ಪದ್ಯ ೨೮: ಕರ್ಣನು ಭೀಮನನ್ನು ಬಿಟ್ಟು ಯಾರ ಮುಂದೆ ಯುದ್ಧಕ್ಕೆ ನಿಂತನು?

ಮುರಿಯೆ ಪಡಿಬಲವಾಕೆಯಲಿ ಬಿಡೆ
ಜರೆದು ಬಿಟ್ಟನು ರಥವ ಭೀಮನ
ಬಿರುಬ ಕೊಳ್ಳದೆ ನೂಕಿದನು ಧರ್ಮಜನ ಸಮ್ಮುಖಕೆ
ಇರಿತಕಂಜದಿರಂಜದಿರು ಕೈ
ಮರೆಯದಿರು ಕಲಿಯಾಗೆನುತ ಬೊ
ಬ್ಬಿರಿದು ಧಾಳಾಧೂಳಿಯಲಿ ತಾಗಿದನು ಕಲಿಕರ್ಣ (ಕರ್ಣ ಪರ್ವ, ೧೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ವೈರಿ ಸೈನ್ಯವು ನಾಶವಾಗುತ್ತಿರಲು, ಕೌರವರ ಸೈನ್ಯದ ಮೇಲೆ ಭೀಮನ ರೌದ್ರನರ್ತನವನ್ನು ಗಮನಿಸದೆ, ಕರ್ಣನು ಧರ್ಮಜನ ಕಡೆಗೆ ತನ್ನ ರಥವನ್ನು ತಿರುಗಿಸಿ ಧರ್ಮಜನೆದುರು ಬಂದು, ಯುದ್ಧಕ್ಕೆ ಅಂಜಬೇಡ, ನಿನ್ನ ಕೈಚಳಕವನ್ನು ತೋರಿಸು, ಶೂರನಾಗು ಎಂದು ಗರ್ಜಿಸುತ್ತಾ ರಣರಂಗದಲ್ಲಿ ವಿಪ್ಲವವನ್ನೆಬ್ಬಿಸಿದನು.

ಅರ್ಥ:
ಮುರಿ: ಸೀಳು; ಪಡಿಬಲ: ವೈರಿಸೈನ್ಯ; ಜರುಹು: ಜರುಗಿಸು; ಬಿರು: ಬಿರುಸಾದುದು; ಬಿರುಬು: ಆವೇಶ; ರಥ: ಬಂಡಿ; ನೂಕು: ತಳ್ಳು; ಸಮ್ಮುಖ: ಎದುರು; ಇರಿ: ಚುಚ್ಚು; ಅಂಜು: ಹೆದರು; ಕೈ: ಹಸ್ತ; ಮರೆ: ಜ್ಞಾಪಕದಿಂದ ದೂರವುಳಿ; ಕಲಿ: ಶೂರ; ಬೊಬ್ಬೆ: ಗರ್ಜಿಸು; ಧಾಳಾಧೂಳಿ: ವಿಪ್ಲವ, ಚೆಲ್ಲಾಪಿಲ್ಲಿಯಾಗು; ತಾಗು: ಮುಟ್ಟು; ಕಲಿ: ಶೂರ;

ಪದವಿಂಗಡಣೆ:
ಮುರಿಯೆ +ಪಡಿಬಲವಾಕೆಯಲಿ +ಬಿಡೆ
ಜರೆದು +ಬಿಟ್ಟನು +ರಥವ +ಭೀಮನ
ಬಿರುಬ+ ಕೊಳ್ಳದೆ+ ನೂಕಿದನು +ಧರ್ಮಜನ +ಸಮ್ಮುಖಕೆ
ಇರಿತಕ್+ಅಂಜದಿರ್+ಅಂಜದಿರು +ಕೈ
ಮರೆಯದಿರು +ಕಲಿಯಾಗ್+ಎನುತ +ಬೊ
ಬ್ಬಿರಿದು +ಧಾಳಾಧೂಳಿಯಲಿ +ತಾಗಿದನು +ಕಲಿಕರ್ಣ

ಅಚ್ಚರಿ:
(೧) ಅಂಜದಿರು; ಧಾಳಾಧೂಳಿ – ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ