕತ್ತು; ಸಂಪ್ರತಿ:ತಕ್ಷಣ; ಭೇದ: ಮುರಿಯುವುದು; ಬಳಸು: ಉಪಯೋಗಿಸು; ಸಾಕು: ನಿಲ್ಲಿಸು; ಐಸಲೇ: ಅಲ್ಲವೇ; ಉಲಿ: ಧ್ವನಿ; ಕಣೆ: ಬಾಣ; ಕೆದರು: ಹರಡು; ತರುಬು:ತಡೆ, ನಿಲ್ಲಿಸು;

ಪದವಿಂಗಡಣೆ:
ಆಳಲಿಸಿದನೇ +ಧರ್ಮಪುತ್ರನ
ಬಳಿಚಿ +ಬಿಟ್ಟೆನು +ನಾಯ +ಕೊಲ್ಲದೆ
ಕಳುಹಿದರೆ+ ಬೆಂಬಿಡನಲಾ+ ಮರುಕೊಳಿಸಿ+ ಮರುಕೊಳಿಸಿ
ತಲೆ +ಕೊರಳ +ಸಂಪ್ರತಿಗೆ +ಭೇದವ
ಬಳಸಿದರೆ+ ಸಾಕ್+ಐಸಲೇ +ಎನುತ್
ಉಲಿದು +ಕಣೆಗಳ +ಕೆದರಿ+ ಕರ್ಣನ +ತರುಬಿದನು +ಭೀಮ

ಅಚ್ಚರಿ:
(೧) ಕ ಅಕ್ಷರದ ತ್ರಿವಳಿ ಪದ – ಕಣೆಗಳ ಕೆದರಿ ಕರ್ಣನ
(೨) ಕರ್ಣನನ್ನು ಕೋಪದಿಂದ ನಾಯ ಎಂದು ಭೀಮನು ಕರೆಯುವುದು
(೩) ಕೊಲ್ಲುವೆನೆಂದು ಹೇಳಲು – ತಲೆ ಕೊರಳ ಸಂಪ್ರತಿಗೆ ಭೇದವ ಬಳಸಿದರೆ ಸಾಕೈಸಲೇ

ನಿಮ್ಮ ಟಿಪ್ಪಣಿ ಬರೆಯಿರಿ